ಬೆಳ್ತಂಗಡಿ: ಹಿಂದಿನ ಕಾಲದಲ್ಲಿ ಹಿರಿಯರು ಕಷ್ಟದ ದಿನಗಳಾದರೂ ಮಕ್ಕಳಿಗೆ ಉತ್ತಮ ಸಂಸ್ಕಾರಗಳನ್ನು ಕಲಿಸುತ್ತಿದ್ದರು. ಆಚಾರ ವಿಚಾರಗಳನ್ನು ತಿಳಿಸುವ ಜೊತೆಗೆ ಶಿಕ್ಷಣ ಕಲಿಸುತ್ತಿದ್ದರು. ಇಂದು ಬರೇ ಶಿಕ್ಷಣ ಮಾತ್ರ ಎನ್ನುವ ಕಾಲದಿಂದ ಸಂಸ್ಕಾರ ,ಸಂಸ್ಕೃತಿಗಳು ಮಕ್ಕಳಿಗೆ ಸಿಗದೆ ಅನೇಕ ಮಕ್ಕಳು ತಪ್ಪುದಾರಿಗೆ ಹೊಗುತ್ತಿದ್ದಾರೆ. ಇದನ್ನು ನಿವಾರಿಸಲು ಇಂತಹ ಆಟಿ ಕೂಟ ಕಾರ್ಯಕ್ರಮ ಮಾಡುವ ಮೂಲಕ ಮಕ್ಕಳಲ್ಲಿ ಸಂಸ್ಕಾರ ನೀಡುವ ಜೊತೆಗೆ ಹಿರಿಯ ಅಚಾರ ವಿಚಾರಗಳನ್ನು ತಿಳಿಸಿ ಅದನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು ಎಂದು ಬೆಳ್ತಂಗಡಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೋ. ಸುರೇಶ್ ವಿ ಹೇಳಿದರು.

ಅವರು ಆ. 3 ರಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಬಳಂಜ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ, ಯುವ ಬಿಲ್ಲವ ಮತ್ತು ಮಹಿಳಾ ಬಿಲ್ಲವ ವೇದಿಕೆ ಇದರ ಆಶ್ರಯದಲ್ಲಿ ಆಟಿ ತಿಂಗಳ ಪ್ರಾಚೀನ ತಿಂಡಿ ತಿನಿಸುಗಳ ಆಚಾರ ವಿಚಾರಗಳ ವೈಶಿಷ್ಟ್ಯತೆ ನೆನಪಿಸುವ ಆಟಿಡೊಂಜಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅನೇಕ ವರ್ಷಗಳಿಂದ ಉತ್ತಮ ಸಮಾಜಮುಖಿ ಸೇವೆ ಮಾಡುತ್ತಾ ಬಂದಿದ್ದು ಅದಕ್ಕಾಗಿ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ಅನೇಕ ಸಾಧಕರನ್ನು ಈ ಸಂಘ ಗುರುತಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಟಿ ತಿಂಗಳ ತಿಂಡಿತಿನಿಸುಗಳು, ಆಹಾರ ಕ್ರಮಗಳು ತನ್ನದೇ ಆದ ವೈಶಿಷ್ಟ್ಯ ಹೊಂದಿವೆ. ಅನೇಕ ಆಹಾರಗಳು ಔಷಧೀಯ ಗುಣಗಳನ್ನು ಹೊಂದಿವೆ. ಆಟಿ ತಿಂಗಳ ಮಹತ್ವವನ್ನು ಅರಿಯುವ ಮೂಲಕ ಹಿರಿಯರು ಕೊಟ್ಟ ಈ ಸಂಪ್ರದಾಯವನ್ನು ಉಳಿಸಬೇಕು ಎಂದು ಹೇಳಿದರು.
ಶ್ರೀ ಕ್ಷೇತ್ರ ಗೆಜ್ಜೆಗಿರಿ ಜಾತ್ರೋತ್ಸವ ಸಮಿತಿಯ ಬೆಳ್ತಂಗಡಿ ಪ್ರದಾನ ಸಂಚಾಲಕ ನಿತ್ಯಾನಂದ ನಾವರ ಮಾತನಾಡಿ ನಾರಾಯಣ ಗುರುಗಳ ಚಿಂತನೆಯಂತೆ ಎಲ್ಲಾ ಸಮಾಜದವರನ್ನು ಸೇರಿಸಿ ಮುನ್ನಡೆಯುವ ಬಳಂಜ ಬಿಲ್ಲವ ಸಂಘ ಇಡೀ ಸಮಾಜಕ್ಕೆ ಮಾದರಿ.ಇಂದು ಐವತ್ತಕ್ಕೂ ಅಧಿಕ ಬಗೆಯ ತಿಂಡಿ ತಿನಿಸುಗಳನ್ನು ಮಾಡುವ ಮೂಲಕ ಯುವ ಸಮಮಾಜಕ್ಕೆ ಹಿಂದಿನ ಅಚಾರ ವಿಚಾರಗಳನ್ನು ತಿಳಿಸುವ ಕಾರ್ಯಮಾಡಿದ್ದಾರೆ ಎಂದರು.

ಬೆಳ್ತಂಗಡಿ ಶ್ರೀಗುರುನಾರಾಯಣ ಸ್ವಾಮಿ ಸೇವಾ ಸಂಘದ ನಿರ್ದೇಶಕಿ ವಿನೋದಿನಿ ರಾಮಪ್ಪ, ವೇಣೂರು ಠಾಣಾ ಹೆಡ್ ಕಾನ್ಸ್ಟೇಬಲ್ ಕೇಶವತಿ, ಕುಕ್ಕೆಡಿ ಗ್ರಾ ಪಂ ಅಧ್ಯಕ್ಷೆ ಅನಿತಾ ಕೆ ಶುಭಹಾರೈಸಿದರು.
ವೇದಿಕೆಯಲ್ಲಿ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಗೌರವಾಧ್ಯಕ್ಷ ಎಚ್.ಧರ್ಣಪ್ಪ ಪೂಜಾರಿ,ಗೌರವ ಮಾರ್ಗದರ್ಶಕ ಕೆ.ವಸಂತ ಸಾಲಿಯಾನ್, ಬಳಂಜ ಮಹಿಳಾ ಬಿಲ್ಲವ ವೇದಿಕೆ ಸ್ಥಾಪಕಾಧ್ಯಕ್ಷೆ ಲಲಿತಾ ಟೀಚರ್, ಅಧ್ಯಕ್ಷೆ ಭಾರತಿ ಸಂತೋಷ್,ಕಾರ್ಯದರ್ಶಿ ಅಶ್ವಿತಾ ಸಂತೋಷ್, ಸಂಘದ ಕಾರ್ಯದರ್ಶಿ ಜಗದೀಶ್ ಬಳ್ಳಿದಡ್ಡ,ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಶರತ್ ಅಂಚನ್ ಉಪಸ್ಥಿತರಿದ್ದರು.

ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಸ್ವಾಗತಿಸಿ, ಮಹಿಳಾ ಬಿಲ್ಲವ ವೇದಿಕೆ ಮಾಜಿ ಅಧ್ಯಕ್ಷೆ ವಿಶಾಲಾಕ್ಷಿ ನಿರೂಪಿಸಿದರು. ಪುಷ್ಪಾ ಗೀರೀಶ್ ಪ್ರಾರ್ಥಿಸಿದರು. ಸಂಘದ ನಿರ್ದೇಶಕರು ಸಹಕರಿಸಿದರು.











