ಉಜಿರೆ: ಯಕ್ಷಗಾನವು ಸಮಷ್ಟಿಯ ಕಲೆಯಾಗಿದ್ದು, ಇದನ್ನು ಕಲಿತು ಎಲ್ಲೆಡೆ ಪಸರಿಸುವ ಕಾರ್ಯ ಆಗಬೇಕು, ನಾವು ಕಲಿತು ಬೇರೆಯವರಿಗೆ ಕಲಿಸಿದಾಗ ಮಾತ್ರ ಕಲೆ ಬೆಳೆಯಲು ಸಾಧ್ಯ” ಎಂದು ಎಂದು ಖ್ಯಾತ ಯಕ್ಷಗಾನ ತಾಳಮದ್ದಳೆ ಅರ್ಥಧಾರಿ ಉಜಿರೆ ಅಶೋಕ ಭಟ್ ಅಭಿಪ್ರಾಯಪಟ್ಟರು.
ಉಜಿರೆಯ ಶ್ರೀ ಧ.ಮಂ. ಕಾಲೇಜಿನ ಕಲಾ ಕೇಂದ್ರದಲ್ಲಿ ಜು.18ರಂದು ಅವರು ಯಕ್ಷಗಾನ ತರಬೇತಿ ಚಟುವಟಿಕೆ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

ಯಕ್ಷಗಾನ ಏಕವ್ಯಕ್ತಿ ಕಲೆಯಲ್ಲ. ಅದು ಸಮೂಹ ಕಲೆ. ಕರ್ನಾಟಕದ ಗಂಡು ಕಲೆಯಾದ ಯಕ್ಷಗಾನವನ್ನು ಕಲಿತು ಪಸರಿಸಬೇಕು. ಶ್ರದ್ಧೆ, ಪ್ರೀತಿ, ಭಕ್ತಿ ಇದ್ದರೆ ಕಲೆಯನ್ನು ಮೈಗೂಡಿಸಿಕೊಳ್ಳಬಹುದು ಎಂದರು.
ಕಲಾ ಕೇಂದ್ರದ ನೂತನ ಸಂಯೋಜಕರಾಗಿ ನೇಮಕಗೊಂಡ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ನಾಗಣ್ಣ ಡಿ.ಎ. ಮಾತನಾಡಿ, “ಕಲೆ ಎಲ್ಲರನ್ನು ಕೈಬೀಸಿ ಕರೆಯುತ್ತದೆ. ಆದರೆ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ” ಎಂದರು. ಹೊಸದಾಗಿ ಸೇರ್ಪಡೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಕಾಲೇಜಿನ ಆಡಳಿತಾಂಗ ಕುಲಸಚಿವ ಡಾ. ಶ್ರೀಧರ್ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. “ಹಿಂದೆ ಇಲ್ಲಿ ಯಕ್ಷಗಾನ ಕಲಿಕೆಗೆ ಆಸಕ್ತಿ ಇದ್ದರೂ ವ್ಯವಸ್ಥೆ ಇರದೇ ತರಗತಿಗಳಲ್ಲಿ ಸಂಜೆ ವೇಳೆ ಅಭ್ಯಾಸ ಮಾಡುತ್ತಿದ್ದರು. ಈಗ ಬಣ್ಣಗಾರಿಕೆ, ವೇಷ, ಇತ್ಯಾದಿ ಎಲ್ಲ ವ್ಯವಸ್ಥೆ ಇದೆ. ಉತ್ತಮ ಕಲಾವಿದ, ಉತ್ತಮ ಪ್ರೇಕ್ಷಕನಾಗುವುದಕ್ಕೆ ಎಲ್ಲ ಅವಕಾಶಗಳಿವೆ. ಈ ನಿಟ್ಟಿನಲ್ಲಿ ನೀವು ಅದೃಷ್ಟವಂತರು. ಎಲ್ಲ ಅವಕಾಶಗಳನ್ನು ಬಳಸಿಕೊಳ್ಳಿ” ಎಂದರು.
ಕಲಾ ಕೇಂದ್ರದ ಕಳೆದ ವರ್ಷದ ಸಾಧನೆ ಹಾಗೂ ಸಂದ ಪ್ರಶಸ್ತಿಗಳ ಕುರಿತು ವಿದ್ಯಾರ್ಥಿ ಅಮೋಘ ಶಂಕರ್ ತಿಳಿಸಿದರು.ಕಳೆದ ವರ್ಷ ಅತೀ ಹೆಚ್ಚು ಯಕ್ಷಗಾನ ತರಗತಿಗೆ ಹಾಜರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಅತಿಥಿ ಅಶೋಕ್ ಭಟ್ ಅವರನ್ನು ಸನ್ಮಾನಿಸಲಾಯಿತು.
ಕಲಾ ಕೇಂದ್ರದ ನಿಕಟಪೂರ್ವ ಸಂಯೋಜಕ ಡಾ. ಸುಧೀರ್ ಕೆ.ವಿ., ನೃತ್ಯ ಶಿಕ್ಷಕಿ ಚೈತ್ರ ಭಟ್, ನೃತ್ಯ ಶಿಕ್ಷಕ ವಿನ್ಯಾಸ್ ಭಂಡಾರಿ, ಕಾಲೇಜಿನ ಸಂಸ್ಕೃತ ವಿಭಾಗದ ಪ್ರಾಧ್ಯಾಪಕ ಶ್ರೇಯಸ್ ಪಾಳ್ಯಂದೆ, ವಾಣಿಜ್ಯ ವಿಭಾಗದ ಉಪನ್ಯಾಸಕ ಸಚಿನ್ ಉಪಸ್ಥಿತರಿದ್ದರು.ಯಕ್ಷಗಾನ ತರಬೇತುದಾರ ಅರುಣ್ ಕುಮಾರ್ ಧರ್ಮಸ್ಥಳ ಸ್ವಾಗತಿಸಿದರು. ಲಾವಣ್ಯ ವಂದಿಸಿದರು. ಅಂಕಿತ ಕಾರ್ಯಕ್ರಮ ನಿರೂಪಿಸಿದರು.











