ಧರ್ಮಸ್ಥಳ :ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ ಮಹಾ ಮಂಡಲೇಶ್ವರ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಇವರ ಪಟ್ಟಾಭಿಷೇಕದ 17ನೇ ವರ್ಧಂತ್ಯುತ್ಸವ ವೈದಿಕ ವಿಧಿ ವಿಧಾನಗಳೊಂದಿಗೆ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದಲ್ಲಿ ಸೆ. 3 ರಂದು ಬೆಳಿಗ್ಗೆ 11ಕ್ಕೆ ಜರಗಲಿದೆ.
ದಕ್ಷಿಣದ ಅಯೋಧ್ಯೆ ಎಂದೇ ಖ್ಯಾತಿ ಪಡೆದ ಶ್ರೀ ರಾಮ ಕ್ಷೇತ್ರದ ನಿರ್ಮಾತೃ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ಸಂಕಲ್ಪದಂತೆ ಸದ್ಗುರು ಶ್ರೀ ಬ್ರಹ್ಮಾನಂದ ಸ್ವಾಮೀಜಿಯವರು ವಿವಿಧ ಶಾಖಾ ಮಠಗಳನ್ನು ಸ್ಥಾಪಿಸಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರಾಮ ಜನ್ಮ ಭೂಮಿ ಅಯೋದ್ಯೆಯಲ್ಲಿ ಶಾಖಾ ಮಠ ನಿರ್ಮಾಣದ ಕಾಮಗಾರಿ ಆರಂಭ ಗೊಂಡಿದೆ. ತಮ್ಮ ಪಟ್ಟಾಭಿಷೇಕದ ದಶಮಾನೋತ್ಸವ ಸಂದರ್ಭದಲ್ಲಿ ಯಶಸ್ವಿಯಾಗಿ ರಾಷ್ಟ್ರೀಯ ಧರ್ಮ ಸಂಸದ್ ಆಯೋಜಿಸಿ ಜನಮಾನಸದಲ್ಲಿ ಉಳಿಯುವಂತೆ ಮಾಡಿದರು.
ಕಳೆದ 6 ವರ್ಷಗಳಿಂದ ಚಾತುರ್ಮಾಸ್ಯ ವ್ರತಾಚರಣೆ ಕೈಗೊಂಡಿದ್ದು, ಈ ವರ್ಷ ಉತ್ತರ ಕನ್ನಡ ಜಿಲ್ಲೆಯ ಕುಮುಟಾ ತಾಲೂಕು ಕೋನಳ್ಳಿ ವನದುರ್ಗಾ ದೇವಸ್ಥಾನದಲ್ಲಿ ಜು.10ರಿಂದ ಆ.20ರವರೆಗೆ ಚಾತುರ್ಮಾಸ್ಯ ವ್ರತಾಚಾರಣೆ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಪ್ರತಿದಿನ ಭಜನೆ ಯಕ್ಷಗಾನ, ತಾಳಮದ್ದಳೆ, ಭರತನಾಟ್ಯ ವೈಭವ, ಗೀತಾ ರೂಪಕ ಸೇರಿದಂತೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗಿತ್ತು ಗಣ್ಯರು, ಜನ ಪ್ರತಿನಿಧಿಗಳು, ಸ್ವಾಮೀಜಿಯವರ ಶಿಷ್ಯವೃಂದದವರು ಸೇರಿದಂತೆ ದೇಶಾದ್ಯಾಂತದಿಂದ ಸುಮಾರು ಎರಡು ಲಕ್ಷ ಭಕ್ತರು ಭೇಟಿ ನೀಡಿ ಗುರುಗಳಿಂದ ಮಂತ್ರಾಕ್ಷತೆ ಸ್ವೀಕರಿಸಿ ಆಶೀರ್ವಾದ ಪಡೆದು ಕೊಂಡರು.
ಸೆ.3ರಂದು ನಡೆಯುವ ಪಟ್ಟಾಭಿಷೇಕದ 17ನೇ ವರ್ಧಂತ್ಯುತ್ಸವ ಸಮಾರಂಭ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಸಚಿವರು, ಶಾಸಕರು, ಸಂಸದರು, ಮಾಜಿ ಶಾಸಕರು, ಮಾಜಿ ಸಂಸದರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಮಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











