ಬೆಳ್ತಂಗಡಿ:ಸೆ 30.ರಂದು ಸ.ಪ್ರ.ದ. ಕಾಲೇಜು ಬೆಳ್ತಂಗಡಿಯಲ್ಲಿ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನವಯುವ ಹೆಸರಿನಲ್ಲಿ ಸ್ವಾಗತ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಸುರೇಶ್ ವಿ ಇವರು ಹಿಂದಿನ ಕಾಲದಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯುವುದು ತುಂಬಾ ಕಷ್ಟವಾಗಿತ್ತು ಆದರೆ ಇಂದು ನೀವುಗಳು ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದು ಅದರ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ಕಾಲೇಜಿನಲ್ಲಿರುವ ಎಲ್ಲ ಸಂಪನ್ಮೂಲಗಳನ್ನು ಸಮರ್ಪಕವಾಗಿ

ಬಳಸಿಕೊಳ್ಳಲು ತಿಳಿಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿಗಳಾದ ಪ್ರೊಫೆಸರ್ ಪದ್ಮನಾಭ ಕೆ. ಇವರು ಮಾತನಾಡಿ ವಿದ್ಯಾರ್ಥಿಗಳು ನಿಮಗೆ ಸಿಕ್ಕ ಅವಕಾಶಗಳನ್ನು ಬಿಡದೆ ಅವಕಾಶಗಳ ಬೆನ್ನು ಹತ್ತಬೇಕು ಎಂದು ತಿಳಿಸಿದರು. ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ಡಾ. ರವಿ ಎಂ. ಎನ್. ಇವರು ಮಾತನಾಡಿ ಪಠ್ಯಕ್ರಮದ ಜೊತೆಗೆ ಇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದಾಗ ಮಾತ್ರ ನಮ್ಮ ಸರ್ವತೋಮುಖ ಅಭಿವೃದ್ಧಿಗೆ ಅವಕಾಶ ಸಿಗುತ್ತದೆ ಎಂದು ತಿಳಿಸಿದರು. ನಿರ್ವಹಣಾ ವಿಭಾಗದ ಮುಖ್ಯಸ್ಥರು ಹಾಗೂ ಉದ್ಯೋಗ ಮಾಹಿತಿ ಕೇಂದ್ರದ ಸಂಚಾಲಕರಾದ ಪ್ರೊಫೆಸರ್ ರಶ್ಮಿ ಅವರು ವಿದ್ಯಾರ್ಥಿಗಳು ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಕೌಶಲ್ಯಗಳನ್ನು ಬಳಸಿಕೊಂಡು ನಮ್ಮ ಶಿಕ್ಷಣ ಮುಗಿಯುವ ಹಂತದಲ್ಲಿ ಉದ್ಯೋಗವನ್ನು ಪಡೆಯುವಲ್ಲಿ ಯಶಸ್ವಿಯಾಗಬೇಕು ಎಂದು ತಿಳಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಮಾರುತಿ ಜಿ ಇವರು ನಾವೆಲ್ಲರೂ ನಮ್ಮ ತರಗತಿಗಳ ಜೊತೆಗೆ ಕಾಲೇಜಿನಲ್ಲಿ ದೊರೆಯುವ ಹಾಗೂ ಮೊಬೈಲ್ನಲ್ಲಿ ಸಿಗುವಂತ ಸಂಪನ್ಮೂಲಗಳನ್ನು ಬಳಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಬೇಕೆಂದು ತಿಳಿಸಿದರು. ಸ್ನಾತಕೋತ್ತರ ವಿಭಾಗದ ಪ್ರತಿನಿಧಿಗಳಾದ ಶ್ರೀ ನಿತಿನ್ ಶೆಟ್ಟಿ ಹಾಗೂ ಕುಮಾರಿ ವೈಷ್ಣವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಂತಿಮ ಎಂ ಕಾಂನ ವಿದ್ಯಾರ್ಥಿನಿ ಕು. ಅಂಕಿತ ಸ್ವಾಗತಿಸಿ, ಕು. ಚೈತ್ರ ಇವರು ವಂದನಾರ್ಪಣೆ ಗೈದರು. ಕು. ಪೂರ್ಣಿಮಾ ಹಾಗೂ ಕು. ವನಿತಾ ಪ್ರಾರ್ಥಿಸಿ, ಕು. ವಾಣಿ ಇವರು ಕಾರ್ಯಕ್ರಮ ನಿರೂಪಿಸಿದರು.











