ಬೆಳ್ತಂಗಡಿ: ರಾಷ್ಟ್ರಧ್ವಜವೇ ರಾಷ್ಟ್ರದ ಆತ್ಮವಾಗಿದೆ. ಈ ರಾಷ್ಟ್ರೀಯ ಧ್ವಜಗಳನ್ನು ಅಗಸ್ಟ್ 15 ಮತ್ತು 26 ಜನವರಿಯಂದು ಪ್ರದರ್ಶಿಸಲಾಗುತ್ತದೆ. ಆದರೆ ಅದೇ ದಿನ ಅದೇ ರಾಷ್ಟ್ರಧ್ವಜ ರಸ್ತೆ ಹಾಗೂ ಚರಂಡಿಗಳಲ್ಲಿ ಹರಿದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬರುತ್ತದೆ. ಇದು ನಾವು ರಾಷ್ಟ್ರಕ್ಕೆ ಮಾಡಿದ ಅವಮಾನವಾಗಿದೆ . ಪ್ಲಾಸ್ಟಿಕ್ ರಾಷ್ಟ್ರ ಧ್ವಜಗಳನ್ನು ಮಾರಾಟ ಮಾಡುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಇದು ಲಾಂಛನಗಳು ಮತ್ತು ಹೆಸರುಗಳ ಕಾಯಿದೆ 1950′ ಮತ್ತು ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆ ಕಾಯಿದೆ 1971′ ಉಲ್ಲಂಘನೆಯಾಗಿದೆ. ಸಮಿತಿಯು ಹಲವು ವರ್ಷಗಳಿಂದ ರಾಷ್ಟ್ರಧ್ವಜಕ್ಕೆ ಅವಮಾನಿಸುವುದರ ವಿರುದ್ಧ ಜನಜಾಗೃತಿ ಮೂಡಿಸುತ್ತಿದೆ.

ಈ ನಿಟ್ಟಿನಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವುದನ್ನು ತಡೆಯಲು ರಾಷ್ಟ್ರಧ್ವಜ ಗೌರವ ಕೃತಿ ಸಮಿತಿಯನ್ನು ಸ್ಥಾಪಿಸಬೇಕೆಂದು ತಹಶೀಲ್ದಾರಾದ ಪೃಥ್ವಿ ಸಾನಿಕಂ ರವರಿಗೂ ಪ್ಲಾಸ್ಟಿಕ್ ರಾಷ್ಟ್ರ ಧ್ವಜಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರೆ ಕೂಡಲೇ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬೆಳ್ತಂಗಡಿ ಪೊಲೀಸ್ ಠಾಣಾ ಅಧಿಕಾರಿ ಸುಬ್ಬಾಪುರ ಮಠ ರವರಿಗೂ ಹಾಗೂ ಶಾಲೆಗಳಲ್ಲಿ ರಾಷ್ಟ್ರಧ್ವಜವನ್ನು ಗೌರವಿಸಿ ಎಂಬ ಉಪಕ್ರಮವನ್ನು ನಡೆಸಲು ತಾಲೂಕು ಶಿಕ್ಷಣ ಅಧಿಕಾರಿ ಶ್ರೀಮತಿ ತಾರಕೇಸರಿ ರವರಿಗೂ ಮನವಿಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಉದಯ ಬಿ.ಕೆ ವಕೀಲರು, ಉಮೇಶ್ ಬಂಗೇರ ಕಾರ್ಯದರ್ಶಿಗಳು ಶ್ರೀ ದೇವಿ ಮಹಾಮ್ಮಾಯಿ ಭಜನಾ ಮಂದಿರ ಪಿಲ್ಯ, ಅಕ್ಷಯ್ ಟಿ.ರಾವ್ ವಕೀಲರು ,ಯೋಗೀಶ್ ಕೆಂಬರ್ಜೆ, ಹರ್ಷಿತ್ ವಕೀಲರು ಬೆಳ್ತಂಗಡಿ, ಹರೀಶ್ ಮುದ್ದಿನಡ್ಕ ಉಪಸ್ಥಿತರಿದ್ದರು.













