ಬೆಳ್ತಂಗಡಿ: ಜಾಗತಿಕ ತಾಪಮಾನ ಹೆಚ್ಚಲು ಪ್ರಕೃತಿ ನಾಶವೇ ಮುಖ್ಯ ಕಾರಣವಾಗಿದ್ದು, ಇದನ್ನು ಕಡಿಮೆ ಮಾಡಲು ಸಸಿಗಳನ್ನು ನೆಟ್ಟು ಪ್ರಕೃತಿಯನ್ನು ಸಂರಕ್ಷಿಸುವುದೇ ಈಗಿರುವ ಏಕೈಕ ಮಾರ್ಗವಾಗಿದೆ. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆಸಬೇಕಾದ ಅಗತ್ಯವಿದೆ ಎಂದು ಬೆಳ್ತಂಗಡಿ ರೋಟರಿಕ್ಲಬ್ ಅಧ್ಯಕ್ಷ ಪೂರನ್ ವರ್ಮ ಹೇಳಿದರು.
ಅವರು ಜೂ.9ರಂದು ಸಾಮಾಜಿಕ ಅರಣ್ಯ ಇಲಾಖೆ ಬೆಳ್ತಂಗಡಿ, ರೋಟರಿ ಕ್ಲಬ್ ಬೆಳ್ತಂಗಡಿ ಹಾಗೂ ಸಿರಿ ಕ್ಲಬ್ ಬೆಳ್ತಂಗಡಿ ಇದರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಿರಿ ಕೇಂದ್ರ ಕಚೇರಿಯಲ್ಲಿ ನಡೆದ ‘ವನಮಹೋತ್ಸವ’ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಸಸಿ ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಉಜಿರೆ ಸಂಧ್ಯಾ ಟ್ರೇಡರ್ಸ್ನ ಮಾಲಕ ಹಾಗೂ ಸರಿ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರಾದ ರಾಜೇಶ್ ಪೈ ಅವರು ಮಾತನಾಡಿ, ನಾವು ನಮ್ಮ ಹಿರಿಯರು ಸಂರಕ್ಷಿಸಿದ ಪರಿಸರವನ್ನು ಅನುಭವಿಸುತ್ತಿದ್ದೇವೆ. ಪ್ರಕೃತಿಗೆ ನಮ್ಮ ಕೊಡುಗೆ ಏನು ಎಂಬುದನ್ನು ಪ್ರತಿಯೊಬ್ಬರು ಚಿಂತನೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಿರಿ ಕ್ಲಬ್ನ ಗೌರವಾಧ್ಯಕ್ಷರಾದ ಕೆ.ಎನ್ ಜನಾರ್ದನ್ ಅವರು ಮಾತನಾಡಿ, ಇಂದು ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯನ್ನು ನಾಶ ಮಾಡಿ ಕಾಂಕ್ರೀಟ್ ಕಟ್ಟಡ, ಕಾಂಕ್ರೀಟ್ ರಸ್ತೆ ಮೊದಲಾದ ಕಾರ್ಯಗಳು ನಡೆಯುತ್ತಿದ್ದು, ಜಾಗತಿಕ ತಾಪಮಾನ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಇದಕ್ಕಾಗಿ ಅರಣ್ಯವನ್ನು ಹೆಚ್ಚಿಸಲು ಗಿಡಗಳನ್ನು ನೆಡಬೇಕು ಎಂದು ತಿಳಿಸಿದರು.

ಸಾಮಾಜಿಕ ಅರಣ್ಯ ಇಲಾಖೆಯ ಉಪವಲಯಾರಣ್ಯಾಧಿಕಾರಿ ಅಶೋಕ್ ಪ್ರಸ್ತಾವಿಕವಾಗಿ ಮಾತನಾಡಿ, ಸಂಘ-ಸಂಸ್ಥೆಗಳು ಸಸಿಗಳನ್ನು ನೆಟ್ಟು ಪೋಷಿಸುವ ಕಾರ್ಯಕ್ರಮಕ್ಕೆ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ವೇದಿಕೆಯಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ರಾವ್, ಸಿರಿ ಕ್ಲಬ್ ಅಧ್ಯಕ್ಷೆ ಕು| ಹರ್ಷಿತಾ ಉಪಸ್ಥಿತರಿದ್ದರು.
ಅಶ್ಚಿನಿ ಮತ್ತು ಸುವೀಕ್ಷಾ ಇವರ ಪ್ರಾರ್ಥನೆ ಬಳಿಕ ಸರಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಿರಿ ಕ್ಲಬ್ನ ಪ್ರಧಾನ ಸಂಚಾಲಕ ಪ್ರಸನ್ನ ಯು. ಸ್ವಾಗತಿಸಿದರು. ಆಹಾರ ಗೊದಾಮು ಜಿ.ಎಂ ಜೀವನ್ ಕುಮಾರ್ ಮತ್ತು ಸಿರಿ ಕ್ಲಬ್ನ ಕೋಶಾಧಿಕಾರಿ ಸತೀಶ್ ಕಾರ್ಯಕ್ರಮ ನಿರೂಪಿಸಿ, ಸಿರಿ ಕ್ಲಬ್ ಅಧ್ಯಕ್ಷೆ ಕು| ಹರ್ಷಿತಾ ಧನ್ಯವಾದವಿತ್ತರು.