ಪುಂಜಾಲಕಟ್ಟೆ :ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಜ್ಞಾನೇಶ್, ದ.ಕ ಜಿಲ್ಲಾ ಪ್ರಧಾನ ಮಂತ್ರಿ ಪೋಷಣ ಅಭಿಯಾನದ ಶಿಕ್ಷಣಾಧಿಕಾರಿ, ಡಯಟ್ ಮಂಗಳೂರಿನ ಹಿರಿಯ ಉಪನ್ಯಾಸಕರಾದ ಶಶಿಧರ್ ಜಿ. ಎಸ್ ಹಾಗೂ ಶ್ರೀಮತಿ ಫಾತಿಮಾ ಬಿ ಇವರ ತಂಡ 2025 -26 ಸಾಲಿನ ಶೈಕ್ಷಣಿಕ ಪ್ರಗತಿ ಚಿಂತನೆಗಾಗಿ ಮಿಂಚಿನ ಸಂಚಾರ ಕಾರ್ಯಕ್ರಮದಡಿಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಪೂಂಜಾಲಕಟ್ಟೆಗೆ ಭೇಟಿ ನೀಡಿದರು.

ಅವರು ಶಾಲಾ ವಿದ್ಯಾರ್ಥಿಗಳ ದಾಖಲಾತಿ ಹಾಗೂ ಹಾಜರಾತಿ ಮತ್ತು ಕಳೆದ ವರ್ಷದ ಹತ್ತನೇ ತರಗತಿಯ ಫಲಿತಾಂಶದ ವಿಶ್ಲೇಷಣೆ, ಶಾಲೆಗೆ ಮಂಜೂರಾದ ಹುದ್ದೆಗಳ ಬಗ್ಗೆ, ದಾಖಲಾತಿ ಆಂದೋಲನದ ಪ್ರಗತಿಯ ವಿಚಾರ, ಶಾಲಾ ವೇಳಾಪಟ್ಟಿ ಮತ್ತು ಕ್ರಿಯಾಯೋಜನೆ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸಭೆಯ ಬಗ್ಗೆ, ಪೋಷಕರ ಮತ್ತು ತಾಯಂದಿರ ಸಭೆಯ ನಿರ್ವಹಣೆಯ ಕುರಿತು, ಶಾಲಾ ಪರಿಸರದ ಕುರಿತು, ವಿದ್ಯಾರ್ಥಿಗಳಿಗೆ ನೀಡುತ್ತಿರುವ ಪ್ರೋತ್ಸಾಹದಾಯಕ ಯೋಜನೆಗಳಾದ ಸಮವಸ್ತ್ರ, ಪಠ್ಯಪುಸ್ತಕ, ಅಕ್ಷರ ದಾಸೋಹದ ಕುರಿತು, ಗ್ರಂಥಾಲಯ, ಪ್ರಯೋಗಾಲಯ, ವಾಚನಾಲಯ, ಇ- ಕಲಿಕಾ ಕೇಂದ್ರ, ಶೈಕ್ಷಣಿಕ ಬಲವರ್ಧನೆ, ಶಾಲಾ ಶೈಕ್ಷಣಿಕ ಸಾಧನೆ, ಶೌಚಾಲಯದ ಲಭ್ಯತೆ, ಕುಡಿಯುವ ನೀರಿನ ಲಭ್ಯತೆ, ಆಟದ ಮೈದಾನದ ಲಭ್ಯತೆ, ಶಾಲಾ ಕೈತೋಟ, ಶಾಲಾ ಕಟ್ಟಡ ನಿರ್ವಹಣೆ, ನನ್ನ ಶಾಲೆ ನಮ್ಮ ಜವಾಬ್ದಾರಿ ಕುರಿತು ವಿವರವಾಗಿ ಪರಿಶೀಲಿಸಿ ಸೂಕ್ತ ಸಲಹೆ ,ಸೂಚನೆ ಹಾಗೂ ಮಾರ್ಗದರ್ಶನವನ್ನು ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪ ಪ್ರಾಂಶುಪಾಲರಾದ ಉದಯಕುಮಾರ್ ಬಿ ಅಧಿಕಾರಿಗಳನ್ನು ಸ್ವಾಗತಿಸಿ, ಶಿಕ್ಷಕ ಬಳಗ ಮತ್ತು ಸಿಬ್ಬಂದಿಗಳು ಬರಮಾಡಿಕೊಂಡು, ಸಹ ಶಿಕ್ಷಕ ಧರಣೇಂದ್ರ ಕೆ ಧನ್ಯವಾದ ಸಲ್ಲಿಸಿದರು.