ಉಜಿರೆ: ದೇವರು, ಗುರುಗಳು ಮತ್ತು ಶಾಸ್ತ್ರದಲ್ಲಿ ದೃಢನಂಬಿಕೆಯೊಂದಿಗೆ ಸಮ್ಯಕ್ದರ್ಶನ, ಸಮ್ಯಕ್ಜ್ಞಾನ ಮತ್ತು ಸಮ್ಯಕ್ಚಾರಿತ್ರ್ಯ ಎಂಬ ರತ್ನತ್ರಯ ಧರ್ಮದ ಅನುಷ್ಠಾನ ಹಾಗೂ ಪಂಚಾಣುವೃತಗಳ ಪಾಲನೆ ಮಾಡಿದಾಗ ನಮ್ಮ ಜೀವನ ಪಾವನವಾಗುತ್ತದೆ. ಮತಿ ಇದ್ದಂತೆ ಗತಿ, ಸದ್ಗತಿ ದೊರಕುತ್ತದೆ ಎಂದು ಮೂಡಬಿದ್ರೆ ಜೈನಮಠದ ಪೂಜ್ಯ ಚಾರುಕೀರ್ತಿಭಟ್ಟಾರಕ ಸ್ವಾಮೀಜಿ ಹೇಳಿದರು.
ಅವರು ಮೇ 29ರಂದು ಬೆಳ್ತಂಗಡಿಯಲ್ಲಿ ಜೈನಪೇಟೆಯಲ್ಲಿರುವ ರತ್ನತ್ರಯ ತೀರ್ಥಕ್ಷೇತ್ರದಲ್ಲಿ ಮಾಲಾಡಿಗುತ್ತು ದಿ. ಎಸ್. ರತ್ನರಾಜ ಅಜ್ರಿ ಅವರ ಆತ್ಮಶಾಂತಿಗಾಗಿ ಪತ್ನಿ ಮತ್ತು ಮಕ್ಕಳು ಹಾಗೂ ಕುಟುಂಬಸ್ಥರು ನಡೆಸಿದ ೫೦೪ ಕಲಶ ಅಭಿಷೇಕ, ದೇವರ ಉತ್ಸವ ಸಂದರ್ಭದಲ್ಲಿ “ರತ್ನತ್ರಯ ಸಿದ್ಧಿಸೋಪಾನ” ಎಂಬ ಶಾಸ್ತçದಾನ ಕೃತಿಯನ್ನು ಬಿಡುಗಡೆಗೊಳಿಸಿ ಮಂಗಲಪ್ರವಚನ ನೀಡಿದರು.

ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆಎಲ್ಲಾ ಶ್ರಾವಕರು ನಿತ್ಯವೂ ಜಪ, ತಪ, ಧ್ಯಾನ, ಸ್ವಾಧ್ಯಾಯ ಮೊದಲಾದ ಷಟ್ಕರ್ಮಗಳನ್ನು ಮಾಡಿದರೆ ಆತ್ಮನ ಪಾಪಕರ್ಮಗಳ ಕ್ಷಯವಾಗಿ ಅಕ್ಷಯ ಸುಖವನ್ನೀಯುವ ಮೋಕ್ಷ ಪ್ರಾಪ್ತಿಯಾಗುತ್ತದೆ. ಆತ್ಮನೇ ಪರಮಾತ್ಮನಾಗಬಲ್ಲ. ಮಾನವ ಜನ್ಮದಲ್ಲಿ ಮಾತ್ರ ಮೋಕ್ಷಸಾಧನೆ ಸಾಧ್ಯ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.
ಮಿತ್ರಸೇನ ಜೈನ್, ಅಳದಂಗಡಿ ಕಾರ್ಯಕ್ರಮ ನಿರ್ವಹಿಸಿದರು.
ರತ್ನತ್ರಯ ತೀರ್ಥಕ್ಷೇತ್ರದ ಅನುವಂಶೀಯ ಆಡಳಿತ ಮೊಕ್ತೇಸರ ಕೆ. ಜಯವರ್ಮರಾಜ ಬಳ್ಳಾಲ್, ಸಮಿತಿ ಸದಸ್ಯ ಕೆ. ಪ್ರಸನ್ನ ಕುಮಾರ್, ಜೀವಂಧರ ಕುಮಾರ್ ಹಾಗೂ ಶ್ರಾವಕರು, ಶ್ರಾವಕಿಯರು ಉಪಸ್ಥಿತರಿದ್ದರು. ದೇವರ ಉತ್ಸವ ನಡೆಯಿತು. ಶಾಸ್ತçದಾನಕೃತಿಯನ್ನು ಎಲ್ಲರಿಗೂ ಸ್ವಾಧ್ಯಾಯಕ್ಕಾಗಿ ವಿತರಿಸಲಾಯಿತು.