ಬೆಳ್ತಂಗಡಿ : ಕೊಯ್ಯೂರು ಗ್ರಾಮದ ಆದೂರ್ ಪೆರಾಲ್ ಎಂಬಲ್ಲಿ ಕೂಲಿ ಕೆಲಸ ಮಾಡಲು ಬಂದವರಲ್ಲಿ ಒಬ್ಬನ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿರುವ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.ಆರೋಪಿಯನ್ನು ಬಂಧಿಸಿ ಮಂಗಳೂರು ಸೆಕ್ಷನ್ಸ್ ನ್ಯಾಯಾಲಯದ ನ್ಯಾಯಾಧೀಶರ ಮನೆಗೆ ಬೆಳ್ತಂಗಡಿ ಪೊಲೀಸರು ಹಾಜರುಪಡಿಸಿದ್ದು ನ್ಯಾಯಧೀಶರು ಆರೋಪಿಗೆ ಜಾಮೀನು ಮಂಜೂರು ಮಾಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಆದೂರ್ ಪೆರಾಲ್ ಎಂಬಲ್ಲಿಗೆ ಬೇಲಿಯ ಕೆಲಸಕ್ಕೆಂದು ಸ್ಥಳೀಯ ಆರು ಮಂದಿ ಯುವಕರು ಏ.11 ರಂದು ಹೋಗಿದ್ದರು. ಈ ವೇಳೆ ಅಲ್ಲಿಗೆ ಬಂದ ಕೊಯ್ಯೂರು ಗ್ರಾಮದ ಪಾಂಬೇಲು ನಿವಾಸಿ ರಾಮಯ್ಯ ಗೌಡರ ಮಗ ಉಜ್ವಲ್ ಗೌಡ(45) ತಮಗೆ ಸೇರಿದ ಜಾಗ ಇದು ಎಂದು ಬೇಲಿ ಹಾಕುತ್ತಿರುವ ಬಗ್ಗೆ ತಕರಾರು ತೆಗೆದಿದ್ದು ಕಾರ್ಮಿಕ ಕೊಯ್ಯೂರು ಗ್ರಾಮದ ನೀರಕಜೆ ನಿವಾಸಿ ಮಧು(28) ಎಂಬಾತನಿಗೆ ಜಾತಿ ನಿಂದನೆ ಮಾಡಿ ಆತನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಹಲ್ಲೆಯಿಂದ ಬೆನ್ನು ಮೂಲೆಗೆ ಗಂಭೀರವಾಗಿ ಗಾಯಗೊಂಡಿರುವ ಕಾರ್ಮಿಕ ಮಧುನನ್ನು ಬೆಳ್ತಂಗಡಿ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಏ.11 ರಂದು ಪ್ರಕರಣ ದಾಖಲಾಗಿದ್ದು.ಆರೋಪಿ ಉಜ್ವಲ್ ಗೌಡ ಎಂಬಾತನನ್ನು ಪೊಲೀಸರು ಏ.12 ರಂದು ಬಂಧಿಸಿ ವಿಚಾರಣೆ ನಡೆಸಿದ ಬಳಿಕ ರಾತ್ರಿ ಮಂಗಳೂರು ಸೆಕ್ಷನ್ಸ್ ಕೋರ್ಟ್ ನ್ಯಾಯಾಧೀಶರ ಮನೆಗೆ ಹಾಜರು ಪಡಿಸಿದ್ದರು ನ್ಯಾಯಧೀಶರು ಜಾಮೀನು ಮಂಜೂರು ಮಾಡಿದ್ದಾರೆ.