
ಬೆಳ್ತಂಗಡಿ: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಸೇವಾ ದರ ಪರಿಷ್ಕರಣೆಯು ಎಂಟು ವರ್ಷದ ಬಳಿಕ ಅಲ್ಪ ಪ್ರಮಾಣದಲ್ಲಿ ಕೆಲವು ಸೇವೆಗಳಿಗೆ ಮಾಡಲಾಗಿದೆ. ಈ ಹಿಂದಿನ ವ್ಯವಸ್ಥಾಪನ ಸಮಿತಿಯವರು ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಸಲ್ಲಿಸಿರುವ ತಾ.20.1.2024ರ ಸಭೆಯ ನಿರ್ಣಯದಂತೆ, ಕೆಲವು ಸೇವಾ ದರ ಪಟ್ಟಿಯನ್ನು ಅಲ್ಪಪ್ರಮಾಣದಲ್ಲಿ ಹೆಚ್ಚಿಸಲಾಗಿದೆ.
ಅವಲಕ್ಕಿ ಪಂಚ ಕಜ್ಜಾಯ ರೂ. 70 ರಿಂದ ರೂ. 80, ಕಡ್ಲೆ ಪಂಚ ಕಜ್ಜಾಯ ರೂ.20ರಿಂದ 30 ರೂಪಾಯಿಗೆ, ಅಪ್ಪ ಪ್ರಸಾದ ರೂ.30 ರಿಂದ 40 ರೂಪಾಯಿಗೆ, ಲಾಡು ಪ್ರಸಾದ ರೂ.20 ರಿಂದ 30 ರೂಪಾಯಿವರೆಗೆ ಘನ ವಾಹನ ಪೂಜೆ ರೂ.75 ರಿಂದ 100 ರೂಪಾಯಿ, ಲಘು ವಾಹನ ರೂ.100 ರಿಂದ 200, ಅಷ್ಟೋತ್ತರ ಅರ್ಚನೆ ರೂ.40 ರಿಂದ ರೂ.50 ವರೆಗೆ ಹೆಚ್ಚಿಸಲಾಗಿದೆ.
ಕ್ಷೇತ್ರದಲ್ಲಿ ದೇವರಿಗೆ ನಡೆಯುವ 20 ಸೇವೆಗಳಲ್ಲಿ 8 ಸೇವೆಗಳಿಗೆ ಎಂಟು ವರ್ಷದ ಬಳಿಕ ದರವನ್ನು ಪರಿಷ್ಕರಣೆ ಮಾಡಲಾಗಿದೆ. ಇದರಲ್ಲಿ ಸರ್ಕಾರದ ಯಾವುದೇ ಪಾತ್ರ ಇರುವುದಿಲ್ಲ.ಆಗಮ ಪಂಡಿತರು ದೇವಾಳಕ್ಕೆ ಖುದ್ದು ಭೇಟಿ ನೀಡಿ ಸೇವಾರ್ಥ ಪಟ್ಟಿಯನ್ನು ಕೂಲಕುಶವಾಗಿ ಪರಿಶೀಲಿಸಿ, ಕೆಲವು ಮಾರ್ಪಾಡು ಗಳನ್ನು ಮಾಡಿರುವುದರಿಂದ 8 ಸೇವೆಗಳ ದರಗಳ ಪರಿಷ್ಕರಣೆಗೆ ಪ್ರಸ್ತುತ ದೇವಸ್ಥಾನದ ವ್ಯವಸ್ಥಾಪನ ಸಮಿತಿಯು ಅಂಗೀಕರಿಸಿದೆ. ದರ ಪರಿಷ್ಕರಣೆ ಮಾಡಿರುವ ಸೇವೆಗಳ ಸಾಮಾಗ್ರಿಗಳ ವೆಚ್ಚಗಳು ಏರಿಕೆ ಆಗಿರುವುದರಿಂದ ಅನಿವಾರ್ಯವಾಗಿ ಅಲ್ಪ ಪ್ರಮಾಣದಲ್ಲಿ ಸೇವ ದರವನ್ನು ಪರಿಷ್ಕರಣೆ ಮಾಡಲಾಗಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಕೆ ತಿಳಿಸಿದ್ದಾರೆ.











