ಉಜಿರೆ: ಸ್ಕೌಟ್ಸ್ ಮತ್ತು ಗೈಡ್ಸ್ ಯಾವತ್ತೂ ನಿಸ್ವಾರ್ಥ ಸೇವೆಗೆ ಹೆಸರುವಾಸಿ. ಯಾವುದೇ ಫಲಾಪೇಕ್ಷೆ ಇಲ್ಲದೇ ಕೇವಲ ಸೇವೆಯೆ ತನ್ನ ಮಾನದಂಡ ಎಂಬಂತೆ ಜೀವನವನ್ನು ಸಮಾಜಕ್ಕಾಗಿ ಸದಾ ಮುಡುಪಾಗಿಸಿಕೊಂಡಿರುವ ಸೇವಾ ಸಂಸ್ಥೆ.ಇಂತಹ ಸೇವಾ ಸಂಸ್ಥೆಯಲ್ಲಿ ತಮ್ಮನ್ನು ತಾವು ಸದಾ ತೊಡಗಿಸಿಕೊಂಡಾಗ ಮಾತ್ರ ರೋವರ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳು ನಿಜವಾಗಿ ಸ್ಕೌಟ್ಸ್ ಮತ್ತು ಗೈಡ್ಸ್ ಗೆ ನೀಡುವ ಗೌರವವಾಗಿದೆ ಎಂದು ಪುತ್ತೂರಿನ ಸೇಂಟ್ ಫಿಲೋಮಿನಾ ಕಾಲೇಜಿನ, ರೋವರ್ ಸ್ಕೌಟ್ ಲೀಡರ್ ಚಂದ್ರಾಕ್ಷ ಹೇಳಿದರು.
ಅವರು ಉಜಿರೆಯ ಎಸ್.ಡಿ.ಎಂ. ಪದವಿ ಪೂರ್ವ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ದಳದಿಂದ ಆಯೋಜಿಸಿದ್ದ ಒಂದು ದಿನದ ಪುನಃಶ್ಚೇತನ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ನಿಪುಣ ಪರೀಕ್ಷೆಯ ಪೂರ್ವ ತಯಾರಿಯಾಗಿ ಒಂದು ದಿನದ ಈ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು.ನಿಪುಣ ಪರೀಕ್ಷೆಯಲ್ಲಿ ಮುಖ್ಯವಾಗಿ ಬೇಕಾದ ಸ್ಕೌಟ್ ಮತ್ತು ಗೈಡ್ಸ್ ನ ಇತಿಹಾಸ, ಪ್ರಥಮ ಚಿಕಿತ್ಸೆ, ಕಟ್ಟುಗಳು ಮತ್ತು ಗಂಟುಗಳ ಬಗ್ಗೆ ಸಂಪೂರ್ಣ ತರಬೇತಿ ನೀಡಲಾಯಿತು.
ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಉಪ ಪ್ರಾಚಾರ್ಯರಾದ ಡಾ.ರಾಜೇಶ ಬಿ ಮಾತನಾಡಿ ಅತ್ಯಂತ ಉಪಯುಕ್ತಕರವಾಗಿ ನಡೆದ ಈ ತರಬೇತಿಯನ್ನು ಎಲ್ಲಾ ವಿದ್ಯಾರ್ಥಿಗಳು ಕಲಿತು ಬಿಡದೇ ಅದನ್ನು ನಿತ್ಯ ನಿರಂತರ ಅಭ್ಯಸಿಸಿ ಸದೃಢ ಸಂಪೂರ್ಣ ಆತ್ಮ ವಿಶ್ವಾಸದಿಂದ ಪರೀಕ್ಷೆಗೆ ಹಾಜರಾಗಿ ಯಶಸ್ಸನ್ನು ನಿಮ್ಮದಾಗಿಸಿಕೊಳ್ಳಿ ಎಂದು ನುಡಿದು ಶುಭ ಹಾರೈಸಿದರು.
ಕಾಲೇಜಿನ ರೋವರ್ ಸ್ಕೌಟ್ ಲೀಡರ್ ಲಕ್ಷ್ಮೀಶ ಭಟ್ ಕಾರ್ಯಕ್ರಮ ನಿರ್ವಹಿಸಿದರೆ ರೇಂಜರ್ ಲೀಡರ್ ಅಂಕಿತಾ ಎಂ ಕೆ ಧನ್ಯವಾದ ಸಮರ್ಪಿಸಿದರು.











