27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗೀತೆ ಜತೆ ಸಾಹಿತ್ಯ ಸಾಂಗತ್ಯ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಬೆಳ್ತಂಗಡಿ ತಾಲೂಕು ಸಮಿತಿಯ ನೇತೃತ್ವದಲ್ಲಿ ಉಪನ್ಯಾಸ ಮಾಲಿಕೆಯ ನಾಲ್ಕನೆಯ ಅಧ್ಯಾಯ

ಗುರುವಾಯನಕೆರೆಯ ನಮ್ಮ ಮನೆ ಹವ್ಯಕ ಭವನದಲ್ಲಿ ಗೀತೆ ಜತೆ ಸಾಹಿತ್ಯ ಸಾಂಗತ್ಯ ಉಪನ್ಯಾಸ ಮಾಲಿಕೆಯ ನಾಲ್ಕನೆಯ ಅಧ್ಯಾಯದ ಕಾರ್ಯಕ್ರಮವು ಏ .6ರಂದು ನಡೆಯಿತು.

ಪ್ರೊ.ಗಣಪತಿ ಭಟ್ ಕುಳಮರ್ವ ಇವರು ಭಗವದ್ಗೀತೆಯ ನಾಲ್ಕನೆಯ ಅಧ್ಯಾಯದ ಉಪನ್ಯಾಸವನ್ನು ಮಾಡುತ್ತಾ ಪ್ರಪಂಚದಲ್ಲಿ ಧರ್ಮಕ್ಕೆ ಗ್ಲಾನಿಯಾದಾಗ ಭಗವಂತನು ತನ್ನನ್ನು ತಾನು ಸೃಷ್ಟಿಮಾಡಿಕೊಳ್ಳುವನು. ಸಾಧುಗಳ ರಕ್ಷಣೆ ಮತ್ತು ದುಷ್ಟರ ವಿನಾಶಕ್ಕಾಗಿ ಯುಗಯುಗದಲ್ಲಿ ಅವತರಿಸುವನು. ದುಷ್ಟರಿಗೆ ಅವರ ದುಷ್ಟತನಕ್ಕೆ ತಕ್ಕ ಶಿಕ್ಷೆ ನೀಡುವುದು, ಪರಿವರ್ತನೆಯಾಗದೇ ಹೋದರೆ ಸಂಹಾರ ಮಾಡುವ ಮುಖಾಂತರ ಅವರಿಗೂ ಮುಕ್ತಿಯನ್ನು ಕರುಣಿಸುವುದು ಅವತಾರದ ಉದ್ದೇಶ ವಿನಾ ಹಿಂಸೆಯಲ್ಲ. ವೈದ್ಯರು ಶಸ್ತ್ರಕ್ರಿಯೆ ಮಾಡಿದರೆ ಅದು ಹಿಂಸೆಯೆನಿಸದು. ಯೋಧ ಭಯೋತ್ಪಾದಕರನ್ನು ಕೊಂದರೆ ಅದು ಹಿಂಸೆಯಲ್ಲ, ಅದು ಅವನ ಕರ್ತವ್ಯ. ಅವನಿಗೆ ಪಾಪಲೇಪವಿಲ್ಲ. ಅಂತೆಯೇ ಅರ್ಜುನ ಮನದ ಸಂಶಯವನ್ನು ಬಿಟ್ಟು ತನ್ನ ಕರ್ತವ್ಯವಾದ ದುಷ್ಟಸಂಹಾರವನ್ನು ಮಾಡಲು ಕೃಷ್ಣನು ಪ್ರೇರೇಪಿಸುತ್ತಾನೆ. ಭಗವಂತನಿಗೂ ತನಗೂ ಭೇದವೆಣಿಸದೆ ಇದು ಅವನದೇ ಕೆಲಸ ನನ್ನದಲ್ಲ ಎಂಬ ನಿಸ್ಪೃಹತೆಯಿಂದ ನಿನ್ನ ಕ್ಷಾತ್ರಧರ್ಮವನು ಮಾಡೆಂದು ಪ್ರೇರಣೆ ಕೊಡುತ್ತಾನೆ. ಈ ಮಧ್ಯೆ ಚಾತುರ್ವರ್ಣವನ್ನು ತಾನೇ ಸೃಷ್ಟಿಸಲು ಕಾರಣವನ್ನು ವಿವರಿಸಿ ಉತ್ತಮ ರೀತಿಯಲ್ಲಿ ವಿಶ್ಲೇಷಣೆಯನ್ನು ನೀಡುತ್ತಾನೆ. ಕರ್ಮಾಕರ್ಮಗಳ ಮಹತ್ವದ ಸಂಗತಿಯನ್ನು ಅದು ಪರಮಾತ್ಮನಿಗೆ ಹೇಗೆ ಅಂಟುವುದಿಲ್ಲ ಎಂಬುದನ್ನು ತಿಳಿಸುವನು. ಜ್ಞಾನಿಗೆ ಕರ್ಮಬಂಧವಿಲ್ಲ ಎಂದು ತಿಳಿಸಿ ಜ್ಞಾನವನ್ನು ಗಳಿಸುವ ತದ್ವಿದ್ಧಿ ಪ್ರಣಿಪಾತೇನ ಉಪದೇಕ್ಷ್ಯಂತಿತೇ ಎಂಬ ವಾಕ್ಯವನ್ನು ವಿಶದವಾಗಿ ತಿಳಿಸಿದರು. ಬಗೆ ಬಗೆಯ ಯಜ್ಞಗಳ ವಿವಾರ ತಿಳಿಸಿ ಜ್ಞಾನದ ಸ್ತುತಿ ಮಾಡಿ ಅದರ ಹೆಚ್ಚುಗಾರಿಕೆಯನ್ನು ಕುರಿತು ಚರ್ಚಿಸಿ ಅಸದೃಶ ಜ್ಞಾನ ಸಂಪತ್ತನ್ನು ಶ್ರದ್ಧಯೊಂದೇ ದಾರಿ ಹೊರತು ಕಿರಿದಾರಿಗಳಿಲ್ಲ , ಆದುದರಿಂದ ಶ್ರದ್ಧೆಯಿಂದ ಸಂಪಾದಿಸಿದ ಜ್ಞಾನದ ಬಲದಿಂದ ಅಜ್ಞಾನದ ಕೇಡನ್ನು ನೋಡಿ ಕಂಡು ಸಂಶಯವನ್ನು ಪರಿಹಾರ ಮಾಡಿ ಕರ್ತವ್ಯವನ್ನು ಮಾಡು , ಯಾಕೆಂದರೆ ಸಂಶಯಾತ್ಮಾ ವಿನಶ್ಯತಿ ಎಂದು ಹೇಳಿ ಎಲೈ ಭಾರತನೇ ನಿನ್ನ ಮನದ ಸಂಶಯವನ್ನು ಜ್ಞಾನದ ಬಲದಿಂದ ನಿವಾರಿಸಿ ಯುದ್ಧಕ್ಕೆ ಮೇಲೇಳು ಎಂದು ಕರೆಕೊಟ್ಟ ಬಗೆಯನ್ನು ಮನೋಜ್ಞವಾಗಿ ವಿವರಿಸಿದರು .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಿಎ ನಿರೀಕ್ಷಾ ಎನ್. ಇವರು ತಮ್ಮ ಅಧ್ಯಕ್ಷೀಯ ಮಾತಿನಲ್ಲಿ ಇಂದಿನ ಯುವ ಪೀಳಿಗೆಗೆ ಯಾವುದು ಸರಿ ಯಾವುದು ತಪ್ಪು ಎನ್ನುವುದನ್ನು ಮನದಟ್ಟು ಮಾಡುವ ಸರಿಯಾದ ಗುರು ಬೇಕಾಗಿದೆ. ಈ ನಿಟ್ಟಿನಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಬೆಳ್ತಂಗಡಿ ತಾಲೂಕು ಸಮಿತಿ ಆಯೋಜಿಸಿದ ಈ ಕಾರ್ಯಕ್ರಮವು ಅತ್ಯಂತ ಪ್ರೇರಣಾದಾಯಕ ಮಾತ್ರವಲ್ಲ ಅನುಕರಣೀಯ ಎಂದು ನುಡಿದು ಶುಭ ಹಾರೈಸಿದರು.ಇವರಿಗೆ ಶ್ರೀಮತಿ ವಾಣಿ ಶ್ಯಾನುಭಾಗ್ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಪ್ರೊ.ಗಣಪತಿ ಭಟ್ ಕುಳಮರ್ವ ಇವರಿಗೆ ಶಿವಪ್ರಸಾದ್ ಸುರ್ಯ ಇವರು ಪುಸ್ತಕ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.

ಕು. ಮೈಥಿಲಿ ಇವರು ಶಾರದೆಯನ್ನು ಸ್ತುತಿಸಿದರು. ಕಾರ್ಯದರ್ಶಿ ಶ್ರೀಮತಿ ಸುಭಾಷಿಣಿಯವರ ರಚನೆಯ ಆಶಯಗೀತೆಯನ್ನು ಶ್ರೀಮತಿ ಅಶ್ವಿಜ ಶ್ರೀಧರ್ ಇವರು ರಾಗ ಸಂಯೋಜಿಸಿ ಸುಶ್ರಾವ್ಯವಾಗಿ ಹಾಡಿದರು. ರಾಮಚಂದ್ರ ಶೆಟ್ಟಿ ಸ್ವಾಗತಿಸಿದರು. ಶ್ರೀಮತಿ ಅಕ್ಷತಾ ಅಡೂರು ಕಾರ್ಯಕ್ರಮವನ್ನು ನಿರೂಪಿಸಿ, ಶ್ರೀಮತಿ ವಸಂತಿ ಕುಳಮರ್ವ ಧನ್ಯವಾದವನ್ನಿತ್ತರು. ಕಾರ್ಯಕ್ರಮದಲ್ಲಿ ಸಮಿತಿಯ ಪದಾಧಿಕಾರಿಗಳು, ಪ್ರಕಾರ ಪ್ರಮುಖರುಮತ್ತು ಸದಸ್ಯರು, ನಮ್ಮ ಮನೆ ಹವ್ಯಕ ಭವನ ಕ್ರಿಯಾ ಸಮಿತಿಯ ಸದಸ್ಯರು, ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು, , ಹಾಗೂ ಊರಿನ ಮಹನೀಯರು ಮತ್ತು ಮಹಿಳೆಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದು ನಾಲ್ಕನೆಯ ಅಧ್ಯಾಯದ ಪ್ರಯೋಜನವನ್ನು ಪಡೆದುಕೊಂಡರು.

Related posts

ಧರ್ಮಸ್ಥಳ: ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ

Suddi Udaya

ಒಂದು ವರ್ಷದಿಂದ ನಾಪತ್ತೆಯಾಗಿದ್ದ ಗೇರುಕಟ್ಟೆಯ ಸತೀಶ್ ರವರು ಮಂಗಳೂರಿನ ಲಾಡ್ಜಿನಲ್ಲಿ ಆತ್ಮಹತ್ಯೆ

Suddi Udaya

ಬೆಳಾಲು ಪ್ರೌಢಶಾಲೆಯಲ್ಲಿ ಕವಿ ಮಾಸ್ತಿ ಸಂಸ್ಮರಣೆ

Suddi Udaya

ಫೆ. 3-4: ರಾಜ್ಯಮಟ್ಟದ ಜಿನಭಜನಾ ಸ್ಪರ್ಧೆ: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಂದ ಆಮಂತ್ರಣ ಪತ್ರ ಬಿಡುಗಡೆ

Suddi Udaya

ಹಿಂದೂ ರಾಷ್ಟ್ರದ ಉದ್ಘಾರದೊಂದಿಗೆ ಬಂಟ್ವಾಳದ ಸ್ಪರ್ಶಾ ಕಲಾಮಂದಿರದಲ್ಲಿ ಪ್ರಾರಂಭವಾದ ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನ

Suddi Udaya

ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲಕ್ಕೆ ಪಂಚಕಲ್ಯಾಣಗೊಂಡ 24 ತೀರ್ಥಂಕರರ ಜಿನ ಬಿಂಬಗಳಿಗೆ ಅಭಿಷೇಕ

Suddi Udaya
error: Content is protected !!