ಕೊಯ್ಯೂರು: ಕೊಯ್ಯರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ತಾವೇ ನೇಜಿ ತೆಗೆದು ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ನಿಜವಾದ ಕೃಷಿಯ ಸಂಭ್ರಮವನ್ನು ಅನುಭವಿಸಿದರು.

ಶಾಲೆಯಿಂದ ಅರ್ಧ ಕಿ.ಮೀ. ದೂರದಲ್ಲಿರುವ ಶಾಂತಿಮಾರುವಿನ ನೀಲಮ್ಮ ಅವರ ಗದ್ದೆಯಲ್ಲಿ jಜು. 10 ರಂದು ನಡೆದ ಪ್ರಾತ್ಯಕ್ಷಿಕೆಯಲ್ಲಿ ಆರು ಮತ್ತು ಏಳನೇ ತರಗತಿಯ 70 ಮಕ್ಕಳು ಭಾಗವಹಿಸಿ, ಕೃಷಿ ಜ್ಞಾನ, ವ್ಯವಹಾರ ಜ್ಞಾನ ಮತ್ತು ವಿಜ್ಞಾನವನ್ನು ಏಕಕಾಲದಲ್ಲಿ ಕಲಿತರು. ಶಾಲಾ ಮುಖ್ಯ ಶಿಕ್ಷಕ ಬಳಿರಾಮ ಲಮಾಣಿ ಮಕ್ಕಳಿಗೆ ಬದುಕಿನ ಪಾಠ ಕಲಿಸುವಲ್ಲಿ ಮುಂಚೂಣಿಯಲ್ಲಿದ್ದರು. ಶಿಕ್ಷಕರು. ಮಕ್ಕಳ ಪೋಷಕರು ಇವರೊಂದಿಗೆ ಸಾಥ್ ನೀಡಿದರು.
ಈ ವೇಳೆ ಗದ್ದೆಯ ಮಾಲಕಿ ನೀಲಮ್ಮ ಅವರನ್ನು ಸಮ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೃತರಾದ ಕುಶಾಲಪ್ಪ ಗೌಡ ಕಾಂತಿಮಾರು, ಜಯಾನಂದ ಗೌಡ ಶಾಂತಿಮಾರು, ಶಿವಪ್ಪ ಗೌಡ ಸಾದೂರು, ಸ್ಥಳೀಯರಾದ ವೆಂಕಣ್ಣ ಕೊಯ್ಯರು, ಉಮೇಶ್ ನೇಕಾರ, ವಸಂತ ನೇಕಾರ, ಕುಶಾಲಪ್ಪ ಗೌಡ ಬೊಟ್ಟು ತಿಮ್ಮ ಪಾಡನ ಕಲಾವಿದೆ ಗುಲಾಬಿ ಬಜಿಲ, ಭರತ್, ಭವಿತ್, ಶಾಲೆಯ ಸಹ ಶಿಕ್ಷಕರಾದ ರಮೇಶ್ ವಿ.ಎಸ್., ವಾಣಿ ಶ್ರೀ ವಿ, ಅರುಣ್ ನಾಯ್ಕ, ದೇವಪ್ಪ, ಅನುಷ, ವೀಣಾ, ಇತರರು ಉಪಸ್ಥಿತರಿದ್ದರು.

ಅನ್ನದ ಮೂಲ ಅರಿವಾಗಲಿ:
ಭತ್ತದ ಬೇಸಾಯವನ್ನು ಕೃಷಿಕರು ಬಹಳ ಶ್ರದ್ಧೆಯಿಂದ ಮಾಡುತ್ತಾರೆ. ಮಳೆಗೆ ಅನುಗುಣವಾಗಿ ಭತ್ತದ ಬಿತ್ತನೆ ಮಾಡಿ ನೇಜಿಯನ್ನು ತೆಗೆದು ನಾಟಿ ಮಾಡುತ್ತಾರೆ. ನಂತರ ಮೂರು ತಿಂಗಳಲ್ಲಿ ಬೆಳೆದು ನಿಲ್ಲುವ ಪೈರನ್ನು ಕಟಾವು ಮಾಡಿ ಭತ್ತವನ್ನು ಬೇರ್ಪಡಿಸಿ ಅಕ್ಕಿಯಾಗಿಸುವ ಪ್ರಕ್ರಿಯೆ ಮಕ್ಕಳಿಗೆ ಅರ್ಥವಾಗಬೇಕು. ನಮ್ಮ ಅನ್ನದ ಮೂಲದ ಅರಿವಿರಬೇಕು ಎಂಬ ಕಾರಣಕ್ಕಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಶಾಲೆ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ವಿನಯ್ ಕೆ. ತಿಳಿಸಿದರು.
ಕುಣಿದು ಕುಪ್ಪಳಿಸಿದರು
ನಾಲ್ಕು ಗೋಡೆಗಳ ನಡುವಿನ ಪಾಠ, ಪ್ರವಚನಗಳಿಂದ ಪರಿಸರದ ನೈಜ ಪಾಠವನ್ನು ಅರಿಯುವ ಪ್ರಕ್ರಿಯೆಯನ್ನು ಮಕ್ಕಳು ಅನುಭವಿಸಿದರು.
ಗದ್ದೆ ಉಳುಮೆ, ಸೇಜಿ, ಸಾಟಿಯನ್ನು ಅರ್ಥ ಮಾಡಿಕೊಂಡು ಕೆಸರಿನ ಗದ್ದೆಯಲ್ಲಿ ಲವಲವಿಕೆಯಿಂದ ಕುಣಿದಾಡಿದರು.
ಕೆಸರು ಎರಟಾಡಿಕೊಂಡು, ಕೋಣಗಳಂತೆ ಓಡಾಡಿಸಿಕೊಂಡು ಖುಷಿಪಟ್ಟರು.
ನೇಜಿ ನಾಟಿ ಸಮಯದಲ್ಲಿ ಹೇಳುವ ಪಾಡ್ಡನಗಳನ್ನು ಅಚ್ಚರಿಯಿಂದ ಕೇಳುತ್ತಾ ತನ್ಮಯರಾದರು.











