ಉಜಿರೆ: ಹದಿಹರೆಯದ ವಿದ್ಯಾರ್ಥಿಗಳು ತಮ್ಮ ವಯಸ್ಸಿಗನುಗುಣವಾಗಿ ಬಾಲಿಶ ವರ್ತನೆ ತೋರದೆ ಹಾಗೂ ದುಶ್ಚಟಗಳಿಗೆ ಬಲಿಯಾಗದೆ ಸರಿಯಾದ ಹೆಜ್ಜೆಯನ್ನು ಇಡಬೇಕು. ನಮ್ಮ ವಿವೇಚನೆ ನಮ್ಮ ಕೈಯಲ್ಲಿ ಇರಬೇಕು. ಎಲ್ಲ ಯುವಕ ಯುವತಿಯರು ಬಾಹ್ಯ ಆಕರ್ಷಣೆಗೆ ಒಳಗಾಗದೆ ನಮ್ಮ ಸಾಧನೆಯ ಗುರಿಮುಟ್ಟುವ ಕಾರ್ಯಮಾಡಬೇಕು ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್. ಬಿ. ಹೇಳಿದರು.

ಇವರು ಕಾಲೇಜಿನ ಮಾನವ ಸಂಪನ್ಮೂಲ ಅಭಿವೃದ್ಧಿ ಕೋಶ ಹಾಗೂ ಮಹಿಳಾ ಅಭಿವೃದ್ಧಿ ಕೋಶಗಳ ವತಿಯಿಂದ ಎರಡು ದಿನಗಳ ಕಾಲ ನಡೆಯುವ ಲಿಂಗ ಸೂಕ್ಷ್ಮತೆ ಅರಿವು ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಸಶಕ್ತ ಬದುಕಿಗೆ ಮುಖ್ಯವಾಗಿ ಆರೋಗ್ಯ ಹಾಗೂ ಶಿಕ್ಷಣ ಪ್ರಧಾನ. ಯುವಕ ಯುವತಿಯರು ಜೀವನ ಕೌಶಲ್ಯ ಶಿಕ್ಷಣ ಪಡೆಯಬೇಕು. ದೈಹಿಕ ಹಾಗೂ ಮಾನಸಿಕ ಬದಲಾವಣೆಗಳನ್ನು ನಿಭಾಯಿಸುವುದು ಮತ್ತು ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತರಬೇತುದಾರರಾದ ಮಂಗಳೂರಿನ ಸಂವಾದ ಸಹಯಾನ ಯೋಜನೆಯ ಯುವ ಕ್ರಿಯಾ ವಿಭಾಗದ ಸಂಚಾಲಕರಾದ ಮಂಜುಳಾ ಸುನಿಲ್ ಹೇಳಿದರು.
ಸಂವಾದ ಸಂಸ್ಥೆಯ ತರಬೇತುದಾರರಾದ ಯೋಗೀಶ್ ಮಲ್ಲಿಗೆಮಾಡು , ಕೃಷ್ಣ ಆಳ್ವ , ಉದಯ ಕುಮಾರ್ , ಮಲ್ಲಿಕಾ ಜ್ಯೋತಿಗುಡ್ಡೆ ಹಾಗೂ ಪವಿತ್ರಾ ಜ್ಯೋತಿಗುಡ್ಡೆ ಇವರು ಉಪಸ್ಥಿತರಿದ್ದರು.
ಕಾಲೇಜಿನ ಮಾನವ ಸಂಪನ್ಮೂಲ ಅಭಿವೃದ್ಧಿ ಕೋಶದ ಸಂಚಾಲಕ ಡಾ. ಪ್ರಸನ್ನಕುಮಾರ ಐತಾಳ್ ಕಾರ್ಯಕ್ರಮ ಸಂಯೋಜಿಸಿದರು.
ಮಹಿಳಾ ಅಭಿವೃದ್ಧಿ ಕೋಶದ ಸದಸ್ಯರಾದ ಭೌತಶಾಸ್ತ್ರ ಉಪನ್ಯಾಸಕಿ ಅಮೃತಾ ಶೆಟ್ಟಿ ನಿರೂಪಿಸಿ , ಮನಃಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ಯಾಮಿಲಾ ವಂದಿಸಿದರು.











