ಮೂಡುಬಿದಿರೆ: ಬಂಟ ಸಮುದಾಯದ ಸಮಾನ ಮನಸ್ಕರ ಹೆಮ್ಮೆಯ ಆರ್ಥಿಕ ವ್ಯವಹಾರ ಸಂಸ್ಥೆಯಾಗಿ ಹುಟ್ಟಿಕೊಂಡ ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ಆರ್ಥಿಕ ಶಿಸ್ತು,ಬದ್ದತೆಯ ವ್ಯವಹಾರಗಳಿಂದ ಎಲ್ಲಾ ಸಮುದಾಯಗಳ ವಿಶ್ವಾಸಾರ್ಹ ಸಹಕಾರಿ ಸಂಸ್ಥೆಯಾಗಿ ಬೆಳೆಯುತ್ತಿರುವುದು ಶ್ಲಾಘನೀಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮೆನೇಜಿಂಗ್ ಟ್ರಸ್ಟಿ ವಿವೇಕ ಆಳ್ವ ಹೇಳಿದರು.

ಅವರು ನ. 5ರಂದು ಮೂಡಬಿದ್ರೆ ಪುರಸಭಾ ಕಾರ್ಯಾಲಯದೆದುರಿನ ಫಾರ್ಚೂನ್ ನೀತಿ ಹೈಟ್ಸ್ ಕಟ್ಟಡದಲ್ಲಿ ಸ್ಥಳಾಂತರಿತ, ಹವಾನಿಯಂತ್ರಿತ ‘ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಕಚೇರಿಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
20 ವರ್ಷಗಳಲ್ಲಿ ಅಷ್ಟೇ ಸಂಖ್ಯೆಯ ಶಾಖೆಗಳನ್ನು ಹೊಂದಿರುವ ಈ ಸೊಸೈಟಿಯು ಶರವೇಗದ ಬೆಳವಣಿಗೆ ಹಾಗೂ ಗುಣಮಟ್ಟದ ಸೇವೆಯಿಂದ 50 ಶಾಖೆಗಳನ್ನು ತೆರೆಯುವಂತಾಗಲಿ ಎಂದರು.
ಮುಖ್ಯ ಅತಿಥಿಯಾಗಿ ಉದ್ಯಮಿ ಕೆ. ಶ್ರೀಪತಿ ಭಟ್ ಅವರು ಮಾತನಾಡಿ ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ಕಡಿಮೆ ಅವಧಿಯಲ್ಲಿಯೇ ಅತ್ಯಧಿಕ ಶಾಖೆ ತೆರೆದು ಪ್ರಾಮಾಣಿಕ ವ್ಯವಹಾರ ನಡೆಯುತ್ತಿರುವುದನ್ನು ಗಮನಿಸಬಹುದಾಗಿದೆ ಎಂದರು.
ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಅಜಿತ್ ಜಿ. ಶೆಟ್ಟಿ ಕೊರ್ಯಾರು ಅಧ್ಯಕ್ಷತೆ ವಹಿಸಿ, ಗ್ರಾಹಕರ ತುಂಬು ಪ್ರೋತ್ಸಾಹದಿಂದಾಗಿ ಗುಣಮಟ್ಟದ ಸೇವೆ ನೀಡಲು ಸಾಧ್ಯವಾಗಿದೆ. ಚಿನ್ನಾಭರಣ ಆಧಾರಿತ ಸಾಲ ಪಡೆದವರೇ ಹೆಚ್ಚಾಗಿದ್ದು ಉತ್ತಮ ಸೇವೆ ನೀಡಲು ನಮ್ಮ ಸಂಸ್ಥೆ ಬದ್ಧವಾಗಿದೆ ಎಂದರು.

ನ.13ರಂದು ಧರ್ಮಸ್ಥಳದಲ್ಲಿ 20ನೇ ಶಾಖೆ ಉದ್ಘಾಟನೆ:
ನಮ್ಮ ಸೊಸೈಟಿಯಲ್ಲಿ 34,500ಕ್ಕೂ ಮಿಕ್ಕಿ ಸದಸ್ಯರಿದ್ದು 305 ಕೋ ರೂ. ದುಡಿಯುವ ಬಂಡವಾಳ, 550 ಕೋ.ರೂ. ವಹಿವಾಟು ನಡೆಸುತ್ತ, 283 ಕೋ ರೂ. ಠೇವಣಿಯೊಂದಿಗೆ 257 ಕೋ. ರೂ ಸಾಲ ಒದಗಿಸಿ ಸದ್ಯ 18 ಶೇ. ಡಿವಿಡೆಂಡ್ ನೀಡಿದ್ದೇವೆ. ಇದೇ ನ.13ರಂದು ಧರ್ಮಸ್ಥಳದಲ್ಲಿ 20ನೇ ಶಾಖೆ ತೆರೆಯಲಿದ್ದೇವೆ ಎಂದು ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಅಜಿತ್ ಜಿ. ಶೆಟ್ಟಿ ಕೊರ್ಯಾರು ಹೇಳಿದರು.
ಎಂಸಿಎಸ್ ಸೊಸೈಟಿಯ ಅಧ್ಯಕ್ಷ ಎಂ. ಬಾಹುಲಿ ಪ್ರಸಾದ್,ಹೋಟೆಲ್ ಪಂಚರತ್ನ ಇಂಟರ್ ನ್ಯಾಷನಲ್ನ ಪ್ರವರ್ತಕ ತಿಮ್ಮಯ್ಯ ಶೆಟ್ಟಿ ಮಾತನಾಡಿ ಶುಭ ಹಾರೈಸಿದರು.
ಉಪಾಧ್ಯಕ್ಷ ಜಯಂತ ಶೆಟ್ಟಿ ಕೆ., ನಿರ್ದೇಶಕ ಮಂಡಳಿಯ ಸೀತಾರಾಮ ಶೆಟ್ಟಿ ಬಿ., ಬಾಲಕೃಷ್ಣ ಪೂಂಜ ಎಚ್., ಪುಷ್ಪರಾಜ್ ಶೆಟ್ಟಿ, ಕೃಷ್ಣ ರೈ ಟಿ., ಎಂ. ಜಯರಾಮ ಭಂಡಾರಿ ಧರ್ಮಸ್ಥಳ, ಪುರಂದರ ಶೆಟ್ಟಿ, ಮಂಜುನಾಥ ರೈ, ರಾಜು ಶೆಟ್ಟಿ ಬೆಂಗತ್ಯಾರು, ಜಯರಾಮ ಶೆಟ್ಟಿ ಮುಂಡಾಡಿಗುತ್ತು, ಪ್ರಾದೇಶಿಕ ಪ್ರಬಂಧಕರಾದ ಅಜಿತ್ ಶೆಟ್ಟಿ, ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು. ಮೂಡುಬಿದಿರೆಯ ಗ್ರಾಹಕರು, ಗಣ್ಯರು ಭಾಗವಹಿಸಿದ್ದರು.
ನಿರ್ದೇಶಕ ಪ್ರಕಾಶ್ ಶೆಟ್ಟಿ ನೊಚ್ಚ ಸ್ವಾಗತಿಸಿ,ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಜಯ್ ಶೆಟ್ಟಿ ವಂದಿಸಿದರು.











