ಬೆಳ್ತಂಗಡಿ: ಬೆಳ್ತಂಗಡಿ ನಗರದಿಂದ ಕೆಇಬಿ ರಸ್ತೆ ರೆಂಕೆದಗುತ್ತುವಾಗಿ – ಮಲ್ಲೊಟ್ಟು ಸಂಪರ್ಕಿಸುವ ರಸ್ತೆಯು ತೀರಾ ಹದಗೆಟ್ಟಿದ್ದು ರಸ್ತೆಯನ್ನು ಅಗಲೀಕರಣಗೊಳಿಸಿ, ಒಳಚರಂಡಿಗಳನ್ನು ನಿರ್ಮಿಸಿ ಅಭಿವೃದ್ಧಿಗೊಳಿಸುವುದು ಅನಿವಾರ್ಯವಾಗಿರುವ ಹಿನ್ನೆಲೆಯಲ್ಲಿ ರಸ್ತೆ ಕಾಮಗಾರಿಯನ್ನು ಕೈಗೊಳ್ಳಲು ಧರ್ಮಸ್ಥಳದ ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಗೆ ರಾಜ್ಯಸಭಾ ಸದಸ್ಯರ ನಿಧಿಯಿಂದ ಅಗತ್ಯವಿರುವ ಅಂದಾಜು ರೂ. 2.೦೦ ಕೋಟಿ ಅನುದಾನವನ್ನು ಒದಗಿಸಿಕೊಡುವಂತೆ ಬೆಳ್ತಂಗಡಿ ನಗರ ಪಂಚಾಯತ್ ಆಡಳಿತ ಮಂಡಳಿ ವತಿಯಿಂದ ಮನವಿ ಸಲ್ಲಿಸಲಾಯಿತು.

ಬೆಳ್ತಂಗಡಿ ಕೆಇಬಿ ರಸ್ತೆ ರೆಂಕೆದಗುತ್ತುವಾಗಿ- ಮಲ್ಲೊಟ್ಟು ಸಂಪರ್ಕಿಸುವ ರಸ್ತೆಯು ತೀರಾ ಹದಗೆಟ್ಟಿದ್ದು ಸಾರ್ವಜನಿಕರ/ವಿದ್ಯಾರ್ಥಿಗಳ ಹಾಗೂ ಉದ್ಯಮಿಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ರಸ್ತೆಯು ಹಾದು ಹೋಗುವ ಪ್ರದೇಶದಲ್ಲಿ ಸರಕಾರದ ಮೂರು ವಿದ್ಯಾರ್ಥಿ ನಿಲಯಗಳು, ಒಂದು ವಸತಿ ಶಾಲೆ, ಅಂಗನವಾಡಿಗಳು, ಪ್ರಾಥಮಿಕ ಶಾಲೆಗಳು, ಹಾಲಿನ ಡೈರಿ, ೧೦೦೦ಕ್ಕೂ ಅಧಿಕ ಕುಟುಂಬಗಳು ವಾಸಿಸುವ ಜನ ಪ್ರದೇಶವಾಗಿರುತ್ತದೆ. ಅದಲ್ಲದೇ “ಸಿರಿ” ಗ್ರಾಮೋದ್ಯೋಗ ಸಂಸ್ಥೆಯ ನೂತನ ಉತ್ಪಾದನಾ ಘಟಕವು ಸಂಪರ್ಕ ರಸ್ತೆಯ ಬದಿಯಲ್ಲೇ ನೂತನವಾಗಿ ಪ್ರಾರಂಭಗೊAಡಿದ್ದು ಈ ಪ್ರದೇಶದ ನಗರೀಕರಣಕ್ಕೆ ಹೊಸ ಮೆರುಗನ್ನು ನೀಡಿದೆ. ಪ್ರಸ್ತುತ ಈ ಸಂಪರ್ಕ ರಸ್ತೆಯನ್ನು ಬೆಳ್ತಂಗಡಿ – ಉಪ್ಪಿನಂಗಡಿ ಮುಖಾಂತರ ಪುತ್ತೂರನ್ನು ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆಯನ್ನಾಗಿ ಉಪಯೋಗಿಸುತ್ತಿದ್ದು, ಸದರಿ ರಸ್ತೆಯನ್ನು ಅಭಿವೃದ್ಧಿ ಪಡಿಸುವುದು ಸೂಕ್ತವೆಂದು ಬೆಳ್ತಂಗಡಿ ನಗರ ಪಂಚಾಯತ್ ಆಡಳಿತ ಮಂಡಳಿಯು ತೀರ್ಮಾನಿಸಿದೆ.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಪ.ಪಂ. ಮುಖ್ಯ ಅಧಿಕಾರಿ ರಾಜೇಶ್, ಇಂಜಿನಿಯರ್ ಮಹಾವೀರ ಅರಿಗ, ಸದಸ್ಯರಾದ ಲೋಕೇಶ್, ಅಂಬರೀಶ್, ಪ್ರಮುಖರಾದ ರಾಜೇಶ್ ನಾಯಕ್, ಕರುಣಾಕರ, ಭುಜಂಗ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.