ಮುಗೇರಡ್ಕ : ಕರ್ನಾಟಕ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಮೃತ ಮಹೋತ್ಸವದ ಮಹಾತ್ವಕಾಂಕ್ಷಿ ಯೋಜನೆಯಾದ ಅಂಗನವಾಡಿಯಲ್ಲಿ ಎಲ್ ಕೆಜಿ , ಯುಕೆಜಿ ಶಿಕ್ಷಣ ಪ್ರಾರಂಭಕ್ಕೆ ದಕ್ಷಿಣ ಕನ್ನಡದ ಹಲವು ಅಂಗನವಾಡಿಗಳು ಆಯ್ಕೆಯಾಗಿದ್ದು, ಬೆಳ್ತಂಗಡಿಯ ಮೊಗ್ರು ಗ್ರಾಮದ ಮುಗೇರಡ್ಕ ಅಂಗನವಾಡಿಯೂ ಆಯ್ಕೆಯಾಗಿದೆ ಎಂದು ಬೆಳ್ತಂಗಡಿ ಅಂಗನವಾಡಿ ಮೇಲ್ವಿಚಾರಕಿ ಶ್ರೀಮತಿ ಸುಮನ ಎಸ್ ಅವರು ಮೊಗ್ರು ಅಂಗನವಾಡಿಯಲ್ಲಿ ನಡೆದ ಬಾಲವಿಕಾಸ ಸಮಿತಿ ಸಭೆಯಲ್ಲಿ ತಿಳಿಸಿದರು.

ಈ ವರ್ಷ ಜೂನ್ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭವಾಗಿ ಅಂಗನವಾಡಿಗಳನ್ನು ಬಲಪಡಿಸುವ ಹಾಗೂ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಇಂಗ್ಲಿಷ್ ಭಾಷಾ ತರಬೇತಿಗೆ ಪೂರಕವಾದ ಎಲ್ ಕೆಜಿ ಗೆ 4 ವರ್ಷದ ಮಕ್ಕಳು ಹಾಗೂ ಯುಕೆಜಿ ಗೆ 5 ವರ್ಷ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು, ಆಯ್ಕೆಯಾದ ಅಂಗನವಾಡಿ ವ್ಯಾಪ್ತಿಯ ಮಕ್ಕಳು ಹಾಗೂ ಹತ್ತಿರದ ಮಕ್ಕಳು ಪ್ರವೇಶ ಪಡೆದು ಇದರ ಸದುಪಯೋಗ ಪಡೆಯಬಹುದು, ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಬೋಧನೆ ಹಾಗೂ ಆಹಾರ ಸರಕಾರದಿಂದ ಉಚಿತವಾಗಿ ಒದಗಿಸಲಾಗುವುದು ಎಂದರು.
ಉಚಿತ ವಾಹನ ವ್ಯವಸ್ಥೆ : ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ ಮೊಗ್ರು ಇದರಿಂದ ಮೊಗ್ರು ಅಂಗನವಾಡಿಗೆ ಪ್ರವೇಶ ಪಡೆಯುವ ಮಕ್ಕಳಿಗೆ ಆಯ್ದ ಸ್ಥಳಗಳಿಂದ ಉಚಿತವಾಗಿ ಮಕ್ಕಳ ಪ್ರಯಾಣಕ್ಕೆ ವಾಹನ ವ್ಯವಸ್ಥೆ ಒದಗಿಸಲಾಗುವುದು ಎಂದು ಟ್ರಸ್ಟ್ ಘೋಷಿಸಿದ್ದು, ಇದು ಸರಕಾರಿ ಸೌಲಭ್ಯಗಳನ್ನು ಬಲಪಡಿಸಲು ಟ್ರಸ್ಟ್ ನ ಪ್ರೇರಣೆ ಎಂದರು.
ಸಭೆಯಲ್ಲಿ ಮುಗೇರಡ್ಕ ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ಭಾರತಿ, ಬಂದಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಂಗಾಧರ ಪೂಜಾರಿ, ಸದಸ್ಯರಾದ ವೀರಪ್ಪ ಗೌಡ ಪರಕ್ಕಾಜೆ, ಶ್ರೀಮತಿ ಹರಿಣಾಕ್ಷಿ, ಶ್ರೀಮತಿ ಜ್ಯೋತಿ, ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್(ರಿ) ಮೊಗ್ರು ಅಧ್ಯಕ್ಷ ಕುಶಾಲಪ್ಪ ಗೌಡ, ಕಾರ್ಯದರ್ಶಿ ಮನೋಹರ ಗೌಡ ಅಂತರ ಉಪಸ್ಥಿತರಿದ್ದರು.