ಸುಲ್ಕೇರಿ: ಸುಲ್ಕೇರಿ ಗ್ರಾಮ ಪಂಚಾಯತ್ ನ 2025-26 ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಗೆ ನೋಡೇಲ್ ಅಧಿಕಾರಿಯಾದ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಬಸವ ಲಿಂಗಪ್ಪ ಅವರು ಸುಮಾರು ಒಂದು ಗಂಟೆ ಲೇಟಾಗಿ ಆಗಮಿಸಿ ಗ್ರಾಮಸ್ಥರು ಕಾದು ಕಾದು ಸುಸ್ತಾದ ಘಟನೆ ಜು. 10 ರಂದು ಸುಲ್ಕೇರಿ ಗ್ರಾಮ ಸಭೆಯಲ್ಲಿ ನಡೆಯಿತು.
ನೋಡೆಲ್ ಅಧಿಕಾರಿ ಬರುವಾಗ ಲೇಟಾಗುತ್ತದೆ.ಸಭೆ ಪ್ರಾರಂಭಿಸಲು ಅನುಮತಿ ನೀಡಿದ್ದಾರೆಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಾಯತ್ರಿ ಅವರು ಹೇಳಿದಾಗ ಗ್ರಾಮಸ್ಥ ವೀರೇಂದ್ರ ಜೈನ್ ನೋಡಲ್ ಅಧಿಕಾರಿಯವರು ಬಾರದೆ ಸಭೆ ನಡೆಸಲು ಆಗುವುದಿಲ್ಲ.ಸಮಯಕ್ಕೆ ಸರಿಯಾಗಿ ಅವರು ಬರಬೇಕು. ಅವರಿಗೆ ಜವಾಬ್ದಾರಿ ಇಲ್ವಾ ಎಂದು ಪ್ರಶ್ನಿಸಿದರು. ನೋಡೇಲ್ ಅಧಿಕಾರಿ ಸುಮಾರು ಒಂದು ಗಂಟೆ ಲೇಟಾಗಿ ಆಗಮಿಸಿದ್ದರಿಂದ ಗ್ರಾಮಸ್ಥರು ಅವರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿ ಹತ್ತುವರೆಗೆ ಪ್ರಾರಂಭವಾಗಬೇಕಿದ್ದ ಸಭೆ ನಿಮ್ಮಿಂದಾಗಿ ಸುಮಾರು ಹನ್ನೊಂದುವರೆಗೆ ಪ್ರಾರಂಭವಾಗುವಂತಾಯಿತು ಎಂದರು.

ನೋಡೇಲ್ ಅಧಿಕಾರಿ ಗ್ರಾಮಸ್ಥರಲ್ಲಿ ಕ್ಷಮೆಯಾಚಿಸಿ ಇಲಾಖೆಯಲ್ಲಿ ಹಲವಾರು ಕೆಲಸವಿದ್ದುದರಿಂದ ಲೇಟಾಯ್ತು, ನನ್ನನ್ನು ಈ ಸಭೆಗೆ ನೋಡೇಲ್ ಅಧಿಕಾರಿಯಾಗಿ ತಾ.ಪಂ ನಿಯೋಜಿಸಿದ್ದು ನನಗೆ ಗೊತ್ತಿರಲಿಲ್ಲ ಎಂದರು.
ಬಳಿಕ ಗ್ರಾ.ಪಂ ಅಧ್ಯಕ್ಷೆ ಗಿರಿಜ ಇವರ ಅಧ್ಯಕ್ಷತೆಯಲ್ಲಿ ಗ್ರಾಮಸಭೆ ನಡೆಯಿತು. ನೋಡೇಲ್ ಅಧಿಕಾರಿ ಗ್ರಾಮ ಸಭೆಯನ್ನು ಮುನ್ನಡೆಸಿದರು.
ಅಳದಂಗಡಿಯಲ್ಲಿ ಅತೀ ಅಗತ್ಯವಾಗಿ ಪೊಲೀಸ್ ಚೌಕಿಯ ಅಗತ್ಯವಿದೆ. ಸುಲ್ಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳ ಉಪಟಳದಿಂದ ಬೆಳೆ ನಾಶವಾಗಿದೆ. ಸಾಕು ಪ್ರಾಣಿಗಳು ಇಲ್ಲದಂತಾಗಿದೆ ಇದಕ್ಕೆ ಕಡಿವಾಣ ಹಾಕಲು ಪ್ರಯತ್ನಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕು. ಅಟ್ರಿಂಜ ಕೊರಗ ಕಾಲನಿಗೆ ಅಗತ್ಯವಾಗಿ ಬರುವ ಜೂನ್ ತಿಂಗಳೊಳಗೆ ಸೇತುವೆ ನಿರ್ಮಾಣವಾಗಬೇಕಿದೆ. ದೇವರ ಗುಡ್ಡೆಯಲ್ಲಿರುವ 50 ಸಾವಿರ ನೀರು ಸಂಗ್ರಹ ಸಾಮರ್ಥ್ಯದ ಟ್ಯಾಂಕ್ ಸ್ವಚ್ಚತೆ ಮಾಡಬೇಕಿದೆ. ಜೋತು ಬಿದ್ದ ವಿದ್ಯುತ್ ಹಳೆಯ ವಿದ್ಯುತ್ ತಂತಿಗಳನ್ನು ತೆಗೆದು ಹೊಸ ತಂತಿಗಳನ್ನು ಅಳವಡಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶುಭಕರ ಪೂಜಾರಿ, ಅಭಿವೃದ್ಧಿ ಅಧಿಕಾರಿ ಗಾಯತ್ರಿ ಪಿ,ಕಾರ್ಯದರ್ಶಿ ಕೊರಗಪ್ಪ ನಾಯ್ಕ, ಸದಸ್ಯರಾದ ರವಿ ಪೂಜಾರಿ ಹಾರಡ್ಡೆ, ಪೂರ್ಣಿಮಾ, ನಾರಾಯ ಪೂಜಾರಿ, ಯಶೋಧ, ಪ್ರೇಮಾ ಹಾಗೂ ವಿವಿಧ ಇಲಾಖೆಯ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಗ್ರಾ.ಪಂ. ಸಿಬ್ಬಂದಿಗಳು ಸಹಕರಿಸಿದರು.











