ಬೆಳ್ತಂಗಡಿ: ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಬೆಳ್ತಂಗಡಿ ಪೊಲೀಸ್ ವೃತ್ತ ಮತ್ತು ಠಾಣಾ ವ್ಯಾಪ್ತಿಯ ಗಣೇಶೋತ್ಸವ ಮತ್ತು ಈದ್ ಮೀಲಾದ್ ಕಾರ್ಯಕ್ರಮದ ಶಾಂತಿಸಭೆಯು ಬೆಳ್ತಂಗಡಿಯ ಮಂಜುನಾಥ ಸಭಾಭವನದಲ್ಲಿ ಆ.21 ರಂದು ನಡೆಸಲಾಯಿತು.

ಸಭೆಯಲ್ಲಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಅಧ್ಯಕ್ಷತೆ ವಹಿಸಿದ್ದರು. ಇನ್ಸ್ ಪೆಕ್ಟರ್ ಸುಬ್ಬಾಪುರ ಮಠ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ಆಯೋಜಕರಿಗೆ ಗಣೇಶೋತ್ಸವದ ಮೆರವಣಿಗೆ ಹಾಗೂ ಈದ್ ಮೀಲಾದ್ ಜಾಥಾ ಮತ್ತು ಕಾರ್ಯಕ್ರಮಕ್ಕೆ ಸಕ್ಷಮ ಪ್ರಾಧಿಕಾರ ಮತ್ತು ಧ್ವನಿವರ್ಧಕ ಬಳಕೆಗೆ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದು ನಿಯಮಾನುಸಾರ ಯಾವುದೇ ಡಿ ಜೆ ಬಳಸದೇ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಹಾಗೂ ಯಾವುದೇ ಅನಗತ್ಯ ಘೋಷಣೆಯನ್ನು ಕೂಗದೇ ಕ್ಲಪ್ತ ಸಮಯಕ್ಕೆ ಕಾರ್ಯಕ್ರಮ ಮುಗಿಸುವುದು ಆಯೋಜಕರ ಜವಾಬ್ದಾರಿ ಹಾಗೂ ಇಲಾಖಾ ನಿಯಮ ಮೀರಿ ಕಾರ್ಯಕ್ರಮ ಹಾಗೂ ಡಿ ಜೆ ಬಳಸಿದಲ್ಲಿ ಆಯೋಜಕರ ಹಾಗೂ ಸಂಬಂಧಪಟ್ಟವರ ಮೇಲೆ ಪೋಲಿಸ್ ಇಲಾಖೆಯ ಭಾರತ ದಂಡ ಸಂಹಿತೆಯ ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ಶಾಂತಿಸಭೆಯಲ್ಲಿ ವಿವರಿಸಿದರು.
ಸಭೆಯಲ್ಲಿ ಕೆಲವು ಗಣೇಶೋತ್ಸವ ಮತ್ತು ಈದ್ ಮೀಲಾದ್ ಕಾರ್ಯಕ್ರಮದ ಸಮಿತಿಯವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ನಮ್ಮ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಆಗುವ ಅಥವಾ ಶಾಂತಿಭಂಗದಂತಹ ಯಾವುದೇ ಚಟುವಟಿಕೆ ಮಾಡಲು ಅವಕಾಶ ನೀಡುವುದಿಲ್ಲವೆಂದು ಹಾಗೂ ಇಲಾಖೆಯ ಕೆಲವು ನಿಯಮಗಳಿಂದ ರಿಯಾಯಿತಿ ನೀಡಿ ಕಾರ್ಯಕ್ರಮ ನಡೆಸಲು ಅನುಮತಿ ನೀಡಬೇಕೆಂದು ಸಭೆಯಲ್ಲಿ ಒಕ್ಕೊರಲಿನಿಂದ ಆಗ್ರಹಿಸಿದರು. ಹಾಗೂ ಇಂತಹ ದೊಡ್ಡ ಮಟ್ಟದ ಶಾಂತಿ ಸಭೆ ಆಯೋಜನೆ ಮಾಡಿದ ಇಲಾಖೆಗೆ ಅಭಿನಂದನೆ ಸಲ್ಲಿಸಲಾಯಿತು.











