ವೇಣೂರು: ಮಳೆಗಾಲ ಆರಂಭವಾದಂತೆ ರೋಗಗಳು ಹೆಚ್ಚಾಗುತ್ತವೆ. ಆಸ್ಪತ್ರೆಗಳಿಗೆ ನಾನಾ ಕಾರಣಗಳಿಂದ ಬರುವ ರೋಗಿಗಳಿಗೆ ಆಸ್ಪತ್ರೆ ಅವಶ್ಯಕತೆ ಹೆಚ್ಚಾಗಿರುತ್ತದೆ ಆದರೆ ತಾಲೂಕಿನಲ್ಲಿರುವ ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನರಿಗೆ ಕಾಲ ಕಾಲಕ್ಕೆ ವೈದ್ಯರು ಸಿಗದೆ ಹೈರಣಾಗಿದ್ದಾರೆ.
ತಾಲೂಕಿನ ಹೋಬಳಿ ಕೇಂದ್ರವಾಗಿರುವ ವೇಣೂರು ಅಧಿಕ ಜನಸಂಖ್ಯೆ ಹೊಂದಿದ್ದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಫೆಬ್ರವರಿ ತಿಂಗಳಿನಿಂದ ವೈದ್ಯರ ಕೊರತೆ ಕಾಡುತಿದೆ. ವಾರದಲ್ಲಿ 2 ದಿನ ಅಳದಂಗಡಿ ಪಿಹೆಚ್ಸಿಯ ವೈದ್ಯರು ಲಭ್ಯವಿದ್ದಾರೆ ಆದರೆ ದಿನ ನಿತ್ಯ ಚಿಕಿತ್ಸೆಗೆ ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು ಕಾಲ ಕಾಲಕ್ಕೆ ವೈದ್ಯರು ಸಿಗದೆ ರೋಗಿಗಳು ಬೇಸತ್ತು ಹೋಗಿದ್ದಾರೆ.
ವೇಣೂರು ಪೇಟೆಯಲ್ಲಿ ರಾಜ್ಯ ಹೆದ್ದಾರಿ ಹಾದು ಹೋಗಿದ್ದು ಅಪಘಾತದಂತಹ ತುರ್ತು ಸಂದರ್ಭದಲ್ಲಿ ತಕ್ಷಣಕ್ಕೆ ಪ್ರಾಥಮಿಕ ಚಿಕಿತ್ಸೆ ನೀಡಲು ವೈದ್ಯರ ಅಗತ್ಯತೆ ಇದ್ದು ಈ ವ್ಯವಸ್ಥೆ ಆಗಬೇಕಿದೆ. ಒಂದು ವಿಭಾಗದ ಜವಾಬ್ದಾರಿಯುತರು ಇತರ ವಿಭಾಗದ ಕಡೆಗೂ ಗಮನ ಹರಿಸಬೇಕಾದ ಅನಿವಾರ್ಯತೆ ಇರುವುದರಿಂದ ಇರುವ ಬೆರಳೆಣಿಕೆ ಸಿಬ್ಬಂದಿ ಅಸಹಾಯಕರಾಗಿ ಕರ್ತವ್ಯ ನಿರ್ವಹಿಸಬೇಕಿದೆ. ಅಂಡಿಂಜೆ, ಬಜಿರೆ, ಕರಿಮಣೇಲು, ಗೂಂಡೂರಿ, ಹೊಸಂಗಡಿ, ಆರಂಬೋಡಿ, ಮೂಡುಕೋಡಿ ಗ್ರಾಮಗಳನ್ನು ಒಳಗೊಂಡಿರುವ ವೇಣೂರು ಪ್ರಾಥರ್ಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರ ಅವಶ್ಯಕತೆ ಹೆಚ್ಚಿದೆ. ಮಳೆಗಾಲ ಆರಂಭಗೊಂಡರೆ ಮಲೇರಿಯಾ,. ಡೆಂಗ್ಯೂ ಸಹಿತ ನಾನ ಜ್ವರ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತದೆ. ಸಂಜೆ 4;30 ಗಂಟೆಯಾದರೆ ದವಾಖಾನೆ ಮುಚ್ಚುತ್ತದೆ ಎಂಬುವುದು ಸಾರ್ವಜನಿಕರ ಆರೋಪ. ಜನರು ಒಂದಷ್ಟು ವ್ಯವಸ್ಥೆಯ ವಿರುದ್ಧ ದೂರುತ್ತಿದ್ದಾರೆ. ಎಲ್ಲದರ ಅರಿವಿದ್ದರೂ ಇಲಾಖೆ ಯಾಕೆ ಆ ಬಗ್ಗೆ ಇನ್ನೂ ಗಮನ ಹರಿಸುತ್ತಿಲ್ಲ ಎಂಬುದೇ ಪ್ರಶ್ನೆಯಾಗಿ ಉಳಿದಿದೆ. ಸಿಬ್ಬಂದಿ ಕೊರತೆ ನೀಗಿಸಿ ಎಲ್ಲ ವಿಭಾಗಗಳಿಗೆ ಸಿಬ್ಬಂದಿ ನೇಮಕವಾಗಬೇಕು. ವೈದ್ಯರನ್ನು ಒದಗಿಸಬೇಕೆಂಬ ಸಾರ್ವಜನಿಕರ ಬೇಡಿಕೆಯಾಗಿದ್ದು ಸರಕಾರ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಜನರು ಎಚ್ಚರಿಕೆ ನೀಡಿದ್ದಾರೆ.
ಖಾಯಂ ವೈದ್ಯರು ಬೇಕು: ವೇಣೂರು ತಾಲೂಕಿನ ಹೋಬಳಿ ಕೇಂದ್ರವಾಗಿದೆ, ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರು ಬೇಕು. ಸಾರ್ವಜನಿಕರ ಬೇಡಿಕೆಯನ್ನು ಸರಕಾರ ಈಡೇರಿಸದಿದ್ದಲ್ಲಿ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ರಾಜೇಶ್ ಮೂಡುಕೋಡಿ ತಿಳಿಸಿದ್ದಾರೆ.