ಸುಬ್ರಹ್ಮಣ್ಯ : ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲಿಜನ್ ಹಾಗೂ ಡಾ. ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ಇದರ ಸಹಯೋಗದಲ್ಲಿ ಜೂ. 8 ರಂದು ಸುಬ್ರಹ್ಮಣ್ಯ ಶ್ರೀ ಕ್ಷೇತ್ರದ ಪವಿತ್ರ ಕುಮಾರಧಾರ ನದಿ ಪರಿಸರ ಹಾಗೂ ಕುಲಕುಂದದವರೆಗೆ ಹಾದುಹೋಗುವ ರಸ್ತೆಯ ಬದಿಗಳಲ್ಲಿ ವಿಶಾಲ ಸ್ವಚ್ಛತಾ ಅಭಿಯಾನ ನಡೆಯಿತು.
ಅಭಿಯಾನದ ವೇಳೆ ನದಿ ತಟ ಮತ್ತು ರಸ್ತೆಯ ಬದಿಯಲ್ಲಿ ಸಂಗ್ರಹವಾಗಿದ್ದ ಪ್ಲಾಸ್ಟಿಕ್ ಬಾಟಲಿಗಳು, ಚೀಲಗಳು, ಕಸದ ಕಡ್ಡಿಗಳು ಮತ್ತು ಇತರೆ ತ್ಯಾಜ್ಯ ವಸ್ತುಗಳನ್ನು ಚೀಲಗಳಲ್ಲಿ ತುಂಬಿ ಸಮೀಪದ ತ್ಯಾಜ್ಯ ಸಂಗ್ರಹಣಾ ಘಟಕಕ್ಕೆ ಸುರಕ್ಷಿತವಾಗಿ ಸಾಗಿಸಲಾಯಿತು. ಪರಿಸರದ ಶುದ್ಧತೆ ಹಾಗೂ ಕ್ಷೇತ್ರದ ಸ್ವಚ್ಛತೆಗೆ ಒತ್ತು ನೀಡುವ ಈ ಅಭಿಯಾನ ಜನಮನ್ನಣೆಗೆ ಪಾತ್ರವಾಯಿತು.
ಈ ಸಂದರ್ಭಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ವೈನಾಡ್ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ನ ಪೂರ್ವ ಅಧ್ಯಕ್ಷ ಹಾಗೂ ರಾಷ್ಟ್ರೀಯ ನಿರ್ದೇಶಕರಾದ ಸೀ. ವಿಜಯಕುಮಾರ್ ಅವರು ಮಾತನಾಡಿ, “ಸುಬ್ರಹ್ಮಣ್ಯದಲ್ಲಿ ಪ್ರತೀ ರವಿವಾರ ನಡೆಯುತ್ತಿರುವ ಈ ಸ್ವಚ್ಛತಾ ಕಾರ್ಯ ಶ್ಲಾಘನೀಯವಾಗಿದೆ. ಸಾವಿರಾರು ಭಕ್ತರು ಆಗಮಿಸುವ ಈ ಕ್ಷೇತ್ರದಲ್ಲಿ ಅವರ ಆರೋಗ್ಯದ ಹಿತ ದೃಷ್ಟಿಯಿಂದ ಹಾಗೂ ಸಾರ್ವಜನಿಕ ಸ್ಥಳಗಳ ಸ್ವಚ್ಛತೆಗೆ ಇದೊಂದು ಉತ್ತಮ ಮಾದರಿ ಕಾರ್ಯವಾಗಿದೆ,” ಎಂದು ಹೇಳಿದರು. ಅವರು ಮುಂದಿನ ದಿನಗಳಲ್ಲಿ ಈ ಸೇವಾ ಚಟುವಟಿಕೆ ನಿರಂತರವಾಗಿ ನಡೆಯಲೆಂದು ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಲಿಜನ್ ಅಧ್ಯಕ್ಷ ಡಾ. ರವಿ ಕಠ್ಯಪದವು, ಸಂಸ್ಥಾಪಕ ಅಧ್ಯಕ್ಷ ವಿಶ್ವನಾಥ ನಡುತೋಟ, ನಿಯೋಜಿತ ಅಧ್ಯಕ್ಷ ಎಚ್.ಎಲ್. ವೆಂಕಟೇಶ್, ಕಾರ್ಯದರ್ಶಿ ಗೋಪಾಲ ಎಣ್ಣೆ ಮಜ್ಜಲರ್, ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ನ ಪ್ರಮುಖರಾದ ರವಿ ಕುಮಾರಧಾರ, ಜನಾರ್ದನ ಗೌಡ ಹಾಗೂ ಇನ್ನಿತರ ಸದಸ್ಯರು ಸಕ್ರಿಯವಾಗಿ ಭಾಗವಹಿಸಿದ್ದರು.