ಬೆಳ್ತಂಗಡಿ: ಲಾಯಿಲ ಪ್ರಸನ್ನ ಫಾರ್ಮಸಿ ಕಾಲೇಜಿನಲ್ಲಿ”ಪ್ರಚಲಿತ ಉತ್ತಮ ಉತ್ಪಾದನಾ ಅಭ್ಯಾಸಗಳು” ನಿಯಂತ್ರಣ ವ್ಯವಹಾರಗಳ ಕುರಿತಾದ ವಿಚಾರಗೋಷ್ಠಿಯನ್ನು ಇತ್ತೀಚೆಗೆ ಯಶಸ್ವಿಯಾಗಿ ಆಯೋಜಿಸಲಾಯಿತು.
ಈ ವಿಚಾರಗೋಷ್ಠಿಯ ಮುಖ್ಯ ಉದ್ದೇಶವು ಔಷಧಿ ಉತ್ಪಾದನೆಗೆ ಸಂಬಂಧಿಸಿದ ಗುಣಮಟ್ಟದ ನಿಯಂತ್ರಣ, ಸುರಕ್ಷತೆ, ನಿಯಮಗಳು ಹಾಗೂ ಕಾರ್ಯವಿಧಾನಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದಾಗಿತ್ತು.
ಕಾರ್ಯಕ್ರಮದ ಸಂಪನ್ಮೂಲರಾದ ರಾಮಚಂದ್ರ ಗಾಣಿಗರವರು, cGMPಯ ಅವಶ್ಯಕತೆ, ಅದರ ತತ್ವಗಳು, ಪ್ರಕ್ರಿಯೆಗಳ ಮಾನ್ಯತೆ ಮತ್ತು ಅನುಷ್ಠಾನ ಕ್ರಮಗಳು ಬಗ್ಗೆ ಸುಲಭ, ಸುಂದರ ಹಾಗೂ ಪರಿಣಾಮಕಾರಿ ರೀತಿಯಲ್ಲಿ ಮಾಹಿತಿ ನೀಡಿದರು. ಔಷಧಿ ಉತ್ಪಾದನೆಯಲ್ಲಿ ಗುಣಮಟ್ಟ ನಿಯಂತ್ರಣ ಮತ್ತು ದೃಢೀಕರಣ, ಉತ್ಪಾದನಾ ಘಟಕದ ಸ್ವಚ್ಚತೆ, ಸುರಕ್ಷತಾ ನಿಯಮಗಳು ಮತ್ತು ಡಾಕ್ಯುಮೆಂಟೇಶನ್ ಪ್ರಕ್ರಿಯೆಗಳು, ಹೊಸ ತಂತ್ರಜ್ಞಾನಗಳ ಬಳಕೆ ಮತ್ತು ಅಂತರಾಷ್ಟ್ರೀಯ ಮಾನದಂಡಗಳು ಇಂತಹ ಹಲವು ಅಗತ್ಯ ಮಾಹಿತಿಗಳಿಂದ ಕೂಡಿದ್ದ ವಿಚಾರ ಗೋಷ್ಠಿಯು ವಿದ್ಯಾರ್ಥಿಗಳಿಗೆ ಜ್ಞಾನದಾಯಕವಾಗಿತ್ತು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ ಮಲ್ಲಿಕಾರ್ಜುನ ಗೌಡರವರು ಅಧ್ಯಕ್ಷತೆ ವಹಿಸಿ ಕಾರ್ಯಕ್ರಮದ ಕುರಿತು ಮಾತನಾಡಿ ಮುಂಬರುವ ದಿನಗಳಲ್ಲಿ ಇಂತಹ ಹಲವು ಮಾಹಿತಿದಾಯಕ ವಿಚಾರ ಸಂಕಿರಣಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳನ್ನು ಸರ್ಧಾತ್ಮಕ ಜಗತ್ತಿಗೆ ಅಣಿಮಾಡುವ ಕಾಲೇಜಿನ ಆಶಯವನ್ನು ವ್ಯಕ್ತಪಡಿಸಿದರು. ಪ್ರಾಧ್ಯಾಪಕಿಯರಾದ ಕು. ಪ್ರತೀಕ್ಷಾ ಹಾಗೂ ಶ್ರೀಮತಿ ವಿದ್ಯಾಶ್ರೀರವರುಕಾರ್ಯಕ್ರಮ ನಿರ್ವಹಿಸಿದರು. ಕಾಲೇಜಿನ ಶಿಕ್ಷಕ ಹಾಗೂ ಶಿಕ್ಷಕೇತರ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.