ಗುರುವಾಯನಕೆರೆ: ಪತಂಜಲಿ ಯೋಗ ಶಿಕ್ಷಣ ಸಮಿತಿಯ ಉಪ್ಪಿನಂಗಡಿ ತಾಲೂಕು, ಗುರುವಾಯನಕೆರೆ ನಮ್ಮ ಮನೆ ಮತ್ತು ಪಾಂಡುರಂಗ ಶಾಖೆ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂ. 21 ರಂದು ಆಚರಿಸಲಾಯಿತು.

ಶಾಸಕ ಹರೀಶ್ ಪೂಂಜಾರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಯೋಗ ದಿನಾಚರಣೆಯ ಮಹತ್ವ ತಿಳಿಸಿ ಶುಭಕೋರಿದರು. ಯೋಗ ಬಂಧು ಸಂತೋಷ್ ಕಾಪಿನಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಸಂಸ್ಕಾರ, ಸೇವೆ, ಶಿಕ್ಷಣದ ಮೂಲಕ ಯೋಗ ತರಬೇತಿಯನ್ನು ನಡೆಸುತ್ತಾ ಸ್ವಸ್ಥ ಸಮಾಜಕ್ಕೆ ಬುನಾದಿ ಹಾಕಿದೆ ಎಂದರು. ಪಾಂಡುರಂಗ ಶಾಖೆಯ ಯೋಗಬಂಧು ವಿದ್ಯಾನಾಯಕ್ ಅಮೃತವಚನ ವಾಚಿಸಿದರು.

ಪ್ರವೀಣರವರು ಪಂಚಾಂಗ ಪಠನ ಮಾಡಿದರು. ಯೋಗ ಶಿಕ್ಷಕ ದಯಾನಂದ ಯಾದವರು ಮಾನಸಿಕ ಸಿದ್ಧತೆ, ಉಸಿರಾಟ ಕ್ರಿಯೆ, ಗಣಪತಿ ನಮಸ್ಕಾರ ನಡೆಸಿಕೊಟ್ಟರು. ಶ್ರೀಮತಿ ಜಯಶ್ರೀ ಹಾಗೂ ಲೋಕೇಶ್ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ನಮ್ಮ ಮನೆ ಶಾಖೆಯ ಯೋಗ ಶಿಕ್ಷಕ ಶಿವಣ್ಣ ಆಯುಷ್ ಪಠ್ಯ ಕ್ರಮದಂತೆ ಯೋಗ ತರಬೇತಿಯನ್ನು ನಡೆಸಿಕೊಟ್ಟರು. ಶ್ರೀಮತಿ ಪ್ರಿಯ ಹಾಗೂ ವಿನಯರವರು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಯೋಗ ಶಾಖೆಯ ಮಾರ್ಗದರ್ಶಕರಾದ ಪ್ರದೀಪ್ ಆಚಾರ್ಯರವರು ಯೋಗ ದಿನಾಚರಣಾ ಕಾರ್ಯಕ್ರಮದ ಸಮಾಪನ ನಡೆಸಿಕೊಟ್ಟರು. ಎಲ್ಲಾ ಯೋಗ ಬಂಧುಗಳು ಜೊತೆ ಸೇರಿ ಅಗ್ನಿ ಹೋತ್ರ ನಡೆಸಲಾಯಿತು. ಸುಮಾರು 100ರಷ್ಟು ಯೋಗಬಂಧುಗಳು ಭಾಗವಹಿಸಿದ್ದರು.
ನಮ್ಮ ಮನೆ ಶಾಖೆಯ ಶ್ರೀಮತಿ ಸುಮಲತಾ ಸ್ವಾಗತಿಸಿದರು. ರಾಮಚಂದ್ರ ಶೆಟ್ಟಿ ವಂದಿಸಿದರು.











