ಕಕ್ಯಪದವು : 2024-25ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ 625 ರಲ್ಲಿ 624 ಅಂಕವನ್ನು ಪಡೆದು ರಾಜ್ಯಕ್ಕೆ ಎರಡನೆಯ ರ್ಯಾಂಕ್ ಹಾಗೂ ಬಂಟ್ವಾಳ ತಾಲೂಕಿಗೆ ಮತ್ತು ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದು ಸಾಧನೆ ಮಾಡಿದ ಪ್ರಾರ್ಥನಾ ಎಚ್ ಕೆ ಇವರನ್ನು ಸಂಸ್ಥೆಯ ಆಡಳಿತ ಮಂಡಳಿಯ ಸಂಚಾಲಕರಾದ ಬಬಿತಾ ರೋಹಿನಾಥ್, ಕಾರ್ಯದರ್ಶಿಯಾದ ಶಿವಾನಿ ರೋಹಿನಾಥ್, ಹಾಗೂ ಟ್ರಸ್ಟಿಗಳಾದ ಜಯಾನಿ ರೋಹಿನಾಥ್ ಮತ್ತು ಯಜ್ಞೇಶ್ ರಾಜ್ ಇವರ ಸಮ್ಮುಖದಲ್ಲಿ ಶಾಲು ಹೊದಿಸಿ, ಹಾರ ಹಾಕಿ, ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಸಂಸ್ಥೆಯ ಟ್ರಸ್ಟಿಯಾದ ಯಜ್ಞೇಶ್ ರಾಜ್ ವಿದ್ಯಾರ್ಥಿನಿಯ ಶ್ರಮ, ತಂದೆ ತಾಯಿಯ ಪ್ರೋತ್ಸಾಹ, ಶಾಲೆಯಲ್ಲಿ ಶಿಕ್ಷಕರು ನೀಡಿದ ಮಾರ್ಗದರ್ಶನ ಫಲವಾಗಿ ಉತ್ತಮ ಫಲಿತಾಂಶ ಬರಲು ಸಾಧ್ಯವಾಯಿತು ಎಂದು ಹೇಳುತ್ತ , ವಿದ್ಯಾರ್ಥಿನಿಯ ಸಾಧನೆ ಕುರಿತು ಅಭಿನಂದಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಜೋಸ್ಟನ್ ಲೋಬೊ ವಿದ್ಯಾರ್ಥಿನಿಯ ಮುಂದಿನ ಜೀವನಕ್ಕೆ ಶುಭ ಹಾರೈಸಿದರು.
ಈ ಕಾರ್ಯಕ್ರಮವನ್ನು ಶಾಲಾ ಸಹಶಿಕ್ಷಕಿ ಸಂಗೀತ ಎಚ್ ನಿರೂಪಿಸಿ ,ವಂದಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಬೋಧಕ-ಬೋಧಕೇತರ ವರ್ಗ ಹಾಗೂ ಪೋಷಕರ ವೃಂದ ಭಾಗವಹಿಸಿದರು.