ಉಜಿರೆ : ಡಾ. ಡಿ. ವೀರೇಂದ್ರ ಹೆಗ್ಗಡೆಯವರ ದೂರದರ್ಶಿತ್ವದ ಈ ರುಡ್ ಸೆಟ್ ಸಂಸ್ಥೆಯ ಮೂಲಕ ನಿರುದ್ಯೋಗ ನಿವರಾಣೆಗೆ ಮಹತ್ವ ಮೈಲುಗಲ್ಲು ಆಗಿದೆ. ಇಂದಿನ ಆಧುನಿಕ ಯುಗದಲ್ಲಿ ಡಿಜಿಟಲ್ ಮಾಧ್ಯಮಕ್ಕೆ ಹೆಚ್ಚಿನ ಮಹತ್ವ ಇದೆ ಈ ಹಿನ್ನಲೆಯಲ್ಲಿ ವೃತ್ತಿಗೆ ಸಂಬಂಧಿಸಿದ ತರಬೇತಿಯನ್ನು ಪಡೆಯುವುದು ಮಾತ್ರವಲ್ಲ ಆ ವೃತ್ತಿಯಲ್ಲಿ ಶ್ರದ್ಧೆ –ಬದ್ಧತೆ ಇರಬೇಕು ಆವಾಗ ಅದು ನಮ್ಮ ಕೈ ಹಿಡಿಯುತ್ತದೆ. ಜೀವನ ಅನ್ನುವುದು ಸುಲಭವಲ್ಲ ಪ್ರತಿ ಕ್ಷಣವು ದುಡಿಯಬೇಕಾಗುತ್ತದೆ. ತೀರ ಕಷ್ಟದ ಸಮಯದಲ್ಲಿ ಸಕರಾತ್ಮಕವಾದ ಯೋಚನೆ ಮಾಡಿದರೆ ಯಾವುದೇ ಕಷ್ಟವನ್ನು ಎದುರಿಸಿ ಬೆಳೆಯಬಹುದು. ಸಣ್ಣ ಸಣ್ಣ ಯೋಜನೆಗಳನ್ನು ಹಾಕಿಕೊಂಡು ಅದನ್ನು ಸಾಧಿಸಿ, ಇದರ ಮೂಲಕ ಹೆಚ್ಚಿನ ಸಾಧನೆ ಮಾಡಬಹುದು. ಸಾಧನೆಗೆ ಮುಖ್ಯವಾಗಿ ಮನಸ್ಸು-ಗುರಿ-ಪ್ರಯತ್ನ ಮುಖ್ಯ. ಶ್ರದ್ಧೆ-ಆತ್ಮವಿಶ್ವಾಸ-ಸಕರಾತ್ಮಕ ಮಾನೋಭಾವದ ಜೊತೆಗೆ ದುರಭ್ಯಾಸಗಳಿಂದ ದೂರ ಇದ್ದು ಸಂಸ್ಥೆಯಲ್ಲಿ ಹೇಳಿ ಕೊಟ್ಟ ಎಲ್ಲಾ ವಿಚಾರಗಳನ್ನು ಅಳವಡಿಸಿಕೊಂಡು ಯಶಸ್ವಿ ಉದ್ಯಮಿಗಳಾಗಿ ಬೆಳೆಯಿರಿ ಎಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಸತಿಯುತ ಪದವಿ ಪೂರ್ವ ಕಾಲೇಜಿನ ಪ್ರಾಶುಂಪಾಲರಾದ ಸುನೀಲ್ ಪಂಡಿತ್ ಅಭಿಪ್ರಾಯಪಟ್ಟರು.

ಅವರು ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆದ ಟಿ.ವಿ. ಟೆಕ್ನಿಷಿಯನ್ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ಮೌಲ್ಯ ಮತ್ತು ಕೌಶಲ್ಯವನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರುಡ್ ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ.ವಿಜಯ ಕುಮಾರ್ ವಹಿಸಿ, ಮಾತನಾಡಿ ಡಿಜಿಟಲ್ ಕ್ಷೇತ್ರದಲ್ಲಿ ಇರುವ ವಿವಿಧ ಅವಕಾಶಗಳನ್ನು ಬಳಸಿಕೊಳ್ಳಿ ಸ್ವ ಉದ್ಯೋಗಕ್ಕೆ ಬೇಕಾದ ಸಾಲ ಸೌಲಭ್ಯಗಳಿಗೆ ಯೋಜನಾ ವರದಿಯನ್ನು ತಯಾರಿಸಿಕೊಂಡು ಬ್ಯಾಂಕ್ ಗಳನ್ನು ಸಂಪರ್ಕ ಮಾಡಿ ಎಂದು ತಿಳಿಸಿದರು.
ರುಡ್ ಸೆಟ್ ಸಂಸ್ಥೆಯ ನಿರ್ದೇಶಕ ಅಜೇಯ ಸ್ವಾಗತಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕ ಕೆ.ಕರುಣಾಕರ ಜೈನ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ವಂದಿಸಿದರು. ರಂಜಿತ್, ವಿನೋದ ಕುಮಾರ್ ತರಬೇತಿಯ ಅನುಭವ ಹಂಚಿಕೊಂಡರು.













