
ಬೆಳ್ತಂಗಡಿ: ವಿದ್ಯಾದಾನ, ಅನ್ನದಾನ, ಅಕ್ಷರ ದಾಸೋಹ, ಶಿಕ್ಷಣ ಕ್ಷೇತ್ರ ಜೊತೆಗೆ ಸಮಾಜದ ಕಟ್ಟಕಡೆಯ ಕುಟುಂಬಗಳು ನೆಮ್ಮದಿಯಿಂದ ಇರಬೇಕು, ಆರ್ಥಿಕವಾಗಿ ಬಲಿಷ್ಠರಾಗಬೇಕೆಂದು 1982ರಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾರಂಭಿಸಿದ್ದು ಇದರಿಂದಾಗಿ ಲಕ್ಷಾಂತರ ಮಂದಿ ಬೆಳಕನ್ನು ಕಂಡಿದ್ದಾರೆ. ಜೊತೆಗೆ ಕುಡಿಯುವ ನೀರು, ಕೃಷಿ ಗೆ ನೀರು,ಪ್ರಾಣಿ ಸಂಕುಲಗಳಿಗೆ ಬರಡು ಭೂಮಿಯಲ್ಲೂ ನೀರು ಸಿಗಬೇಕು ಎನ್ನುವ ಉದ್ದೇಶದಿಂದ “ನಮ್ಮೂರು ನಮ್ಮ ಕೆರೆ” ಕೆರೆಗಳಿಗೆ ಕಾಯಕಲ್ಪ ಕಾರ್ಯಕ್ರಮಗಳನ್ನು ಹಮ್ಮಿಕೊಂಡು 1000 ಕೆರೆಗಳನ್ನು ಜೀರ್ಣೋದ್ಧಾರಗೊಳಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರಿಗೆ ವಿಜಯವಾಣಿ ವಿಜಯರತ್ನ ಅಂತರಾಷ್ಟ್ರೀಯ ಪ್ರಶಸ್ತಿ” ನೀಡಿ ಗೌರವಿಸಲಾಗುತ್ತಿದೆ.

ಇಂದು( ಆಗಸ್ಟ್ 20 )ಮಲೇಷ್ಯಾದಲ್ಲಿ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಡಾ.ಹೆಗ್ಗಡೆಯವರು ಸಮಾಜಕ್ಕೆ ಸಲ್ಲಿಸಿದ ಅಮೋಘ ಕೊಡುಗೆಗಾಗಿ,ಈ ಎಲ್ಲಾ ಸೇವೆಗಾಗಿ ರಾಷ್ಟ್ರಪತಿ ಡಾ.ಶಂಕರ್ ದಯಾಳ್ ಶರ್ಮರಿಂದ ರಾಜಶ್ರೀ ಪ್ರಶಸ್ತಿ, ಮಂಗಳೂರು ವಿ.ವಿ. ಯಿಂದ ಗೌರವ ಡಾಕ್ಟರೇಟ್, ಇಂದಿರಾಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿ, ಮಾಜಿ ಪ್ರಧಾನ ಅಟಲ್ ಬಿಹಾರಿ ವಾಜಪೇಯಿಯವರಿಂದ ಫಿಕ್ಕಿ ಪ್ರಶಸ್ತಿ, ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿ ಮತ್ತು ಪದ್ಮವಿಭೂಷಣ, 2003 ರಲ್ಲಿ ಕರ್ನಾಟಕ ಸರಕಾರದಿಂದ ಕರ್ನಾಟಕ ಪರವರ್ತನೆಯ ರೂವಾರಿ ಪ್ರಶಸ್ತಿ,ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ, ನಾಡೋಜ ಪ್ರಶಸ್ತಿ, 2024 ರಲ್ಲಿ ಕಂಚಿ ಕಾಮಕೋಟಿ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಮಹಾ ಸ್ವಾಮೀಜಿಯವರಿಂದ ಮಲೆನಾಡು ರತ್ನ ಬಿರುದು ಸಹಿತ ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ.











