ಅರಸಿನಮಕ್ಕಿ : ಮಕ್ಕಳಿಗೆ ತಂದೆ -ತಾಯಿ, ಶಿಕ್ಷಕರು, ರಾಷ್ಟ ಕಟ್ಟಿದ ಮಹಾಪುರುಷರು, ಸಮಾಜ ಸೇವಕರೇ ನಾಯಕರು ಮತ್ತು ಆದರ್ಶ. ಅವರ ತ್ಯಾಗ, ಪರಿಶ್ರಮವನ್ನು ಸದಾಕಾಲ ನೆನಪು ಮಾಡಿಕೊಳ್ಳಿ ಎಂದು ಅರಸಿನಮಕ್ಕಿ ಗ್ರಾ.ಪಂ. ‘ಅರಿವು ಕೇಂದ್ರ’ದ ಗೌರವ ಸಮಿತಿ ಸದಸ್ಯ ವೃಷಾಂಕ್ ಖಾಡಿಲ್ಕರ್ ಹೇಳಿದ್ದಾರೆ.
ಅವರು ಇಲ್ಲಿನ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ವಿದ್ಯಾರ್ಥಿ ಸಂಸತ್- 2025 ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ರಾಜಕಾರಣಿಗಳು, ಸಿನಿಮಾ ನಟರು, ಕ್ರಿಕೆಟ್ ನ ನಾಯಕರುಗಳನ್ನು ಅನುಕರಣೆ ಮಾಡದೇ, ದುಡ್ಡಿನ ಹಿಂದೆ ಹೋಗದೆ ಗುಣ, ಶಿಸ್ತು, ಸಂಸ್ಕಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಶಾಲೆ – ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘ ಗಳ ಚುನಾವಣೆ ನಡೆಸಿ ಶಾಸನ ಸಭೆಗಳ ತಿಳುವಳಿಕೆ ನೀಡುವುದು ಉತ್ತಮ ಕೆಲಸ. ಇದರಿಂದ ಭವಿಷ್ಯದಲ್ಲಿ ಈ ದೇಶ ಹೇಗಿರಬೇಕೆಂದು ಯೋಚಿಸಿ ಸಮರ್ಥ ನಾಯಕರನ್ನು ಆಯ್ಕೆ ಮಾಡಲು ವಿದ್ಯಾರ್ಥಿಗಳಿಗೆ ಸಾಧ್ಯವಾಗಲಿದೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಗಣೇಶ್ ಕುಲಾಲ್ ವಹಿಸಿ ಉತ್ತಮ ಫಲಿತಾಂಶ ಬರುವಲ್ಲಿ ಉತ್ತಮವಾಗಿ ಸೇವೆ ನೀಡುತ್ತಿರುವ ಶಾಲೆಯ ಶಿಕ್ಷಕ ವೃಂದವನ್ನು ಅಭಿನಂದಿಸಿದರು. ಶಾಲಾ ಮುಖ್ಯಶಿಕ್ಷಕರಾದ ಮಂಜುಳಾ ರವರು ಶಾಲೆಯ ಉನ್ನತಿಗೆ ಪೋಷಕರ ಸಹಕಾರವನ್ನು ಯಾಚಿಸಿದರು. ಅನೇಕ ಸೌಲಭ್ಯ ಗಳ ಕೊರತೆಯ ನಡುವೆಯೂ ಉತ್ತಮ ಫಲಿತಾಂಶವನ್ನು ಶಾಲೆ ಪಡೆಯುತ್ತಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಶಾಲಾ ಸಂಸತ್ ಪದಾಧಿಕಾರಿಗಳಿಗೆ ಮತ್ತು ಮಕ್ಕಳ ವಿವಿಧ ಸಮಿತಿಗಳಿಗೆ ಪ್ರಮಾಣ ಪತ್ರವನ್ನು ಹಸ್ತಾಂತರಿಸಲಾಯಿತು. ಶಾಲಾಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಲಿಂಗಪ್ಪ ಗೌಡ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕಿ ಮೀನಾಕ್ಷಿ ಪ್ರಮಾಣ ವಚನ ಬೋಧಿಸಿದರು.
ಇಂಗ್ಲಿಷ್ ಶಿಕ್ಷಕಿ ಚೇತನಾ ಸ್ವಾಗತಿಸಿ, ಶಿಕ್ಷಕ ಸುಧೀಂದ್ರ ವಂದಿಸಿದರು. ವಿಜ್ಞಾನ ಶಿಕ್ಷಕಿ ಚೇತನಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶಾಲಾಭಿವೃದ್ಧಿ ಸಮಿತಿ ಸದ್ಯಸರು ಮತ್ತು ವಿದ್ಯಾರ್ಥಿಗಳು ತರಕಾರಿ, ಹಣ್ಣುಹಂಪಲಿನ ಗಿಡ ನಾಟಿ ಮಾಡಿ ಪೌಷ್ಟಿಕವನ ನಿರ್ಮಾಣ ಮಾಡಿದರು.











