ಕೊಯ್ಯೂರು: “ಶಿಕ್ಷಕರು ಶಾಲೆಯಲ್ಲಿ ಮಾತ್ರವಲ್ಲದೇ ಸಮಾಜದಲ್ಲಿ ಬೆರೆತಾಗ ಜನಮಾನಸದಲ್ಲಿ ಉಳಿಯುತ್ತಾರೆ. ಶಿಕ್ಷಕರಿಗೆ ಗೌರವ ಸಿಗುವುದು ಅವರ ಪಾಂಡಿತ್ಯದಿಂದಲ್ಲ ಬದಲಾಗಿ ಅವರ ವ್ಯಕ್ತಿತ್ವದಿಂದಾಗಿ” ಎಂದು ನಿವೃತ್ತ ಮುಖ್ಯ ಶಿಕ್ಷಕ ಧರ್ಣಪ್ಪ ಗೌಡ ಹಲೆಕ್ಕಿ ಅಭಿಪ್ರಾಯಪಟ್ಟರು.
ಅವರು ಕೊಯ್ಯೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮಾಜಿ ಯೋಧ ಹಾಗೂ ನಿವೃತ್ತ ಉಪನ್ಯಾಸಕ ಹರೀಶ್ ರೈ ಹಾಗೂ ಕೊಯ್ಯೂರು ಸರ್ಕಾರಿ ಪ್ರೌಢ ಶಾಲೆಯ ಹಿಂದಿ ಶಿಕ್ಷಕ ಸುಧಾಕರ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯ ಕೋರಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಲೋಕೇಶ್ ಪಾಂಬೇಲು, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ದಾಮೋದರ ಗೌಡ ಬೆರ್ಕೆ, ಪ್ರಾಚ್ಯ ವಸ್ತು ಸಂಗ್ರಾಹಕ ಹಳ್ಳಿ ಮನೆ ಹೈದರಾಲಿ ಮತ್ತು ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು.
ಪ್ರಾಚಾರ್ಯ ಮೋಹನ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಧರ್ಣಪ್ಪ ಗೌಡ ಹಲೆಕ್ಕಿ ಮತ್ತು ನಿವೃತ್ತ ಉಪನ್ಯಾಸಕ ಹರೀಶ್ ರೈ ಉಜಿರೆ-ಇವರುಗಳನ್ನು ಕಾಲೇಜು ವತಿಯಿಂದ ಅಭಿನಂದಿಸಲಾಯಿತು.
ವಿದ್ಯಾರ್ಥಿನಿಯರಾದ ವಿದ್ಯಾ, ವಿನಯ, ಐಶ್ವರ್ಯ, ಸಹಲಾ, ಚಿರಸ್ವಿ ಪ್ರಾರ್ಥನೆ ಗೈದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ರಂಜಿತ್ ಶಿಕ್ಷಕರ ದಿನಾಚರಣೆಯ ಮಹತ್ವದ ಬಗ್ಗೆ ತಿಳಿಸಿದರು. ವಿದ್ಯಾರ್ಥಿನಿ ರಶ್ಮಿತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಸ್ವರೂನ್ ಸ್ವಾಗತಿಸಿ, ವಿದ್ಯಾರ್ಥಿ ರಮೀಜ್ ವಂದಿಸಿದರು. ವಿದ್ಯಾರ್ಥಿನಿಯರಾದ ಅಂಕಿತ ಮತ್ತು ದಿವ್ಯ ಅಭಿನಂದನಾ ಪತ್ರ ವಾಚಿಸಿದರು. ವಿದ್ಯಾರ್ಥಿನಿಯರಾದ ವಿನಯ, ವಂಶಿಕ, ಸೌಜನ್ಯ ಕಾರ್ಯಕ್ರಮ ನಿರ್ವಹಣೆಗೈದರು.











