
ಅಳದಂಗಡಿ: “ ಅಳದಂಗಡಿಯಲ್ಲಿ ಸರಕಾರಿ ಸೌಲಭ್ಯ ವಂಚಿತರಾದ ವೃದ್ಧ ಮಹಿಳೆಯ ಎಂಬ ಶೀರ್ಷಿಕೆ ಅಡಿಯಲ್ಲಿ ಬೆಳ್ತಂಗಡಿ ಸುದ್ದಿ ಉದಯ ವಾರ ಪತ್ರಿಕೆ ಜೂ.26 ರಂದು ವರದಿ ಪ್ರಕಟಿಸಿತ್ತು. ಇದಾದ ಬಳಿಕ ಒಂದಲ್ಲಾ ಒಂದು ಬೆಳವಣಿಗೆ ಆಗುತ್ತಿದ್ದು ಅಜ್ಜಿಯ ವ್ಯಥೆಗೆ ಮುಕ್ತಿಯ ಹಾದಿಗಲು ಕಾಣುತ್ತಿದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಅವರ ಸೂಚನೆ ಮೇರೆಗೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಮತ್ತು ಅಧಿಕಾರಿಗಳು ಜೂನ್ 27 ರಂದು ಸಂಜೆ ಡೀಕಮ್ಮ ಅಜ್ಜಿ ಮನೆಗೆ ಭೇಟಿ ನೀಡಿ ವಾಸ್ತವ್ಯ ದೃಢೀಕರಣ ಪತ್ರ ಹಾಗೂ ಆಹಾರ ಸಾಮಗ್ರಿಗಳ ಕಿಟ್ ನೀಡಿದರು. ಡೀಕಮ್ಮ ಅಜ್ಜಿಗೆ ವೋಟರ್ ಐಡಿ ಅರ್ಜಿ ಭರ್ತಿ ಮಾಡಿ ಚುನಾವಣಾ ಆಯೋಗದ ಸೈಟ್ ಗೆ ಅಪ್ ಲೋಡ್ ಮಾಡಲಾಗಿದೆ.ಇನ್ನೂ ಆಧಾರ್ ಮತ್ತು ಪಡಿತರ ಚೀಟಿ ಕೂಡ ಮಾಡಿ ಕೊಡಲಿದ್ದಾರೆ ಅಧಿಕಾರಿಗಳು.

ಸುದ್ದಿ ಉದಯ ವಾರ ಪತ್ರಿಕೆ ಬೆಳ್ತಂಗಡಿಯ ಜನರ ಧ್ವನಿಯಾಗಿ ಹಲವಾರು ವಿಶೇಷ ವರದಿಗಳನ್ನು ಪ್ರಕಟಿಸುತ್ತಿದೆ. ಜನಧ್ವನಿ ಎಂಬ ಶಿರ್ಷಿಕೆಯಡಿಯಲ್ಲಿ ಸುದ್ದಿಗಳನ್ನು ಬಿತ್ತರಿಸುತ್ತಿದೆ. ಹಲವಾರು ವಿಶೇಷ ವರದಿಗಳು ಪ್ರಕಟಗೊಂಡ ಬೆನ್ನಲ್ಲೇ ಪರಿಹಾರ ಹಾದಿ ಕೂಡ ಸಿಕ್ಕಿದೆ. ಇನ್ನೂ ಡೀಕಮ್ಮ ಅಜ್ಜಿಯ ವ್ಯಥೆಗೆ ಅಧಿಕಾರಿಗಳು ಸ್ಪಂದನೆ ನೀಡುವ ಮೂಲಕ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಪಾತ್ರರಾಗಿದ್ದಾರೆ. ಸುದ್ದಿ ಉದಯ ವಾರ ಪತ್ರಿಕೆಯ ವರದಿಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಜೊತೆಯಲ್ಲಿ ಅಳದಂಗಡಿ ಗ್ರಾಮ ಆಡಳಿತಾಧಿಕಾರಿ ವಿಜೇತ್.ಬಿ, ವೇಣೂರು ಆರ್.ಐ.ಕುಮಾರ್ ಸ್ವಾಮಿ, ಗ್ರಾಮ ಸಹಾಯಕಿ ಶಾರದಾ ,ಚಾಲಕ ಸಂತೋಷ್, ಸ್ಥಳೀಯ ನಿವಾಸಿ ಸಂತೋಷ್ ಜೊತೆಯಿದ್ದರು.











