ಧರ್ಮಸ್ಥಳ: ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಾರ್ಗಿಲ್ ದಿನ ಹಾಗೂ ಸ್ಕಾರ್ಫ್ ಡೇಯನ್ನು ಭಾರತ್ ಸ್ಕೌಟ್ಸ್ ಗೈಡ್ಸ್ ವತಿಯಿಂದ ಆಚರಿಸಲಾಯಿತು.
ಶಾಲೆಯ ಸ್ಕೌಟ್ಸ್-ಗೈಡ್ಸ್ ಕಬ್ಸ್-ಬುಲ್ಬುಲ್ ವಿದ್ಯಾರ್ಥಿಗಳು ಮಣ್ಣಿನ ಹಣತೆಯಲ್ಲಿ ದೀಪವನ್ನು ಬೆಳಗಿಸಿ ಅದನ್ನು ಭಾರತದ ನಕ್ಷೆಯ ಸುತ್ತಲೂ ಇರಿಸಿ ಕಾರ್ಗಿಲ್ನಲ್ಲಿ ಮಡಿದ ವೀರಯೋಧರಿಗೆ ವಿನೂತನವಾಗಿ ನಮನವನ್ನು ಸಲ್ಲಿಸಿದರು.
ಸ್ಕೌಟ್ ಮಾಸ್ಟರ್ ಆಶಾ ಕಾರ್ಗಿಲ್ ವಿಜಯೋತ್ಸವ ಹಾಗೂ ಸ್ಕಾರ್ಫ್ ಡೇ ಯ ಕುರಿತಾಗಿ ಮಾಹಿತಿಯನ್ನು ನೀಡಿ ವಿದ್ಯಾರ್ಥಿಗಳಲ್ಲಿ ದೇಶಪ್ರೇಮವನ್ನು ಮೂಡಿಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ೯ ಮಂದಿ ಆಶಾ ಕಾರ್ಯಕರ್ತೆಯರನ್ನು ಗುರುತಿಸಿ ಅವರ ನಿಸ್ವಾರ್ಥ ಸೇವೆಗಾಗಿ ಸ್ಕಾರ್ಫ್ ತೊಡಿಸಿ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಸರಸ್ವತಿ ಮತ್ತು ಶ್ರೀಮತಿ ಸುಜಾತಾ ಅವರ ಕಾರ್ಯ ಗಮನಿಸಿ ಅವರನ್ನು ಅಭಿನಂದಿಸಿದ್ದಕ್ಕಾಗಿ ಶಾಲೆಗೆ ಧನ್ಯವಾದ ಸಲ್ಲಿಸಿದರು.
ಕಬ್ ಮಾಸ್ಟರ್ ಹೇಮಾವತಿ ಜೈನ್ ಆಶಾ ಕಾರ್ಯಕರ್ತೆಯರ ಕಿರುಪರಿಚಯ ಮಾಡಿದರು. ಶಾಲಾ ಮುಖ್ಯಶಿಕ್ಷಕಿ ಪರಿಮಳ ಎಂ.ವಿ. ಪ್ರಾಸ್ತಾವಿಕವಾಗಿ ಮಾತನಾಡಿ ಆಶಾ ಕಾರ್ಯಕರ್ತೆಯರ ಕೆಲಸ ಹಾಗೂ ಸಮಾಜಮುಖಿ ಕೆಲಸಗಳನ್ನು ವಿವರಿಸಿದರು. ಸ್ಕೌಟ್ಸ್ ಮಾಸ್ಟರ್ ಆಶಾ ನಿರೂಪಿಸಿ, ಗೈಡ್ ಕ್ಯಾಪ್ಟನ್ ಗೀತಾ ವಂದಿಸಿದರು. ಸ್ಕೌಟ್ಸ್ ಮಾಸ್ಟರ್ ಶಶಿಕಲಾ, ಶ್ರೀಮತಿ ಜ್ಯೋತಿ, ಗೈಡ್ ಕ್ಯಾಪ್ಟನ್ ದೀಕ್ಷ ಶೀಭಾ, ಪ್ಲಾಕ್ ಲೀಡರ್ ಸೌಮ್ಯ, ಕಬ್ ಮಾಸ್ಟರ್ ಅಮೃತ ವಿ ಶೆಟ್ಟಿ ಸಹಕರಿಸಿ ದರು.











