
ಬೆಳ್ತಂಗಡಿ: ಸಮಾಜ ನಿನಗೇನು ಕೊಟ್ಟಿದೆ ಅನ್ನುವುದಕ್ಕಿಂತ, ಸಮಾಜಕ್ಕೆ ನೀನೇನೂ ಕೊಟ್ಟಿದ್ದಿ ಅನ್ನುವುದು ಬದುಕಲ್ಲಿ ಬಹಳ ಪ್ರಾಮುಖ್ಯತೆಯನ್ನು ಪಡೆಯುತ್ತದೆ, ಹುಟ್ಟಿದ ನಂತರ ಎಲ್ಲರೂ ಬದುಕುತ್ತಾರೆ ಆದರೆ ತಮ್ಮ ಬದುಕಿಗೆ ನಿಜವಾದ ಅರ್ಥವನ್ನು ಕೊಡುವವರು ಕೆಲವರು ಮಾತ್ರ ಅಂತವರಲ್ಲಿ ಸಮಾಜಕ್ಕೆ ಸ್ಪೂರ್ತಿಯ ಸಂದೇಶವನ್ನು ಬಿಟ್ಟು ಹೋದ ವಿಜಯ ರಾಘವ ಪಡ್ವೆಟ್ನಾಯ ಮತ್ತು ಡಾ.ಬಿ. ಯಶೋವರ್ಮ ಅವರ ಬದುಕು-ನೆನಪು-ಸ್ಮರಣೆ ಎಂಬ ಶೀರ್ಷಿಕೆಯನ್ನು ಹೊಂದಿದ ಯಶೋ- ವಿಜಯ ಕಾರ್ಯಕ್ರಮವು ಲಕ್ಷ್ಮೀ ಇಂಡಸ್ಟ್ರಿಸ್ “ಕನಸಿನ ಮನೆಯ” ಮಾಲಕ, ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ಅವರ ನೇತೃತ್ವದಲ್ಲಿ ಮೇ. ೨೫ ರಂದು ಬೆಳಿಗ್ಗೆ ಗಂಟೆ 9.30 ರಿಂದ ಉಜಿರೆ ಶ್ರೀಕೃಷ್ಣಾನುಗ್ರಹ ಸಭಾ ಭವನದಲ್ಲಿ ನಡೆಯಲಿದೆ.
ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ಕೊಡೆ ವಿತರಣೆ
*೧-೭ನೇ ತರಗತಿ ವರೆಗಿನ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸುಮಾರು 600 ಮಂದಿಗೆ ಬ್ಯಾಗ್ ಹಾಗೂ ಕೊಡೆ ವಿತರಣೆ
*೨೦೨೪-೨೫ನೇ ಸಾಲಿನ ಎಸ್.ಎಸ್ಎಲ್.ಸಿ. ಪರೀಕ್ಷೆಯಲ್ಲಿ 600ಕ್ಕೂ ಅಧಿಕ ಅಂಕ ಗಳಿಸಿದ ಬೆಳ್ತಂಗಡಿ ತಾಲೂಕಿನ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ
*ಕೀರ್ತಿಶೇಷ ವಿಜಯ ರಾಘವ ಪಡ್ವೆಟ್ನಾಯರ ಸ್ಮರಣಾರ್ಥ ಬದುಕು ಕಟ್ಟೋಣ ಬನ್ನಿ ತಂಡದಿAದ ಕಲ್ಮಂಜ ಗ್ರಾಮದ ಜರ್ಮೆರಪಲ್ಕೆ ಎಂಬಲ್ಲಿ ನಿರ್ಮಿಸಿದ ಮನೆ ‘ವಿಜಯ’ ಇದರ ಕೀ ಹಸ್ತಾಂತರ
*ದಿ. ವಿಜಯರಾಘವ ಪಡ್ವೆಟ್ನಾಯ ಹಾಗೂ ಡಾ. ಬಿ. ಯಶೋವರ್ಮರ ಬದುಕು ನೆನಪುಗಳ ಸ್ಮರಣಿಸುವ ಯಶೋ-ವಿಜಯ ಕಾರ್ಯಕ್ರಮ.
“ಯಶೋ ವಿಜಯ”ನೆನಪು ಚಿರಸ್ಥಾಯಿ:
ಪ್ರತಿ ಕಾರ್ಯಕ್ರಮವು ವಿಭಿನ್ನವಾಗಿರಬೇಕು. ಜನಗಳಿಗೆ ಅದರ ಮಹತ್ವ ತಿಳಿಯುವಂತಾಗಬೇಕು ಎಂಬ ಉತ್ಕೃಷ್ಟ ಸದುದ್ದೇಶವನ್ನು ಇಟ್ಟುಕೊಂಡಿರುವ ಮೋಹನ್ ಕುಮಾರ್ ಅವರು ಸಮಾಜ ಸೇವೆ, ಧರ್ಮ, ಶಿಕ್ಷಣ, ಶ್ರದ್ದೆ, ಶಿಸ್ತು, ಸೇವಾ ಭಾವನೆಯ ಮೌಲ್ಯಗಳನ್ನು ಸಮಾಜಕ್ಕೆ ಸಮರ್ಪಣೆ ಮಾಡಿ, ಸದಾ ನೆನಪಿನಲ್ಲಿ ಜೀವಂತವಾಗಿರುವ, ಉಜಿರೆಯ ಧಣಿ ವಿಜಯ ರಾಘವ ಪಡ್ವೆಟ್ನಾಯ ಮತ್ತು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ. ಯಶೋವರ್ಮರೆಂಬ ಮಹಾನ್ ಚೇತನವನ್ನು ನೆನೆಯುವ “ಯಶೋ ವಿಜಯ” ಕಾರ್ಯಕ್ರಮವು ಬದುಕು-ನೆನಪು-ಸ್ಮರಣೆ ಎಂಬ ಸಮಾಜಕ್ಕೆ ಸ್ಪೂರ್ತಿಯ ಸಂದೇಶ ನೀಡುವ ಕಾರ್ಯಕ್ರಮವನ್ನು ಬದುಕು ಕಟ್ಟೋಣ ಬನ್ನಿ ತಂಡ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಆಯೋಜಿಸಿದ್ದಾರೆ.
ವಿಜಯ ರಾಘವ ಪಡ್ವೆಟ್ನಾಯ:
ಬದುಕು ದೇವರ ವರವಾಗಿದೆ.ಮಾರ್ಗದರ್ಶನವೆಂಬುದು ಜೀವನದ ದೀಪವಾಗಿದ್ದು, ವಿಜಯ ರಾಘವ ಪಡ್ವೆಟ್ನಾಯರು ತಮ್ಮ ಮಾರ್ಗದರ್ಶನದ ಮೂಲಕ ಅನೇಕರಿಗೆ ದಾರಿ ತೋರಿದವರು. ನಿಷ್ಠೆ ಮತ್ತು ಧರ್ಮಮಯ ಬದುಕಿನಿಂದ ಸಮಾಜಕ್ಕೆ ಸ್ಪೂರ್ತಿದಾಯಕ ಆದರ್ಶವಾದವರು. ಜೀವನ ಧರ್ಮ ಮತ್ತು ಸೇವೆಯ ಪ್ರತೀಕವಾಗಿ ಸದಾ ನೆನಪಿನಲ್ಲಿ ಜೀವಂತವಾಗಿದ್ದಾರೆ.
ಡಾ.ಬಿ.ಯಶೋವರ್ಮ:
ನೆನಪುಗಳು ಬದುಕಿನ ಪಾಠಗಳನ್ನು ಓದುತ್ತವೆ. ಡಾ.ಬಿ.ಯಶೋವರ್ಮರವರು ಶಿಕ್ಷಣಕ್ಕೆ ನೀಡಿದ ಸೇವೆಯ ಪರಿಣಾಮ ಸಾವಿರಾರು ವಿದ್ಯಾರ್ಥಿಗಳು ವಿವಿಧ ಕ್ಷೇತ್ರದಲ್ಲಿ ಹೊಳೆಯುತ್ತಿದ್ದಾರೆ. ಉಜಿರೆಯ ವಿದ್ಯಾ ಕ್ಷೇತ್ರವನ್ನು ಬೆಳಗಿಸಿದ ಶ್ರೇಷ್ಠ ಸಾಧಕರು, ಶಿಸ್ತು, ನೈತಿಕತೆ ಮತ್ತು ಸ್ಪೂರ್ತಿದಾಯಕವಾಗಿ ಬದುಕಿ ನಮ್ಮೆಲ್ಲರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿದ್ದಾರೆ.
ಸೇವೆಯ ಸಂಕಲ್ಪದೊಂದಿಗೆ ಬದುಕು ಕಟ್ಟೋಣ ಬನ್ನಿ ತಂಡ:
2019 ರಲ್ಲಿ ಭಾರಿ ಮಳೆಗೆ ಕೊಳಂಬೆಯಲ್ಲಿ ಸಾವಿರಾರು ಎಕರೆ ಭೂಮಿ, ಮನೆಗಳು ಕೊಚ್ಚಿ ಹೋದಾಗ ಅಂತವರ ಪಾಲಿಗೆ ನೆರಳಾಗಿ ಹುಟ್ಟಿಕೊಂಡ ತಂಡವೇ ಬದುಕು ಕಟ್ಟೋಣ ಬನ್ನಿ ಸಂಘಟನೆ. ಉದ್ಯಮಿ ಮೋಹನ್ ಕುಮಾರ್ ಅವರು ಸಂಚಾಲಕರಾಗಿರುವ ಈ ತಂಡದ ಸಾಧನೆ ಪದಗಳಿಗೆ ನಿಲುಕದ್ದು. ಕೊಳಂಬೆ ಪ್ರದೇಶವನ್ನ ಮರು ನಿರ್ಮಾಣ ಮಾಡಿ, ಮನೆಗಳಿಗೆ ಮರು ಜೀವ ಕೊಟ್ಟು, ಸ್ವಾತಂತ್ರ್ಯ ದಿನಾಚರಣೆ, ನೇಜಿ ನಾಟಿ, ಅಶಕ್ತರಿಗೆ ಸಹಾಯ ಹಸ್ತ, ವಿದ್ಯಾರ್ಥಿಗಳಿಗೆ ಸಹಾಯ ಧನ, ಕೋವಿಡ್ ಕಿಡ್ ವಿತರಣೆ, ನೇತ್ರಾವತಿ ಸ್ವಚ್ಛತೆ, ವೃಕ್ಷ ಅಭಿಯಾನ, ಉಚಿತ ರಕ್ತದಾನ ಶಿಬಿರ ಆರೋಗ್ಯ ಶಿಬಿರ, ಶಾಲೆಗಳಿಗೆ ನೆರವು,ವಿದ್ಯಾದೇಗುಲದ ಅಭಿವೃದ್ಧಿ ಹೀಗೆ ಹತ್ತು ಹಲವಾರು ಸಮಾಜಮುಖಿ ಕಾರ್ಯಗಳನ್ನ ಮಾಡಿ ಅರ್ಹವಾಗಿ ೨೦೨೨ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಈ ತಂಡ ಪಡೆದುಕೊಂಡಿದೆ ಎಂಬುದು ನಮಗೆ ಹೆಮ್ಮೆ.
ಬದುಕು ಕಟ್ಟೋಣ ತಂಡ ಸೇವೆಯ ಮಾರ್ಗದಲ್ಲಿ ಬೆಳಕಿನ ನಡಿಗೆ: ಮೋಹನ್ ಕುಮಾರ್
ಸ್ಮರಣೆ ಇಲ್ಲಿ ಕಣ್ಣೀರು ಅಲ್ಲ, ಶಕ್ತಿಯ ಮೂಲವಾಗಿದೆ. ಪಾಠ ಹೇಳಿದವರು ಇಲ್ಲದಿದ್ದರೂ, ಅವರ ಮೌಲ್ಯಗಳು ನಮ್ಮೊಳಗೆ ಜೀವಂತವಾಗಿದೆ ಬದುಕು ಕಟ್ಟೋಣ ಬನ್ನಿ ತಂಡ, ನೆನಪನ್ನು ಕೃತ್ಯವಾಗಿ ಪರಿವರ್ತಿಸಿ, ಸೇವೆಯ ಮಾರ್ಗದಲ್ಲಿ ಬೆಳಕಿನ ನಡಿಗೆ ಹಾಕುತ್ತಿದೆ. ನೆನಪಿನಲ್ಲಿ ಸ್ಪಂದಿಸುವ ನಾಯಕತ್ವ, ಇಂದು ಸಮಾಜಮುಖಿ ಕಾರ್ಯಗಳಲ್ಲಿ ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ ಮಾತುಗಳಿಗಿಂತ ಮುಂದೆ ಹೋಗಿ, ಕಾರ್ಯವೇ ಕೃತಜ್ಞತೆಯ ರೂಪ ಎನ್ನುವ ದ್ಯೇಯದೊಂದಿಗೆ, ಈ ತಂಡ ಯುವಕರ ಹೃದಯದಲ್ಲಿ ಹೊಸ ಆಶಯ ಬೀಜ ಬಿತ್ತುತ್ತಿದೆ. ಸೇವೆಯ ಸಂಕಲ್ಪ, ನೆನಪಿನ ಸ್ಫೂರ್ತಿ, ಸಮಾಜದ ಹೊಣೆಗಾರಿಕೆ ಈ ಮೂರೂ ಹೆಜ್ಜೆಗಳ ಜೊತೆಯಾಗಿ, ಬನ್ನಿ ಬದುಕು ಕಟ್ಟೋಣ ಎಂದು ಸಂಚಾಲಕ ಕೆ. ಮೋಹನ್ ಕುಮಾರ್ ತಿಳಿಸಿದರು.