ನಾರಾವಿ: ಮುಂಬೈ ಮೂಲದ ವಕ್ರಾಂಗಿ (Vakrangee) ಸಂಸ್ಥೆಯ ವಿನೂತನ ತಂತ್ರಜ್ಞಾನಗಳನ್ನೊಳಗೊಂಡ UPI MINI ಎಟಿಎಂ ಕೇಂದ್ರವು ಮಧುವನ ಎಂಟರ್ಪ್ರೈಸಸ್ ನ ಆಶ್ರಯದಲ್ಲಿ ನಾರಾವಿಯ ಮಧುವನ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.
ನೂತನ ಎಟಿಎಂ ಕೇಂದ್ರದ ಉದ್ಘಾಟನೆಯನ್ನು ಮಧುವನ ಎಂಟರ್ಪ್ರೈಸಸ್ ನ ಮಾರ್ಗದರ್ಶಕರಾದ ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ನಾರಾವಿ ಹೊಸಮನೆ ಗುರಿಕಾರ ಗೋಪಾಲ ಪೂಜಾರಿಯವರು ನೆರವೇರಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಾರಾವಿ ಯೂನಿಯನ್ ಬ್ಯಾಂಕ್ ನ ಮುಖ್ಯ ಪ್ರಬಂಧಕ ಮಂಜುನಾಥ್, ನಾರಾವಿ ಗ್ರಾಮ ಪಂಚಾಯತ್ ನ ಅಧ್ಯಕ್ಷ ರಾಜವರ್ಮ ಜೈನ್, ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಭಂಡಾರಿ, ಬೆಳ್ತಂಗಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ವಿನಯ್ ಹೆಗ್ಡೆ, ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ರವೀಂದ್ರ ಪೂಜಾರಿ ಬಾಂದೊಟ್ಟು, ನಾರಾವಿ ಗ್ರಾಮ ಪಂಚಾಯತ್ ನ ನಿಕಟಪೂರ್ವ ಉಪಾಧ್ಯಕ್ಷ ಉದಯ್ ಹೆಗ್ಡೆ, Vakrangee UPI ATM ಕೇಂದ್ರದ ರಾಜ್ಯ ಮುಖ್ಯಸ್ಥ ಬಾಲಕೃಷ್ಣ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಖ್ಯಸ್ಥರಾದ ಅಭಿಜಿತ್ ಜೈನ್ ಮತ್ತು ಮಾರ್ಕೆಟಿಂಗ್ ಮುಖ್ಯಸ್ಥ ಪ್ರವೀಣ್ ಅಳದಂಗಡಿಯವರು ಭಾಗವಹಿಸಿ ದೀಪವನ್ನು ಬೆಳಗಿಸಿ ನೂತನ UPI ATM ಕೇಂದ್ರಕ್ಕೆ ಶುಭಾಶಂಸನೆಗೈದರು.

ಈ ಸಂದರ್ಭದಲ್ಲಿ ಮಧುವನ ಎಂಟರ್ಪ್ರೈಸಸ್ ನ ಮುಖ್ಯಸ್ಥರಾದ ಶ್ರೀಮತಿ ಮೃದುಲಾ ಗೋಪಾಲ್, ರೂಪಕ್ ನಾರಾವಿ ಮತ್ತು ಊರ-ಪರ ಊರ ಗ್ರಾಹಕ ಬಂಧುಗಳು, ಹಿತೈಷಿಗಳು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ Vakrangee ಸಂಸ್ಥೆಯ ಪ್ರಪ್ರಥಮ UPI MINI ATM ಕೇಂದ್ರವು ಇದಾಗಿದ್ದು ನೂತನ ATM ಕೇಂದ್ರದಲ್ಲಿ ಎಲ್ಲಾ ಬ್ಯಾಂಕಿನ ಕಾರ್ಡ್ ಗಳ ಮೂಲಕ ನಗದನ್ನು ಪಡೆಯಬಹುದಾದ ವ್ಯವಸ್ಥೆಯ ಜೊತೆಗೆ ಅತ್ಯಂತ ಸರಳ ರೀತಿಯಲ್ಲಿ ತಮ್ಮ ಮೊಬೈಲ್ ನಿಂದ ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ಸ್ಕ್ಯಾನರ್ ಬಳಸಿ ನಗದನ್ನು ಪಡೆಯುವ ವಿನೂತನ ವ್ಯವಸ್ಥೆಯು ಇರಲಿದ್ದು ನೂತನ ಸುಸಜ್ಜಿತ ಕೇಂದ್ರವು ಸಾರ್ವಜನಿಕ ಸೇವೆಗೆ ದಿನದ 24 ಗಂಟೆಯೂ ತೆರೆದಿರುತ್ತದೆ. ನಾರಾವಿ ಮತ್ತು ಆಸುಪಾಸಿನ ಗ್ರಾಮಗಳ ಸಾರ್ವಜನಿಕ ಬಂಧುಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ವಿನಂತಿಸುತ್ತಾ ಪ್ರಥಮವಾಗಿ ನಾರಾವಿಯಲ್ಲಿ ಪ್ರಾರಂಭಗೊಂಡ ಅತ್ಯಾಧುನಿಕ ವ್ಯವಸ್ಥೆಯನ್ನೊಳಗೊಂಡ Vakrangee UPI ATM ಕೇಂದ್ರಗಳನ್ನು ಮುಂದಿನ ದಿನಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ವಿಸ್ತರಿಸಲಿದ್ದೇವೆಂದು ಜಿಲ್ಲಾ ಮುಖ್ಯಸ್ಥ ಅಭಿಜಿತ್ ಜೈನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.











