
ಬೆಳ್ತಂಗಡಿ: ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಇದರ ನೂತನ ಕಟ್ಟಡ ಹಾಗೂ ಸಭಾಭವನದ ಉದ್ಘಾಟನೆ ಸಮಾರಂಭ ಎ. 20 ರಂದು ನಡೆಯಲಿದ್ದು, ಉದ್ಘಾಟನಾ ಸಮಾರಂಭಕ್ಕೆ ಆದಿಚುಂಚನಗಿರಿ ಸ್ವಾಮೀಜಿಗಳನ್ನು ಆಹ್ವಾನಿಸಿ ಅವರ ದಿವ್ಯಹಸ್ತದಿಂದಲೇ ಕಟ್ಟಡವನ್ನು ಉದ್ಘಾಟಿಸುವಂತೆ ಬೆಳ್ತಂಗಡಿ ತಾಲೂಕಿನ ಸಮಸ್ತ ಗೌಡ ಭಾಂದವರ ಪರವಾಗಿ ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಆಗ್ರಹಿಸುತ್ತದೆ ಎಂದು ಟ್ರಸ್ಟ್ ನ ಉಪಾಧ್ಯಕ್ಷ ವಸಂತ ಮರಕಡ ಹೇಳಿದರು.

ಅವರು ಬೆಳ್ತಂಗಡಿ ಸಿವಿಸಿ ಹಾಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಸದ್ರಿ ಆಮಂತ್ರಣ ಪತ್ರಿಕೆಯಲ್ಲಿ ನಮ್ಮ ಗೌಡ ಸಮಾಜದ ಸ್ವಾಮೀಜಿಗಳಾಗಿರುವ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ ಹಾಗೂ ಮಂಗಳೂರಿನ ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಕಾವೂರು ಮಠ ಇವರುಗಳನ್ನು ಆಮಂತ್ರಿಸದಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ.ಕಾಯ೯ಕ್ರಮಕ್ಕೆಆದಿಚುಂಚನಗಿರಿ ಸ್ವಾಮೀಜಿಗಳನ್ನು ಅಹ್ವಾನಿಸದೆ, ಅದರ ಬದಲಿಗೆ ಶೃಂಗೇರಿ ಮಠದ ಶ್ರೀಗಳನ್ನು ಆಮಂತ್ರಿಸಿರುವುದು ಬೆಳ್ತಂಗಡಿ ತಾಲೂಕಿನ ಗೌಡ ಸಮಾಜದ ಸಮಸ್ತ ಭಾಂಧವರಿಗೆ ಅತ್ಯಂತ ನೋವಾಗಿರುತ್ತದೆ ಎಂದು ಹೇಳಿದರು.
ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗ ಸಮುದಾಯಕ್ಕೆ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಪೀಠವೇ ಗುರುಪೀಠವಾಗಿದ್ದು ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ (ರಿ) ಹಳೆಕೋಟೆ, ಬೆಳ್ತಂಗಡಿ ಸಂಘಟನೆಯು ಕೂಡಾ ಪ್ರಾರಂಭದಿಂದಲೂ ಆದಿಚುಂಚನಗಿರಿ ಮಠದ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ಬೆಳೆದು ಬೆಸೆದುಕೊಂಡು ಬಂದಿದೆ ಎಂದು ತಿಳಿಸಿದರು.

ಟ್ರಸ್ಟ್ ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ ಮಾತನಾಡಿ, ಸಮುದಾಯದ ಸ್ವಾಮೀಜಿಯವರನ್ನು ಬಿಟ್ಟು ಶೃಂಗೇರಿ ಶ್ರೀಗಳನ್ನು ಆಮಂತ್ರಿಸುವ ಮೂಲಕ ನಮ್ಮ ಗೌಡ ಸಮುದಾಯದ ಸ್ವಾಮೀಜಿಗಳನ್ನು ಕೈಬಿಡಲಾಗಿದೆ. ಇದಕ್ಕೆ ಸಮುದಾಯಕ್ಕೆ ತೀವ್ರ ಅಸಮಾಧಾನ ಆಗಿದೆ ಎಂದು ತಿಳಿಸಿದರು. ಗೌರವಾಧ್ಯಕ್ಷ ಕೆ.ವಿಜಯ ಗೌಡ ವೇಣೂರು ಮಾತನಾಡಿ, ಈ ರೀತಿಯ ಬೆಳವಣಿಗೆಯಿಂದ ಮಠ ಮಠಗಳ ಮಧ್ಯೆ ಹಾಗೂ ಗೌಡ ಸಮುದಾಯವನ್ನು ಒಡೆಯುವ ಹುನ್ನಾರ ಕೆಲ ವ್ಯಕ್ತಿಗಳಿಂದಾಗುತ್ತಿದೆ. ಇದನ್ನು ಗೌಡ ಸಮುದಾಯ ಎಂದಿಗೂ ಒಪ್ಪುವುದಿಲ್ಲ ಎಂದರು.
ಆದ್ದರಿಂದ ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ (ರಿ) ಹಳೆಕೋಟೆ, ಬೆಳ್ತಂಗಡಿ ಇದರ ಪದಾಧಿಕಾರಿಗಳು ಆದಿಚುಂಚನಗಿರಿ ಮಠಕ್ಕೆ ಅಥವಾ ಮಂಗಳೂರು ಶಾಖಾ ಮಠಕ್ಕೆ ಹೋಗಿ, ಉದ್ಘಾಟನಾ ಸಮಾರಂಭಕ್ಕೆ ಆದಿಚುಂಚನಗಿರಿ ಸ್ವಾಮೀಜಿಗಳನ್ನು ಆಹ್ವಾನಿಸಿ ಅವರ ದಿವ್ಯಹಸ್ತದಿಂದಲೇ ಕಟ್ಟಡವನ್ನು ಉದ್ಘಾಟಿಸಬೇಕು ಎಂದು ಟ್ರಸ್ಟ್ನ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟಿಗಳಾದ ರಂಜನ್ ಜಿ ಗೌಡ , ಶ್ರೀನಿವಾಸ ಗೌಡ ಬೆಳಾಲು, ಸೂರಜ್ ಗೌಡ ವಳಂಬ್ರ, ಜಯಂತ್ ಗೌಡ ಗುರಿಪಳ್ಳ, ಭರತ್ ಗೌಡ ಬಂಗಾಡಿ, ದಾಮೋದರ ಗೌಡ ಬೆಳಾಲು, ನವೀನ್ ಗೌಡ ಬಿ.ಕೆ ನಿಡ್ಲೆ, ದಿನೇಶ್ ಗೌಡ, ಕಿಶೋರ್ ಕುಮಾರ್ ವಳಂಬ್ರ ಉಪಸ್ಥಿತರಿದ್ದರು. ಶ್ರೀನಿವಾಸ್ ಗೌಡ ಸ್ವಾಗತಿಸಿದರು. ಸೂರಜ್ ವಂದಿಸಿದರು.
——————————————————————————-
ಮೇ 25ರಂದು ಪದಗ್ರಹಣ:
ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಈಗಾಗಲೆ ಅಸ್ತಿತ್ವಕ್ಕೆ ಬಂದಿದ್ದು, ಮೇ 25ರಂದು ಲಾಯಿಲ ಸಂಗಮ ಸಭಾಭವನದಲ್ಲಿ ಪದಗ್ರಹಣ ನಡೆಸಲು ನಿರ್ಧರಿಸಲಾಗಿದೆ. ಅತಿಥಿ ಅಭ್ಯಾಗತರ ಪಟ್ಟಿ ಸಿದ್ಧವಾಗುತ್ತಿದ್ದು ಅಂದು ಸಮಾಜದ ಬೇರೆ ಬೇರೆ ವರ್ಗದಲ್ಲಿ ಗುರುತಿಸಿಕೊಂಡ ೫೦ ಸಾಧಕರಿಗೆ ಸಮ್ಮಾನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸಹಿತ ಆಂಬ್ಯುಲೆನ್ಸ್ ಲೋಕಾರ್ಪಣೆ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ ತಿಳಿಸಿದರು.
—————————————————————————————