ಬೆಳ್ತಂಗಡಿ: ನಾಡಿನ ಪುಣ್ಯ ಕ್ಷೇತ್ರ ಶ್ರೀ ಕ್ಷೇತ್ರ ಧಮ೯ಸ್ಥಳದ ವಿರುದ್ಧ ಅಪಪ್ರಚಾರ, ಷಡ್ಯಂತ್ರ ಹಾಗೂ ಸುಳ್ಳು ಅಪಪ್ರಚಾರ ಮಾಡಿ, ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ತರುತ್ತಿರುವ ಹಿಂದಿರುವ ಶಕ್ತಿಗಳ ಬಯಲಿಗೆಯ್ಯುವಲ್ಲಿ ಎಸ್ ಐಟಿ ತನಿಖೆಯ ಹಾದಿ ತಪ್ಪಿದ್ದು,ಈ ಪ್ರಕರಣವನ್ನು ಎನ್.ಐ.ಎಗೆ ನೀಡಬೇಕು ಎಂದು ಒತ್ತಾಯಿಸಿ ಹಾಗೂ ಧರ್ಮಸ್ಥಳದ ಜೊತೆ ನಾವಿದ್ದೇವೆ ಎಂಬ ಬೆಂಬಲಕ್ಕಾಗಿ ಬಿಜೆಪಿ ವತಿಯಿಂದ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನೇತೃತ್ವದಲ್ಲಿ ಸೆ.1ರಂದು ಧಮ೯ಸ್ಥಳ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಂಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿಗಳಾದ ಕ್ಯಾ.ಬೃಜೇಶ್ ಚೌಟ ಹೇಳಿದರು.
ಅವರು ಆ.31ರಂದು ಧಮ೯ಸ್ಥಳದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿಂದೂ ಶ್ರದ್ಧಾ ಕೇಂದ್ರ, ನಾಡಿನ ಪುಣ್ಯ ಕ್ಷೇತ್ರದ ವಿರುದ್ಧ ವ್ಯವಸ್ಥಿತ ಪಿತೂರಿ, ಸುಳ್ಳು ಆರೋಪಗಳು, ಅಪವಾದ ನಡೆಯುತ್ತಿದೆ. ಭಕ್ತಾಧಿಗಳ ಭಾವನೆಗೆ ಹಿಂದೂ ಸಮಾಜಕ್ಕೆ ಧಕ್ಕೆ ತರುವ ಕಾರ್ಯ ನಡೆಯುತ್ತಿದೆ. ಇದನ್ನು ಹಿಂದೂ ಸಮಾಜ ಹಾಗೂ ಬಿಜೆಪಿ ಸಹಿಸಿ ಕೊಳ್ಳಲು ಸಾಧ್ಯವಿಲ್ಲ. ಕ್ಷೇತ್ರದ ವಿರುದ್ಧ ನಡೆಯುತ್ತಿರುವ ಈ ಪಿತೂರಿಯ ಹಿಂದೆ ಕಮ್ಯೂನಿಸ್ಟ್, ನಿಷೇಧಿತ ಪಿಎಫ್ಐ ಮುಖವಾಡ ಹೊತ್ತ ಎಸ್ಡಿಪಿಐ ಸೇರಿದಂತೆ ಕಾಣದ ಶಕ್ತಿಗಳು ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದರು.
ಎಸ್ ಐಟಿ ತನಿಖೆಯನ್ನು ಆರಂಭದಲ್ಲಿ ನಾವು ಸ್ವಾಗತಿಸಿದ್ದೇವೆ ಆದರೆ ಇಂದು ಎಸ್ಐಟಿ ತನಿಖೆ ದಿಕ್ಕು ತಪ್ಪುತ್ತಿದೆ. ಹೊರ ರಾಜ್ಯದವರು ಇದರಲ್ಲಿ ಭಾಗಿಯಾಗಿದ್ದಾರೆ. ವಿದೇಶದಿಂದ ಫಂಡಿಂಗ್ ಆಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ರಾಷ್ಟ್ರ ವಿರೋಧಿ ಶಕ್ತಿಗಳು ಈ ಪ್ರಕರಣದ ಹಿಂದಿರುವ ಸಂಶಯ ವ್ಯಕ್ತವಾಗುತ್ತದೆ ಇದಕ್ಕಾಗಿ ಈ ಪ್ರಕರಣದ ಸಮಗ್ರ ತನಿಖೆಯಾಗಬೇಕು. ಧರ್ಮಸ್ಥಳ ಚಲೋ ಮೂಲಕ ಇದಕ್ಕೆ ಒಂದು ಸ್ವಷ್ಟ ಸಂದೇಶ ನೀಡಲಿದ್ದೇವೆ. ಈ ಪ್ರಕರಣವನ್ನು ಎನ್.ಐ.ಎಗೆ ನೀಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ. ನಾಳಿನ ಕಾರ್ಯಕ್ರಮಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ, ಸೋಮಣ್ಣ, ಶೋಭಾ ಕರಂದ್ಲಾಜೆ, ಪ್ರಮುಖ ನಾಯಕರುಗಳಾದ ಆರ್. ಅಶೋಕ್, ಗೋವಿಂದ ಕಾರಜೋಳ, ಸುನೀಲ್ ಕುಮಾರ್, ಸಂಸದರು, ಶಾಸಕರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ ಹೆಚ್.ಸಿ ಅವರು ಮಾತನಾಡಿ, ಧರ್ಮಸ್ಥಳ ಪ್ರಕರಣದ ಬಗ್ಗೆ ಎಸ್ಐಟಿ ತನಿಖೆಯನ್ನು ನಾವು ಸ್ವಾಗತಿಸುತ್ತೇವೆ ಆದರೆ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ, ಬುರುಡೆ ತಂದಾಗ ಅನಾಮಿಕನ ಪೂರ್ವಪರ ವಿಚಾರಣೆ ನಡೆಸಿಲ್ಲ, ಅವನನ್ನು ವಿಚಾರಣೆ ನಡೆಸಿ ಬಂಧಿಸಬೇಕಿತ್ತು. ಆ ಕೆಲಸವನ್ನು ಎಸ್ಐಟಿ ಈಗ ಮಾಡುತ್ತಿದೆ. ಎಡಪಂಥಿಯರ ಪ್ರಭಾವ ಅಂತರಾಷ್ಟ್ರೀಯ ಪ್ರಭಾವ ಈ ಪ್ರಕರಣದ ಹಿಂದಿದೆ ಇದರ ಬಗ್ಗೆ ತನಿಖೆ ನಡೆಸಬೇಕು. ಆದರೆ ಎಸ್.ಐ.ಟಿ ವ್ಯಾಪ್ತಿಗೆ ಈ ಅಧಿಕಾರ ಬರುವುದಿಲ್ಲ ಅದಕ್ಕಾಗಿ ಪ್ರಕರಣವನ್ನು ಎನ್.ಐ.ಎಗೆ ನೀಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದು ತಿಳಿಸಿದರು.
ಒಂದು ಮಸೀದಿ, ಮೌಲ್ವಿ ಬಗ್ಗೆ ಒಬ್ಬ ಹಿಂದೂ ಮಾತನಾಡಿದರೆ ಅವರ ಮೇಲೆ ಕೇಸು ಹಾಕಿ ಜೈಲಿಗೆ ಹಾಕುವ ರಾಜ್ಯ ಸರಕಾರ ಹಿಂದೂ ಧರ್ಮದ ಪವಿತ್ರ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಬಾಯಿಗೆ ಬಂದಾಗೆ ಮಾತನಾಡಿದ ಸಮೀರ್ನ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ, ಈ ಪ್ರಕರಣವನ್ನು ಎನ್ಐಎ ತನಿಖೆಗೆ ನೀಡಲು ಸಂಸದರು ಮನವಿ ಮಾಡಿದ್ದಾರೆ ಇದರ ಜೊತೆ ರಾಜ್ಯ ಸರಕಾರವು ಸ್ಪಂದನೆ ನೀಡಬೇಕು ಇದಕ್ಕಾಗಿ ನಾಳೆ ಸೆ. ರಂದು ಬಿಜೆಪಿಯಿಂದ ಧರ್ಮಸ್ಥಳ ಚಲೋ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ. ಈಗಾಗಲೇ ರಾಜ್ಯದ ಮೂಲೆ, ಮೂಲೆಗಳಿಂದ 2ಸಾವಿರ ಬಸ್ಸಿನಲ್ಲಿ 20 ಸಾವಿರ ಮಂದಿ ಇವತ್ತು ಧರ್ಮಸ್ಥಳಕ್ಕೆ ತಲುಪಲಿದ್ದಾರೆ. ನಾಳೆ ಸಮಾವೇಶದಲ್ಲಿ 10 ಸಾವಿರ ಕಾರುಗಳಲ್ಲಿ ನಾಡಿನಾದ್ಯಂತದಿಂದ 1ಲಕ್ಷಕ್ಕೂ ಮಿಕ್ಕಿ ಜನರು ಧರ್ಮಸ್ಥಳಕ್ಕೆ ಬರಲಿದ್ದಾರೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಸ್ ಕುಂಪಲ, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಮಲ್ಲಿಕಾರ್ಜುನ್, ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್, ಕಾರ್ಯದರ್ಶಿ ಜಯಾನಂದ ಗೌಡ ಪ್ರಜ್ವಲ್, ಪ್ರಮುಖರಾದ ಶಶಿಧರ ಕಲ್ಮಂಜ, ಗಣೇಶ್ ಗೌಡ ಮೊದಲಾದವರು ಉಪಸ್ಥಿತರಿದ್ದರು.











