







ಬೆಳ್ತಂಗಡಿ: ಮಳೆಗಾಲದ ಅವಧಿಯಲ್ಲಿ ಉಂಟಾಗಬಹುದಾದ ವಿಪತ್ತುಗಳ ನಿರ್ವಹಣೆಗಾಗಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಯವರು ಸಭೆ ನಡೆಸಿ ನೀಡಿರುವ ಆದೇಶದಂತೆ ಗುಡ್ಡ ಜರಿತ ಉಂಟಾಗಬಹುದಾದ ಸ್ಥಳದಲ್ಲಿ ಅಥವಾ ಹೊಳೆ/ತೊರೆ ಬದಿಯಲ್ಲಿರುವ ಮನೆಗಳವರಿಗೆ ವಿಪತ್ತು ನಿರ್ವಹಣಾ ಕಾಯ್ದೆ 2005ರಂತೆ ಗ್ರಾಮ ಪಂಚಾಯತಿಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಮತ್ತು ಸಿಬ್ಬಂದಿಗಳು ನೋಟೀಸನ್ನು ನೀಡುತ್ತಿದ್ದಾರೆ.
ಅಳದಂಗಡಿ, ಬಾರ್ಯ ಬೆಳಾಲು ಧರ್ಮಸ್ಥಳ ಕಳಿಯ ಕಾಶಿಪಟ್ಣ ಕೊಕ್ಕಡ ಕೊಯ್ಯುರು ಮಚ್ಚಿನ ಮಾಲಾಡಿ ಮಲವಂತಿಗೆ ಮರೋಡಿ ಮುಂಡಾಜೆ ನಾರಾವಿ ಪಡಂಗಡಿ ತೆಕ್ಕಾರು ಮಿತ್ತಬಾಗಿಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈವರೆಗೆ ಸುಮಾರು 190 ಕುಟುಂಬಗಳಿಗೆ ನೋಟೀಸನ್ನು ನೀಡಿ ಅಧಿಕ ಮಳೆಯಾದ ಸಂದರ್ಭದಲ್ಲಿ ತೆರೆಯಲಾಗುವ ಕಾಳಜಿ ಕೇಂದ್ರಗಳಿಗೆ ಅಥವಾ ಸಂಬಂಧಿಕರ ಮನೆಗಳಿಗೆ ತೆರಳುವಂತೆ ಸೂಚಿಸಲಾಗಿದೆ. ನೋಟಿಸು ನೀಡುವ ಕಾರ್ಯ ಮುಂದುವರಿದಿದೆ.
ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 6 ಮನೆಗಳಿಗೆ ನೋಟೀಸು ನೀಡಲಾಗಿದೆ.