
ಬೆಳ್ತಂಗಡಿ: ಮಳೆ ಹಾನಿ- ವಿಪತ್ತು ನಿರ್ವಹಣೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಯವರು ನೀಡಿರುವ ಸೂಚನೆಯಂತೆ ಬೆಳ್ತಂಗಡಿ ತಾ. ಪಂ. ಸಭಾಂಗಣದಲ್ಲಿ ತಹಸೀಲ್ದಾರ್ ಪೃಥ್ವಿ ಸಾನಿಕಂ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಭವಾನಿ ಶಂಕರ್ ರವರು ಲೋಕೋಪಯೋಗಿ ಇಲಾಖೆ, ಶಿಕ್ಷಣ ಇಲಾಖೆ, ಮೆಸ್ಕಾಂ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳ ಸಭೆ ನಡೆಸಿ, ಜಿಲ್ಲಾಧಿಕಾರಿಗಳ ಆದೇಶದಂತೆ ಕ್ರಮ ವಹಿಸಲು ಸೂಚಿಸಿದರು.
ಗುಡ್ಡ ಜರಿತ ಉಂಟಾಗಬಹುದಾದ ಸ್ಥಳದಲ್ಲಿ ಅಥವಾ ಹೊಳೆ, ತೊರೆ ಬದಿಯಲ್ಲಿರುವ ಮನೆಗಳವರಿಗೆ ವಿಪರೀತ ಮಳೆಯ ಅವಧಿಯಲ್ಲಿ ಮನೆಯನ್ನು ತೆರವುಗೊಳಿಸಿ ಕಾಳಜಿ ಕೇಂದ್ರ ಅಥವಾ ಸಂಬಂಧಿಕರ ಮನೆಗೆ ತೆರಳುವಂತೆ ನೋಟೀಸನ್ನು ನೀಡುವುದು, ಗುಡ್ಡಜರಿತ ಉಂಟಾಗಬಹುದಾದ ಸ್ಥಳಗಳಲ್ಲಿ, ದಾಟಲು ಅಪಾಯಕಾರಿಯಾಗಿರುವ ಕಾಲುಸಂಕ, ಸೇತುವೆ ಇತ್ಯಾದಿ ಸ್ಥಳಗಳನ್ನು ಗುರುತಿಸಿ ಎಚ್ಚರಿಕೆ ಫಲಕಗಳ ಅಳವಡಿಕೆ, ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯನ್ನು ಕರೆದು ಚರ್ಚಿಸುವುದು, ಶಾಲೆ ಮತ್ತು ಅಂಗನವಾಡಿ ಕಟ್ಟಡಗಳು ಶಿಥಿಲವಾಗಿದ್ದಲ್ಲಿ ಕೂಡಲೇ ವರದಿ ನೀಡಿ ತರಗತಿಗಳನ್ನು ನಡೆಸಲು ಬದಲಿ ವ್ಯವಸ್ಥೆ ಮಾಡುವುದು ಇತ್ಯಾದಿಗಳ ಬಗ್ಗೆ ಕೂಡಲೇ ಕ್ರಮ ವಹಿಸುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಆಡಳಿತ ಅಧಿಕಾರಿಗಳಿಗೆ ಸೂಚಿಸಲಾಯಿತು.