ಬೆಳ್ತಂಗಡಿ: ಕೆಂಪು ಕಲ್ಲು ಮತ್ತು ಮರಳು ಕಟ್ಟಡ ನಿರ್ಮಾಣಕ್ಕೆ ಅಗತ್ಯವಾಗಿ ಬೇಕಾಗಿರುವಂತದ್ದು. ಆದರೆ ಸರಕಾರದ ಕಠಿಣ ಕಾನೂನಿಂದಾಗಿ ಕಟ್ಟಡ ನಿರ್ಮಾಣದಲ್ಲಿ ಸಮಸ್ಯೆಯಾಗಿರುವುದು ಮಾತ್ರವಲ್ಲದೆ, ಸಾವಿರಾರು ಕುಟುಂಬಗಳು ಬೀದಿಗೆ ಬೀಳುವಂತಹ ಸ್ಥಿತಿಯಲ್ಲಿದೆ. ಈ ಸಮಸ್ಯೆಗಳ ಕುರಿತು ಜನಪ್ರತಿನಿಧಿಗಳು ಯಾಕೆ ಮೌನ ಮುರಿಯುತ್ತಿಲ್ಲ ಎಂದು ಗುತ್ತಿಗೆದಾರ ಹಾಗೂ ಸಮಾಜ ಸೇವಕ ಡಾ. ರವಿ ಕಕ್ಕೆಪದವು ಪ್ರಶ್ನಿಸಿದ್ದಾರೆ.

ಈ ಕುರಿತು ಬಹಿರಂಗ ಪತ್ರ ಬರೆದಿರುವ ಅವರು, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪ್ರತೀ ರಾಜಕಾರಣಿಗಳ ಮನೆಗೆ, ಸರ್ಕಾರಿ ಕಟ್ಟಡಗಳಿಗೆ, ಸಾರ್ವಜನಿಕ ಬಡ ಕುಟುಂಬದವರಿಗೆ ಮನೆ ಅಥವಾ ಕಟ್ಟಡ ನಿರ್ಮಾಣಕ್ಕೆ ಕೆಂಪು ಕಲ್ಲುಗಳು ಬೇಕು. ಆದರೆ ಇದಕ್ಕೆ ಯಾಕೆ ಇಷ್ಟು ಕಠಿಣ ಕಾನೂನು? ಕೆಂಪು ಕಲ್ಲಿನ ಹಿಂದ ಅದಷ್ಟೋ ಬಡ ಕುಟುಂಬದ ಪರಿಶ್ರಮ ಇದೆಯೆಂದು ಜನಪ್ರತಿನಿಧಿಗಳು ಆಲೋಚನೆ ಮಾಡಿಲ್ಲ ಯಾಕೆ ? ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿಯೊಬ್ಬರಿಗೂ ಮನೆ ಕಟ್ಟಲು ಕೆಂಪು ಕಲ್ಲು ಬೇಕು. ಆದರೆ ಕೆಂಪ ಕೋರೆ ನಡೆಸುವವರ ವಿರುದ್ಧ ಸರ್ಕಾರ ದಿನಕ್ಕೊಂದು ಕಾನೂನು ತರುತ್ತಿದೆ. ಜನಪ್ರತಿನಿಧಿಗಳು, ಸಾರ್ವಜನಿಕರು ಇದನ್ನು ಯಾವತ್ತಾದರೂ ಪ್ರಶ್ನೆ ಮಾಡಿಲ್ಲ ಯಾಕೆ?
ಈಗ ಕೆಂಪು ಕಲ್ಲು ಸಾಗಾಟವೇ ಬಂದ್ ಆಗಿದೆ. ಇದರಿಂದಾಗಿ ಅದೆಷ್ಟು ಕುಟುಂಬಗಳು ಬೀದಿ ಪಾಲಾಗಿದ್ದಾರೆ ? ಇದರ ಬಗ್ಗೆ, ಜನಪ್ರತಿನಿಧಿಗಳು ಕಿಂಚಿತ್ತೂ ಚಿಂತೆ ಮಾಡಿಲ್ಲ ಯಾಕೆ..? ಕೆಂಪು ಕಲ್ಲು, ಮರಳು ಎಲ್ಲರಿಗೂ ಬೇಕು. ಆದರೆ ಸರ್ಕಾರ ನೀಡುತ್ತಿರುವ ಕಿರುಕುಳ ನಿಮಗರಿಯದಾಯಿತೇ ? ಅದಕ್ಕಾಗಿಯೇ ನಾವುಗಳು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಂದ್ ಗೆ ಕರೆ ನೀಡಿದ್ದು. ಒಂದು ಕೆಂಪು ಕಲ್ಲು ಪಾಯ ಮಾಡ ಬೇಕಾದರೆ ಸರ್ಕಾರ ನೀಡುವ ಆದೇಶಗಳನ್ನು ಪಾಲಿಸಿ ಕೆಂಪು ಕಲ್ಲು ಪಾಯ ಪ್ರಾರಂಭ ಮಾಡುವಾಗ ನಮ್ಮ ಅರ್ಧ ಜೀವ ಹೋಗಿರುತ್ತದೆ. ದಿನ ಹೋದ ಹಾಗೆ ಸರ್ಕಾರದ ಕಾನೂನು ಜಾಸ್ತಿ ಆಗಿ ಕೊನೆಗೆ ಕೆಂಪು ಕಲ್ಲು ಪಾಯವನ್ನೆ ಬಂದ್ ಮಾಡುವ ಅನಿವಾರ್ಯತೆ ಬಂದಿದೆ. ಈಗ ಆಗಿರುವುದೂ ಅದೇ. ಕೆಂಪು ಕಲ್ಲು ಸಾಗಾಟ ಆಗದಿದ್ದರೆ ಕೆಂಪು ಕಲ್ಲು ಕೋರೆಯಲ್ಲಿ ಕೆಲಸ ಮಾಡುವುದರಿಂದ ಹಿಡಿದು ಮನೆಕಟ್ಟುವ ಮೇಸ್ತ್ರಿಗಳು, ಹೆಲ್ಪರ್ ಗಳು, ಸೆಂಟ್ರಿಂಗ್ ಪ್ರೈಂಟಿಂಗ್ ಕೆಲಸಗಾರರು.. ಹೀಗೆ ದಕ್ಷಿಣ ಕನ್ನಡ ಜಿಲ್ಲೆಯ 25000 ರಿಂದ 30000 ಸಾವಿರ ಕಾರ್ಮಿಕರಿಗೆ ಕೆಲಸವಿಲ್ಲದೆ ಬೀದಿಪಾಲು ಆಗಿದ್ದಾರೆ. ಇದಕ್ಕೆ, ಕಾರಣ ಕರ್ತರು ಯಾರು ? ಸರ್ಕಾರ, ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು, ಸಾರ್ವಜನಿಕರು ಇನ್ನಾದರೂ ಎಚ್ಚೆತ್ತು ಕೊಂಡು ಕೆಂಪು ಕಲ್ಲು ಹಾಗೂ ಹೊಯಿಗೆ ಗಳಿಗೆ ನೀಡುವ ಪರವಾನಿಗೆಯ ಕಾನೂನು ಸಡಿಲಗೊಳಿಸಿ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಕೈಗೆಟುಕುವ ದರದಲ್ಲಿ ನೀಡ ಬೇಕೆಂದು ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳಲ್ಲಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಗಳಲ್ಲಿ ಬೇಡಿಕೊಳ್ಳುತ್ತೇವೆ ಎಂದವರು ಪತ್ರದಲ್ಲಿ ತಿಳಿಸಿದ್ದಾರೆ.