ಮೂಡುಬಿದಿರೆ: ಬಲಿಪ ಪ್ರಸಾದ ಭಾಗವತ 50ರ ನೆನಪು “ಪಂಚಾಶತ್ ಸ್ಮರಣ್ ಪಂಚಾಶತ್ ಸಮ್ಮಾನ್” ಸರಣಿಯ ನಾಲ್ಕನೇ ಕಾರ್ಯಕ್ರಮವು ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾ.ಪಂ. ಸಭಾಭವನದಲ್ಲಿ ಕೀರ್ತನ ಕಲಾ ತಂಡದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಆಟಿಡೊಂಜಿ ಕೂಟ ಕಾರ್ಯಕ್ರಮದಲ್ಲಿ ನೆರವೇರಿಸಲಾಯಿತು.
ಜು. 20ರಂದು ನಡೆದ ಈ ಕಾರ್ಯಕ್ರಮದಲ್ಲಿ ಬಲಿಪ ಪ್ರಸಾದ ಭಾಗವತರ ಅಭಿಮಾನಿ, ಯಕ್ಷಗಾನ ಸಂಘಟಕ, ಅರ್ಥಧಾರಿ, ರಂಗ ಕಲಾವಿದ ಕೀರ್ತನ ಕಲಾ ತಂಡದ ಕಾರ್ಯದರ್ಶಿ ಕಾನರ್ಪ ಉಮೇಶ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೀರ್ತನ ಕಲಾತಂಡದ ಅಧ್ಯಕ್ಷ ಸದಾನಂದ ಬಿ. ಅವರು ಬಲಿಪ ಪ್ರಸಾದ ಭಾಗವತರ ಸಂಸ್ಮರಣೆ ನಡೆಸಿ ಸನ್ಮಾನಿತರನ್ನು ಅಭಿನಂದಿಸಿದರು. ಮೂಲ್ಕಿ ಬಿಲ್ಲವ ಮಹಾಮಂಡಲದ ಪ್ರತಿನಿಧಿ, ಸಮಾಜ ಸೇವಕ, ಮಾಜಿ ತಾ.ಪಂ. ಸದಸ್ಯ ರುಕ್ಕಯ್ಯ ಪೂಜಾರಿ ಅಳಿಯೂರು, ಕೀರ್ತನ ಕಲಾತಂಡದ ಸಂಚಾಲಕ ಮಧು ಶೆಟ್ಟಿ ಉಡ್ತಾಜೆ, ಯಕ್ಷಗಾನ ಭಾಗವತರೂ ಆಗಿರುವ ಉಪನ್ಯಾಸಕ ಪುರುಷೋತ್ತಮ ಶೆಟ್ಟಿ ಅಗರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸನ್ಮಾನಿತ ಕಾನರ್ಪ ಉಮೇಶ್ ಅಚಾರ್ಯರು ಮಾತನಾಡಿ ಬಲಿಪ ಪ್ರಸಾದ ಭಾಗವತರ ಜೊತೆಗಿದ್ದ ತಮ್ಮ ಸುದೀರ್ಘ ಒಡನಾಟವನ್ನು ಸ್ಮರಿಸಿದರು.
ಸರಣಿ ಕಾರ್ಯಕ್ರಮದ ಸಂಚಾಲಕ ದೇವಿಪ್ರಸಾದ್ ಸ್ವಾಗತಿಸಿದರು. ಸಂಘಟಕ ಕೃಷ್ಣಕುಮಾರ್ ಕಾರ್ಯಕ್ರಮ ನಿರೂಪಿಸಿದರು.











