ಧರ್ಮಸ್ಥಳ: ಕಳೆದ ಕೆಲ ದಿನಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಯೂಟ್ಯೂಬ್, ಫೇಸ್ಬುಕ್ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ತೀರಾ ಅವಹೇಳನಕಾರಿಯಾದ ಆಧಾರರಹಿತ ಮಾಹಿತಿಗಳು ಹರಿದಾಡುತ್ತಿದ್ದು ಇದರಿಂದ ನಮ್ಮ ಗ್ರಾಮದ ಘನತೆಗೆ ಹಾನಿಯಾಗಿದೆ. ಇಲ್ಲಿ ಮುಖ್ಯವಾಗಿ ಸೌಜನ್ಯಾ ಪ್ರಕರಣ ಮುಂದಿರಿಸಿ, ಕ್ಷೇತ್ರದ ತೇಜೋವಧೆ ಮಾಡಲಾಗುತ್ತಿದೆ. ನಾವು ಮತ್ತೆ ಮತ್ತೆ ಹೇಳ್ತವೆ ‘ಸೌಜನ್ಯಾ ಪ್ರಕರಣಕ್ಕೂ ಕ್ಷೇತ್ರಕ್ಕೂ ಯಾವುದೇ ಸಂಬಂಧವಿಲ್ಲ. ವಿನಾಕಾರಣ ಪೂರ್ವಾಗ್ರಹಪೀಡಿತರಾಗಿ ಕೆಲ ಸ್ಥಾಪಿತ ಹಿತಾಸಕ್ತಿಗಳು ಸೌಜನ್ಯಾ ಪ್ರಕರಣದಲ್ಲಿ ಕ್ಷೇತ್ರದ ತೇಜೋವಧೆ ಮಾಡುತ್ತಿದ್ದಾರೆ. ಇವರ ಈ ಕುಕೃತ್ಯ ಧರ್ಮಸ್ಥಳ ಗ್ರಾಮದವರಾದ ನಮಗೂ ಮುಜುಗರ ತರುವಂತೆ ಮಾಡಿದೆ. ಸೌಜನ್ಯಾ ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ನಾವು ಧರ್ಮಸ್ಥಳ ಗ್ರಾಮದ ನಿವಾಸಿಗರು ಆರಂಭದಿಂದಲೂ ಆಗ್ರಹಿಸುತ್ತಾ ಬಂದಿದ್ದೇವೆ. ಆದರೆ ಇದೇ ವಿಚಾರವನ್ನು ಮುಂದಿಟ್ಟು ಸಂವಿಧಾನ ಬಾಹಿರವಾಗಿ ಕ್ಷೇತ್ರದ ತೇಜೋವಧೆ ಮಾಡುವುದನ್ನು ನಾವು ಧರ್ಮಸ್ಥಳ ಗ್ರಾಮಸ್ಥರು ಉಗ್ರವಾಗಿ ಖಂಡಿಸುತ್ತೇವೆ ಎಂದು ಧರ್ಮಸ್ಥಳ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಕೇಶವ ಗೌಡ ಧರ್ಮಸ್ಥಳ ಹೇಳಿದರು.
ಅವರು ಮಾ.25 ರಂದು ನೇತ್ರಾವತಿ ಹೋಟೆಲ್ ಪಾರಿಜಾತದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ನಾವು ಧರ್ಮಸ್ಥಳ ಗ್ರಾಮಸ್ಥರು ಹೇಳುವುದಿಷ್ಟೇ, ಸೂಕ್ತ ಸಾಕ್ಷಾಧಾರಗಳಿಲ್ಲದೇ ಮನಬಂದಂತೆ ಮಾತನಾಡಿ, ಸುಳ್ಳು ಆರೋಪ ಹೊರಿಸಿ, ಕ್ಷೇತ್ರದ ಮಾನಹಾನಿ ಮಾಡುವ ಮೂಲಕ ಧರ್ಮಸ್ಥಳ ಗ್ರಾಮದ ನಿವಾಸಿಗಳಿಗೆ ಮುಜುಗರ ತರುತ್ತಿರುವ ಸ್ಥಾಪಿತ ಹಿತಾಸಕ್ತಿಗಳ ವಿರುದ್ಧವೂ ಅಗತ್ಯ ಕಾನೂನು ಕ್ರಮವಾಗಬೇಕು. ಸರಕಾರದ ಮುಂದೆ ಈ ಆಗ್ರಹವನ್ನು ಮುಂದಿರಿಸಿ ಮಾ..27 ರಂದು ಬೆಳಿಗ್ಗೆ 10 ಗಂಟೆಗೆ ನಮ್ಮ ಗ್ರಾಮವಾದ ಧರ್ಮಸ್ಥಳದಲ್ಲೇ ಒಂದು ದಿನದ ಹರತಾಳ ಮತ್ತು ಪ್ರತಿಭಟನಾ ಸಭೆ ನಡೆಸಲಿದ್ದೇವೆ. ಗುರುವಾರದಿಂದ ನಡೆಯುವ ಸಭೆಯು ಸಾಂಕೇತಿಕ ಮತ್ತು ಪ್ರಾರಂಭ. ಇನ್ನು ಮುಂದೆ ಯಾರೇ ಧರ್ಮಸ್ಥಳ ಗ್ರಾಮ, ಕ್ಷೇತ್ರದ ಬಗ್ಗೆ ಅವಹೇಳನೆ ಷಡ್ಯಂತ್ರಗಳನ್ನು ಮಾಡಿದಲ್ಲಿ ಯಾವ ಬೆಲೆ ತೆತ್ತಾದರೂ ನಮ್ಮ ಗ್ರಾಮದ ನಮ್ಮ ಕ್ಷೇತ್ರದ ಗೌರವ ಘನತೆ, ಉಳಿಸುವಲ್ಲಿ ಬದ್ಧರಾಗಿದ್ದೇವೆ, ಸಿದ್ಧರಾಗಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಧರ್ಮಸ್ಥಳ ಹಿತರಕ್ಷಣ ವೇದಿಕೆಯ ಕಾರ್ಯದರ್ಶಿ ಧನಕೀರ್ತಿ ಅರಿಗ, ಕೋಶಾಧಿಕಾರಿ ಶ್ರೀನಿವಾಸ್ ರಾವ್,ಧರ್ಮಸ್ಥಳ ಗ್ರಾ.ಪಂ ಅಧ್ಯಕ್ಷೆ ವಿಮಲಾ, ಪಂಚಾಯತ್ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಧರ್ಮಸ್ಥಳ ಸಿಎ ಬ್ಯಾಂಕ್ ಅಧ್ಯಕ್ಷ ಪ್ರೀತಮ್ ಡಿ, ಉಪಾಧ್ಯಕ್ಷ ಅಜಿತ್ ಜೈನ್, ವರ್ತಕರ ಸಂಘದ ಪ್ರತಿನಿಧಿ ಭವಾನಿ ಶಂಕರ್ ರಾವ್, ವಾಹನ ಮಾಲಕ ಚಾಲಕ ಸಂಘದ ಪ್ರತಿನಿಥಿ ನೀಲಕಂಠ ಶೆಟ್ಟಿ,ಯುವ ಉದ್ಯಮಿಗಳಾದ ಅಖೀಲೇಶ್, ಶೃತಾಂಜನ್ ಜೈನ್ ಉಪಸ್ಥಿತರಿದ್ದರು.