
ಬೆಳ್ತಂಗಡಿ: ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಶಾಸಕ ಹರೀಶ್ ಪೂಂಜ, ಮುಸ್ಲಿಂ ಸಮುದಾಯವನ್ನು ಅವಮಾಸಿರುವುದನ್ನು ಖಂಡಿಸಿ ತಾಲೂಕಿನ ಮುಸ್ಲಿಂ ಮುಖಂಡರು ಬೆಳ್ತಂಗಡಿ ಜಮೀಯತುಲ್ ಫಲಾಹ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ಗೋಪಾಲಕೃಷ್ಣ ದೇವರು ಎಂದರೆ ಮಾನವ ಸಹಜ ಪ್ರೀತಿಯ ದೇವರು. ಸರ್ವೇ ಜನ ಸುಖಿನೋ ಭವಂತು ಎನ್ನುವುದು ಶ್ರೀ ಕೃಷ್ಣನ ಮಾತು. ಇಂತಹ ವೇದಿಕೆಯಲ್ಲಿ ಶಾಸಕ ಹರೀಶ್ ಪೂಂಜರು ಯಾರ್ಯಾರ ಮಾತನ್ನು ಕೇಳಿ ಮುಸ್ಲಿಂ ಸಮುದಾಯವನ್ನು ಬಹಳ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಇದು ನಮಗೆಲ್ಲ ಬಹಳ ನೋವು ತಂದಿದೆ. ಇದರ ಸತ್ಯಾಂಶ ಮುಂದಿಡಲು ಈ ಪತ್ರಿಕಾಗೋಷ್ಟಿ ಕರೆದಿದ್ದೇವೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು, ಮುಸ್ಲಿಂ ಮುಖಂಡ ಕೆ.ಕೆ ಶಾಹುಲ್ ಹಮೀದ್ ಹೇಳಿದರು.
ಅಲ್ಲಿಯ ಮುಸ್ಲಿಂರು ತೆಕ್ಕಾರು ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ ಜಾಗವನ್ನು ಬಿಟ್ಟು ಕೊಟ್ಟಿದ್ದಾರೆ. ಬ್ರಹ್ಮಕಲಶಕ್ಕೆ ಬ್ಯಾನರ್ ಹಾಕಿದ್ದಾರೆ. ಮರವನ್ನು ದಾನದ ರೂಪದಲ್ಲಿ ನೀಡಿದ್ದಾರೆ. ಧನ ಸಹಾಯವನ್ನು ನೀಡಿದ್ದಾರೆ. ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವಾಗ 144 ಸೆಕ್ಷನ್ ಇರುವಾಗ ಎರಡು ಧರ್ಮಗಳ ನಡುವೆ ಘರ್ಷಣೆ ಬರುವಂತೆ ಮಾತನಾಡಿದ್ದು ಸರಿಯಲ್ಲ. ಒಂದು ಸಮುದಾಯವನ್ನು ಈ ರೀತಿ ಹಿಯಾಳಿಸಿರುವುದು ತುಂಬಾ ನೋವು ತಂದಿದೆ ಎಂದು ಖೇದ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಸ್ಲಿಂ ಮುಖಂಡರುಗಳಾದ ಅಕ್ಬರ್ ಬೆಳ್ತಂಗಡಿ, ನಜಿರ್, ಹನೀಫ್ ಖಾಲೀದ್, ಕೆ.ಎಸ್. ಅಬ್ದುಲ್ ಇನ್ನಿತರರು ಉಪಸ್ಥಿತರಿದ್ದರು.













