
ಬೆಳ್ತಂಗಡಿ: ಸುಳ್ಳಿನ ಸರದಾರ ಬೆಳ್ತಂಗಡಿ ಆಮದು ನಾಯಕ ರಕ್ಷಿತ್ ಶಿವರಾಮ್ ರವರು ಸುಳ್ಳಿನ ಸರಮಾಲೆಯನ್ನು ಪತ್ರಿಕಾಗೋಷ್ಠಿ ಮೂಲಕ ಮಾಡಿದ್ದು, ಅವರ ಸುಳ್ಳನ್ನು ಬೆಳ್ತಂಗಡಿಯ ಜನರು ಒಪ್ಪಿಕೊಳ್ಳುವುದಿಲ್ಲ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ತಿರುಗೇಟು ನೀಡಿದರು.
ಅವರು ಜು.16 ರಂದು ಉಜಿರೆಯ ಓಷಿಯನ್ ಪರ್ಲ್ ನಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ರಕ್ಷಿತ್ ಶಿವರಾಮ್ರವರಿಗೆ ರಾಜಕೀಯ ಪ್ರಭುದ್ಧತೆ ಇಲ್ಲ. ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವ ಸಂದರ್ಭದಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಕ್ಕೆ ಸುಮಾರು ರೂ.3500 ಸಾವಿರ ಕೋಟಿ ಅನುದಾನ ತಂದು ಕ್ರಿಯಯೋಜನೆ ಮಾಡಿದವ ನಾನು. ನಿಮ್ಮ ಈಗಿನ ರಾಜ್ಯ ಸರಕಾರ ಕೊಟ್ಟಂತಹ ರೂ.10 ಕೋಟಿಗೆ 10 ಸಾವಿರ ಕೋಟಿ ಕೊಟ್ಟಂತೆ ಮಾತನಾಡುತ್ತೀರಿ. ಬೆಳ್ತಂಗಡಿಯಲ್ಲಿ ಶಾಸಕ ಹರೀಶ್ ಪೂಂಜರು ಇರುವುದಿಲ್ಲ ಎಂಬ ಆರೋಪವನ್ನು ಮಾಡಿದ್ದೀರಿ, ರಾಜ್ಯದಲ್ಲಿ 224 ವಿಧಾನಸಭಾ ಶಾಸಕರುಗಳಿಗೆ ಬೆಂಗಳೂರಿನಲ್ಲಿ ಕಮಿಟಿ ಮೀಟಿಂಗ್ ಇರುತ್ತದೆ. ನನ್ನ ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಹೋಗುತ್ತಿದ್ದೇನೆ ಎಂದರು.
ಮೂಡಬಿದ್ರೆ ಶಾಸಕ ಉಮನಾಥ್ ಕೋಟ್ಯಾನ್ರವರಿಗೆ ಅಭಿವೃದ್ಧಿಗೆ ಅನುದಾನವಿದೆ ಆದರೆ ಹರೀಶ್ ಪೂಂಜರಿಗೆ ಅನುದಾನ ಯಾಕಿಲ್ಲ ಎಂಬ ಪ್ರಶ್ನೆ ಕೇಳಿದ್ದೀರಿ, ಉಮನಾಥ್ ಕೋಟ್ಯಾನ್ರವರು ಮಾಡಿದ ಅಭಿವೃದ್ಧಿಯಲ್ಲಿ ಒಂದೇ ಒಂದು ರಾಜ್ಯ ಸರ್ಕಾರದ ಅನುದಾನವಿಲ್ಲ, ಕೇಂದ್ರ ಸರಕಾರದ ಅನುದಾನ ಇರುವಂತಹದ್ದು. ಸುಳ್ಳಿನ ಸರಮಾಲೆಯನ್ನು ಕಟ್ಟುವುದಕ್ಕೆ ಹೋಗಬೇಡಿ ರಕ್ಷಿತ್ ಶಿವರಾಮ್ರವರೇ ಎಂದು ಹೇಳಿದರು.
ಯಾರೋ ಹುಟ್ಟಿಸಿದ ಮಗುವಿಗೆ ತಂದೆಯಾಗಲು ಹೋಗಬೇಡಿ:
ಯುವ ನಿಧಿಯಲ್ಲಿ ಬೆಳ್ತಂಗಡಿಯಲ್ಲಿ ಎಷ್ಟು ಫಲಾನುಭವಿಗಳು ಇದ್ದಾರೆ? ಕೇಂದ್ರ ಸರಕಾರ ಕೊಡುವಂತಹ ಅಕ್ಕಿಯನ್ನು ತಮ್ಮದೆಂದು ಬಿಂಬಿಸಿದ್ದೀರಿ. ಹರೀಶ್ ಪೂಂಜರು ಕೆಡಿಪಿ ಸಭೆ ಮಾಡಿಲ್ಲ ಎಂಬ ಆರೋಪ ಮಾಡಿದ್ದೀರಿ. ಕೆಡಿಪಿ ಸಭೆ ಮಾಡಿದರೆ ಅಲ್ಲಿಗೆ ಬಂದವರಿಗೆ ಚಾ ಕಾಫಿ ಕೊಡುವುದಕ್ಕೂ ತಾಲೂಕು ಪಂಚಾಯತ್ನಲ್ಲಿ ದುಡ್ಡಿಲ್ಲದ ಪರಿಸ್ಥಿತಿಯಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಅದ್ಭುತ ಜನಸ್ಪಂದನ ಕಾರ್ಯಕ್ರಮ ನಾವು ಮಾಡುತ್ತಿದ್ದೇವೆ. ಹರೀಶ್ ಕುಮಾರ್ ರವರು ತಾಲೂಕಿಗೆ ತಂದ ಅನುದಾನವನ್ನು ರಕ್ಷಿತ್ ಶಿವರಾಮ್ ರವರು ನಾನು ತಂದಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದಾರೆ. ಯಾರೋ ಹುಟ್ಟಿಸಿದ ಮಗುವಿಗೆ ತಂದೆ ಆಗುವುದಕ್ಕೆ ಹೋಗಬೇಡಿ ಎಂದು ಸಲಹೆ ನೀಡಿದರು.
ಗುರುವಾಯನಕೆರೆ- ಉಪ್ಪಿನಂಗಡಿ ರಸ್ತೆ:
ಸಿಆರ್ ಎಫ್ ನಿಂದ ಮಂಜೂರುಗೊಂಡ ೬ ಕೋಟಿಯಲ್ಲಿ ಎಷ್ಟು ಕಾಮಗಾರಿ ಆಗುತ್ತದೆ? ಪಿಲಿಗೂಡು ತನಕ ಮಾತ್ರ ರಸ್ತೆ ದುರಸ್ಥಿಯಾಗಿದೆ. ಅದನ್ನು ನಾನು ಶಿಲಾನ್ಯಾಸ ಸಂದರ್ಭದಲ್ಲಿ ಹೇಳಿದ್ದೆ. ಅಕ್ಕಿ ಹಿಟ್ಟಿಗೆ ಹೆಚ್ಚು ನೀರು ಹಾಕಿ ನೀರು ದೋಸೆ ಮಾಡಿದ ಹಾಗೆ ಮಾಡುವುದಕ್ಕೆ ಆಗುವುದಿಲ್ಲ. ಈ ಕ್ಷೇತ್ರದ ಜನರನ್ನು ಸುಳ್ಳಿನ ಹಾದಿಯಲ್ಲಿ ದಾರಿ ತಪ್ಪಿಸುವುದಕ್ಕೆ ಸಾಧ್ಯವಿಲ್ಲ ಎಂದರು.
ಮಳೆಹಾನಿ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಗಿರಿಗಿಟ್ ತಿರುಗಿಸಿದಾಗೆ ತಿರುಗಿಸಿದೀರಿ ಅಲ್ವಾ, ಅವರಿಗೆ ಗೊತ್ತಿತ್ತು ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದರೆ ಸರಕಾರದಿಂದ ಹಣ ಕೊಡಿಸಲು ಆಗುವುದಿಲ್ಲ.ನಿಮ್ಮ ರಾಜಕೀಯ ಚಪಲಕ್ಕಾಗಿ ಮಳೆಹಾನಿ ಪ್ರದೇಶಗಳಿಗೆ ಕರೆದುಕೊಂಡು ಹೋಗಿದ್ದೀರಿ, ಅವರಿಗೆ ತಾಲೂಕಿಗೆ ಒಂದು ರೂಪಾಯಿ ಅನುದಾನ ಕೊಡಿಸಲು ಆಗಲಿಲ್ಲ ಎಂದು ಟೀಕಿಸಿದರು.
ನಾನು ನನ್ನ ಕುಟುಂಬ ಭ್ರಷ್ಟಾಚಾರ ರಹಿತ ಕುಟುಂಬ. ಇವತ್ತು ನಿಮ್ಮದೇ ಸರಕಾರ ಇದೆ. ನಿಮಗೆ ತಾಕತ್ತು ಇದ್ದರೆ ತನಿಖೆ ನಡೆಸಿ, ನಾನು ನನ್ನ ಕುಟುಂಬ ರೆಡಿ ಇದೆ. ವಕೀಲರ ತಂಡವನ್ನು ಕಟ್ಟಿಕೊಂಡು ತಪ್ಪಿಸಿಕೊಂಡು ಬದುಕುವವ ನಾನಲ್ಲ.ರಕ್ಷಿತ್ ಶಿವರಾಮ್ ರವರೇ ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡಬೇಡಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಯಂತ್ ಕೋಟ್ಯಾನ್,ಬಿಜೆಪಿ ಬೆಳ್ತಂಗಡಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಜಯಾನಂದ ಗೌಡ ಪ್ರಜ್ವಲ್,ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸೀತರಾಮ್ ಬೆಳಾಲು,ಎಸ್.ಟಿ ಮೋರ್ಚಾದ ಅಧ್ಯಕ್ಷ ರಾಜೇಶ್ ಎಂ.ಕೆ,ಧರ್ಮಸ್ಥಳ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಹರೀಶ್ ಕೆಬಿ,ಓಬಿಸಿ ಮೋರ್ಚಾದ ಅಧ್ಯಕ್ಷ ರತ್ನಾಕರ ಬುಣ್ಣನ್ ಉಪಸ್ಥಿತರಿದ್ದರು











