ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಯು.ಡಿ.ಆರ್ ಮತ್ತು ಒಂದು ದೂರು ಅರ್ಜಿ ಸೇರಿದಂತೆ ಒಟ್ಟು ಮೂರು ಪ್ರಕರಣವನ್ನು ಡಿಜಿ ಮತ್ತು ಐಜಿಪಿಯವರ ಅನುಮೋದನೆ ಪಡೆದು ವಿಶೇಷ ತನಿಖಾ ತಂಡಕ್ಕೆ (ಎಸ್.ಐ.ಟಿ)ಗೆ ಹಸ್ತಾಂತರಿಸಲಾಗಿದೆ ಎಂದು ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅ.ಕ್ರ: ೩೯/೨೦೨೫ ಕಲಂ:೨೧೧(J) BNS ಪ್ರಕರಣವನ್ನು ದಿನಾಂಕ: ೧೯.೦೭.೨೦೨೫ ರಂದು ವಿಶೇಷ ತನಿಖಾ ತಂಡ (SIT) ಕ್ಕೆ ವರ್ಗಾಯಿಸಲಾಗಿರುತ್ತದೆ. ಇದರ ಹೊರತಾಗಿ ಈವರೆಗೆ ಎಸ್.ಐ.ಟಿ ತಂಡದಿಂದ ಎರಡು ಅಸ್ವಾಭಾವಿಕ ಮರಣ (ಯುಡಿಆರ್) ಪ್ರಕರಣದ ದೂರುಗಳು ಮತ್ತು ಜಯಂತ್ ಎಂಬವರಿಂದ ಒಂದು ದೂರರ್ಜಿಯು ಧರ್ಮಸ್ಥಳ ಪೊಲೀಸ್ ಠಾಣೆಗೆ ವರದಿಯಾಗಿರುತ್ತದೆ.
ದಿನಾಂಕ: ೩೧.೦೭.೨೦೨೫ ರಂದು ಎಸ್.ಐ.ಟಿ ತಂಡ ಉತ್ಖನನ ಮಾಡುತ್ತಿದ್ದಾಗ ಒಂದು ಸ್ಥಳದಲ್ಲಿ ದೊರೆತ ಅಸ್ಥಿಪಂಜರದ ಅವಶೇಷಗಳಿಗೆ ಸಂಬಂಧಿಸಿದಂತೆ ಧರ್ಮಸ್ಥಳ ಠಾಣೆಯಲ್ಲಿ ಯು.ಡಿ.ಆರ್ ಸಂಖ್ಯೆ:೩೫/೨೦೨೫ ಪ್ರಕರಣ ದಾಖಲಾಗಿದೆ.
ಈಗಾಗಲೇ ಉತ್ಖನನಕ್ಕಾಗಿ ನಿಗಧಿಪಡಿಸಲಾಗಿರುವ ಸ್ಥಳಗಳ ಹೊರತಾಗಿ, ದಿನಾಂಕ: ೦೪.೦೮.೨೦೨೫ ರಂದು ಬೇರೆ ಜಾಗದಲ್ಲಿ, ಮಣ್ಣಿನ ಮೇಲೆ ಕಂಡುಬಂದ ಅಸ್ಥಿಪಂಜರದ ಅವಶೇಷಗಳಿಗೆ ಸಂಬಂಧಿಸಿದಂತೆ ಧರ್ಮಸ್ಥಳ ಠಾಣೆಯಲ್ಲಿ ದಿನಾಂಕ:೦೫.೦೮.೨೫ ರಂದು ಯು.ಡಿ.ಆರ್ ಸಂಖ್ಯೆ:೩೬/೨೦೨೫ ಪ್ರಕರಣ ದಾಖಲಾಗಿದೆ.
ಜಯಂತ್ ಎಂಬವರು ನೀಡಿದ ದೂರಿಗೆ ಸಂಬಂಧಿಸಿದಂತೆ, ದಿನಾಂಕ: ೦೪.೦೮.೨೦೨೫ ರಂದು ಧರ್ಮಸ್ಥಳ ಠಾಣೆಯಲ್ಲಿ ೨೦೦/DPS/೨೦೨೫ ರಂತೆ ದಾಖಲಾಗಿರುವ ದೂರರ್ಜಿ ದಾಖಲಾಗಿದೆ. ಸದ್ರಿ ೦೨ ಯು.ಡಿ.ಆರ್ ಪ್ರಕರಣಗಳನ್ನು ಮತ್ತು ೦೧ ದೂರರ್ಜಿಯನ್ನು ಕೂಡಾ, ಡಿಜಿ ಮತ್ತು ಐಜಿಪಿರವರ ಅನುಮೋದನೆ ಪಡೆದು ವಿಶೇಷ ತನಿಖಾ ತಂಡ (SIT)ಕ್ಕೆ ವರ್ಗಾಯಿಸಲಾಗಿದೆ ಎಂದು ತಿಳಿಸಿದ್ದಾರೆ.











