ಉಜಿರೆ: ಕಳೆದ ಹಲವು ವರ್ಷಗಳಿಂದ ಉಜಿರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನೂತನ ಅಧ್ಯಕ್ಷ ಪ್ರಸಾದ್ ಬಿಎಸ್ ಮತ್ತು ತಂಡದ ಪದ ಪ್ರದಾನ ಕಾರ್ಯಕ್ರಮ ಹಾಗೂ ಉಜಿರೆ ವರ್ತಕರ ಸಂಘದ ಕುಟುಂಬ ಮಿಲನ ಕಾರ್ಯಕ್ರಮ ಉಜಿರೆ ಕೃಷ್ಣಾನುಗ್ರಹ ಸಭಾಭವನದಲ್ಲಿ ಆ.31 ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಜಿರೆ ವರ್ತಕರ ಸಂಘದ ಅಧ್ಯಕ್ಷ ಅರವಿಂದ ಕಾರಂತ್ ವಹಿಸಿ ಮಾತನಾಡಿ ಕಳೆದ ನಾಲ್ಕು ವರ್ಷ ಅದ್ಬುತವಾಗಿ ಸಂಘವನ್ನು ಮುನ್ನಡೆಸಿದ ತೃಪ್ತಿಯಿದೆ.ಮುಂದೆಯೂ ನನ್ನ ಸಂಪೂರ್ಣ ಸಹಕಾರವಿದೆ ಎಂದರು.
ಮುಂದಿನ ಸಾಲಿನ ನೂತನ ಅಧ್ಯಕ್ಷ ಪ್ರಸಾದ್ ಬಿ. ಎಸ್, ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್, ಕೋಶಾಧಿಕಾರಿ ವಿಶ್ವನಾಥ ಭಂಡಾರಿ ಮತ್ತು ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.
ವರ್ತಕರ ಸಂಘದ ಗೌರವಾಧ್ಯಕ್ಷರು, ಉಜಿರೆ ಶ್ರೀ ಜನಾರ್ಧನ ದೇವಸ್ಥಾನದ ಅನುವಂಶಿಕ ಆಡಳಿತ ಮೋಕ್ತಸರಾದ ಶರತ್ ಕೃಷ್ಣ ಪಡುವೆಟ್ನಾಯ,ವಿಧಾನ ಪರಿಷತ್ ಶಾಸಕ ಕೆ. ಪ್ರತಾಪಸಿಂಹ ನಾಯಕ್ ಅವರು ವರ್ತಕರ ಸಂಘದ ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿದರು.
ಉಜಿರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿ ಕುಮಾರ್ ಬರಮೇಲು, ಬೆಳ್ತಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ರೋನಾಲ್ಡ್ ಲೋಬೊ,ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಕಿರಣ್ ಕಾರಂತ್, ಮಡಂತ್ಯಾರು ವಾಣಿಜ್ಯ ಮತ್ತು ಕೈಗಾರಿಕಾ ಸೇವಾ ಉದ್ದಿಮೆದಾರರ ಸಂಘದ ಉಪಾಧ್ಯಕ್ಷ ಯೋಗೀಶ್ ಪೂಜಾರಿ ಕಡ್ತಿಲ, ಉಜಿರೆ ಬೆಡ್ ಮಾರ್ಟ್ ಯು.ಎ. ಹಮೀದ್, ಮಂಜುಶ್ರೀ ಫ್ಯಾನ್ಸಿ ಕೇವಲ್ ರಾಮ್, ಉಜಿರೆ ವಿಘ್ನೇಶ್ ಬ್ಯಾಟರಿ ಮಾಲಕ ತುಂಗಪ್ಪ ಕೋಟ್ಯಾನ್ ಉಪಸ್ಥಿತರಿದ್ದರು.
ಗೌರವಾರ್ಪಣೆ:ಮನೆ ಮನೆಗೆ ತೆರಳಿ ಚಿಕಿತ್ಸೆ ನೀಡುತ್ತಿರುವ ಎಸ್ ಎ ಮೆಡಿಕಲ್ ನ ಪ್ರಕಾಶ್ ಫೆರ್ನಾಂಡಿಸ್, ನಿಕಟಪೂರ್ವ ಅಧ್ಯಕ್ಷ ಅರವಿಂದ ಕಾರಂತ್, ನಿಕಟಪೂರ್ವ ಕಾರ್ಯದರ್ಶಿ ಲಕ್ಷ್ಮಣ ಗೌಡ ಅವರನ್ನು ಗೌರವಿಸಲಾಯಿತು.
ತುಳುನಾಡ ಶೈಲಿಯ ಉಟೋಪಾಚಾರ: ಬೆಳಿಗ್ಗೆಯಿಂದ ಮಕ್ಕಳಿಗೆ,ಮಹಿಳೆಯರಿಗೆ, ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು, ಫನ್ನಿ ಗೇಮ್ಸ್ ನಡೆಯಿತು. ಮಧ್ಯಾಹ್ನ ತುಳುನಾಡ ಸಾಂಪ್ರದಾಯಿಕ ಶೈಲಿಯ ಊಟೋಪಚಾರಗಳು ಎಲ್ಲರ ಗಮನ ಸೆಳೆಯಿತು.
ನೂತನ ಕಾರ್ಯದರ್ಶಿ ಅಬೂಬಕ್ಕರ್ ಸ್ವಾಗತಿಸಿದರು. ಯುವ ಸಾಹಿತಿ ಚಂದ್ರಹಾಸ ಬಳಂಜ, ಕನ್ನಿಕಾ ನಿರೂಪಿಸಿದರು.











