ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಭಾಗದ ಕೊಕ್ರಾಡಿ ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗಾಗಿ, ಶಾಸಕ ಹರೀಶ್ ಪೂಂಜರವರ ಸಹಕಾರ ,ಸರಕಾರದ ಅನುದಾನ, ಸಮುದಾಯದ ಸಹಭಾಗಿತ್ವ ಹಾಗೂ ವಿವೇಕ ಯೋಜನೆಯಡಿ ಸುಮಾರು ೨.೫೦ ಕೋಟಿ ವೆಚ್ಚದಲ್ಲಿ ವ್ಯವಸ್ಥಿತ ಕಟ್ಟಡವನ್ನು ನಿರ್ಮಾಣಗೊಂಡು ನೂತನ ಕೊಠಡಿಗಳು ಲೋಕರ್ಪಾಣೆಗೊಳ್ಳಲು ಮೇ 12 ರಂದು ಸಜ್ಜಾಗಿದೆ.
ಗ್ರಾಮೀಣ ಪ್ರದೇಶದಲ್ಲಿ 1991 ರಲ್ಲಿ ದಿವಂಗತ ಕೆ.ಕೆ.ಶೆಟ್ಟಿ, ದಿವಂಗತ ಹರಿಶ್ಚಂದ್ರ ಹೆಗ್ಡೆ ಇವರ ನೇತೃತ್ವದಲ್ಲಿ ಪ್ರಾರಂಭವಾದ ಶಾಲೆ ಹಲವಾರು ವಿದ್ಯಾರ್ಥಿಗಳ ಪ್ರಮುಖ ವಿದ್ಯಾ ಕೇಂದ್ರವಾಗಿದೆ. ಜನಪ್ರತಿನಿಧಿಗಳ, ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಶಾಲೆಯ ಕಟ್ಟಡ ನವೀಕರಣಗೊಂಡು, ನೂತನ ಕೊಠಡಿಗಳ ರಚನೆಯಾಗಿದೆ.
ಕೊಕ್ರಾಡಿ ಶಾಲೆ ಪ್ರಕೃತಿಯ ಮಡಿಲಿನಲ್ಲಿದ್ದು ಶಾಲಾ ಕೈತೋಟ, ಉತ್ತಮ ಶಿಕ್ಷಣಭ್ಯಾಸ, ಕ್ರೀಡೆಲ್ಲಿ ಈಗಾಗಲೇ ಹೆಸರುವಾಸಿಯಾಗಿದೆ. ೨೦೧೭-೧೮ ರಲ್ಲಿ ಕೊಕ್ರಾಡಿ ಪ್ರೌಢಶಾಲೆಗೆ ರಾಜ್ಯ ಮಟ್ಟದ ಸ್ವಚ್ಛ ಶಾಲೆ ಪ್ರಶಸ್ತಿ ಬಂದಿತ್ತು. ಶೌಚಾಲಯ ನಿರ್ವಹಣೆ, ಶುದ್ಧ ಕುಡಿಯುವ ನೀರಿನ ನಿರ್ವಹಣೆ, ಹಸಿಕಸ-ಒಣಕಸಗಳ ನಿರ್ವಹಣೆ, ಮಳೆ ಕೊಯ್ಲು, ನೀರಿಂಗಿಸುವಿಕೆ ಮುಂತಾದ ಜೀವನ ಅವಶ್ಯಕ ಕೌಶಲಗಳನ್ನೂ ಇಲ್ಲಿ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಕೊಕ್ರಾಡಿ ಪ್ರೌಢಶಾಲೆಯು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಹಸಿರು-ಹಳದಿ ಶಾಲೆ ಎಂದು ಮಾನ್ಯತೆಯನ್ನು ಪಡೆದಿದೆ.
ಎಲ್ಲರ ಸಹಕಾರದಿಂದ ವಿದ್ಯಾ ದೇಗುಲ ಅಭಿವೃದ್ಧಿ:
ಸುಮಾರು 2.50 ಕೋಟಿ ವೆಚ್ಚದಲ್ಲಿ ವ್ಯವಸ್ಥಿತ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಶಾಸಕ ಹರೀಶ್ ಪೂಂಜರವರ ವಿಶೇಷ ಪ್ರಯತ್ನದಿಂದ ಸರಕಾರದ ಅನುದಾನ ,ವಿಧಾನಪರಿಷತ್ ಸದಸ್ಯರಾದ ಬೋಜೆ ಗೌಡ-5 ಲಕ್ಷ ರೂ,ಮಾಜಿ ವಿ.ಪ.ಸದಸ್ಯ ಅಯಾನೂರು ಮಂಜುನಾಥ್ 4 ಲಕ್ಷ ರೂ. ಅಂಡಿಂಜೆ ಗ್ರಾಮ ಪಂಚಾಯತ್ನಿಂದ10 ಲಕ್ಷ ರೂ. ಅನುದಾನ ದೊರೆತಿದೆ. ಸರಕಾರದ 64 ಲಕ್ಷ ರೂ ವೆಚ್ಚದಲ್ಲಿ ಹಾಗೂ ಹಳೆ ವಿದ್ಯಾರ್ಥಿಗಳು ಮತ್ತು ದಾನಿಗಳ ಸಹಕಾರದಿಂದ ರೂ.45 ಲಕ್ಷದಿಂದ ಒಟ್ಟು 1.09 ಕೋಟಿ ರೂ. ವೆಚ್ಚದಲ್ಲಿ 8 ಪ್ರೌಢ ಶಾಲೆಯ ಕೊಠಡಿ ನಿರ್ಮಾಣವಾಗಿದೆ. ವಿವೇಕ ಯೋಜನೆಯಡಿ ಸುಮಾರು 1.05 ಕೋಟಿ ರೂ. ವೆಚ್ಚದಲ್ಲಿ ಕಾಲೇಜಿನ 4 ಕೊಠಡಿ ರಚನೆಗೊಂಡಿದೆ
ರಾಷ್ಟ್ರ ಮಟ್ಟದ ಯೋಗಾಸನ ಚಾಂಪಿಯನ್ಶಿಪ್ನಲ್ಲಿ ಇಲ್ಲಿನ ವಿದ್ಯಾರ್ಥಿಗಳು ಎರಡನೆಯ ಸ್ಥಾನವನ್ನು ಪಡೆದಿದ್ದರು. ಸಂಗೀತ, ನೃತ್ಯ ಮುಂತಾದ ಲಲಿತ ಕಲೆಗಳ ಕಲಿಕೆಗೂ ಉತ್ತೇಜನ ನೀಡಲಾಗುತ್ತದೆ. ಇದರ ಇನ್ನೊಂದು ಕಡೆಯಲ್ಲಿ ಆಧುನಿಕ ಬದುಕಿಗೆ ಮಕ್ಕಳನ್ನು ಸಿದ್ಧಪಡಿಸಲು ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್, ಕರಾಟೆ ಶಿಕ್ಷಣ, ಕಂಪ್ಯೂಟರ್ ಶಿಕ್ಷಣ, ಸ್ಮಾರ್ಟ್ ಕ್ಲಾಸ್ಗಳ ವ್ಯವಸ್ಥೆಯೂ ಇದೆ. ಉತ್ತಮ ಶಿಕ್ಷಕರನ್ನು ಒಳಗೊಂಡಿರುವ ಶಾಲೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಕಲಿಕಾ ಕೌಶಲಗಳ ಕಾರ್ಯಾಗಾರಗಳನ್ನು ನಡೆಸಲಾಗುತ್ತದೆ. ಸಚಿವ ಗಂಗಾಧರ ಗೌಡ, ಶಾಸಕರಾದ ದಿ| ಕೆ. ವಸಂತ ಬಂಗೇರ, ಕೆ.ಪ್ರಭಾಕರ ಬಂಗೇರ ಅವರು ಶಾಲೆ ಅಭಿವೃದ್ಧಿ ಸಹಕಾರ ನೀಡಿದ್ದಾರೆ. ಒಟ್ಟಿನಲ್ಲಿ ಹಳೆ ವಿದ್ಯಾರ್ಥಿಗಳ ಮತ್ತು ದಾನಿಗಳ ಸಹಕಾರದಿಂದ ವಿದ್ಯಾ ದೇಗುಲು ಹೊಸತನದ ರೂಪನ್ನು ಪಡೆದಿದೆ.
ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್ ಗೌರವ ಘನ ಉಪಸ್ಥಿತಿಯಿರುವರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಕರ್ನಾಟಕ ಸರಕಾರ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಾರ್ಯಕ್ರಮ ಉದ್ಘಾಟಿಸಲಿರುವರು. ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಗೌರವ ಉಪಸ್ಥಿತಿ ಇರಲಿದ್ದಾರೆ. ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಲಿರುವರು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ವಿ.ಪ.ಸದಸ್ಯ ಪ್ರತಾಪಸಿಂಹ ನಾಯಕ್, ಅಂಡಿಂಜೆ ಗ್ರಾ.ಪಂ. ಅಧ್ಯಕ್ಷ ನಿತಿನ್ ಎಂ., ಬಿ.ಇಓ ತಾರಕೇಸರಿ ಸಹಿತ ಮತ್ತಿತರರು ಭಾಗವಹಿಸಲಿದ್ದಾರೆ. ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ. ಕೊಕ್ರಾಡಿ ಹೈಸ್ಕೂಲ್ ಬೆಟರ್ಮೆಂಟ್ ಟ್ರಸ್ಟ್ ಅಧ್ಯಕ್ಷ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ಜಗದೀಶ್ ಹೆಗ್ಡೆ, ಕಾಲೇಜಿನ ಪ್ರಾಂಶುಪಾಲ ನೋರ್ಬರ್ಟ್ ಮಾರ್ಟಿಸ್, ಮುಖ್ಯೋಪಾಧ್ಯಾಯ ಮಹಮದ್ ರಿಯಾಜ್, ಎಸ್ಡಿಎಂಸಿ ಅಧ್ಯಕ್ಷ ಗಣೇಶ್, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಮೋಹನ ಎ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.