ಬೆಳ್ತಂಗಡಿ: ಸರ್ವಧರ್ಮ ಸಮ್ಮೇಳನದಲ್ಲಿ ಇಸ್ಲಾಂ ಧರ್ಮದಲ್ಲಿ ಸಮನ್ವಯತೆಯ ಬಗ್ಗೆ ಉಪನ್ಯಾಸ ನೀಡಲಿರುವ ತನ್ವೀರ್ ಅಹಮ್ಮದ್ ಉಲ್ಲಾ ಅವರು ಪಾದಯಾತ್ರೆ ಮೂಲಕ ಬೆಂಗಳೂರಿನಿಂದ ಆಗಮಿಸಿದವರನ್ನು ಚಾರ್ಮಾಡಿಯಲ್ಲಿ ಸ್ವಾಗತಿಸಲಾಯಿತು.

ಗ್ರಾ. ಯೋ. ಜಿಲ್ಲಾ ನಿರ್ದೇಶಕ ದಿನೇಶ್, ತಾಲೂಕು ಯೋಜನಾಧಿಕಾರಿ ಯಶೋಧರ, ಮೇಲ್ವಿಚಾರಕ ಜನಾರ್ದನ ಆಚಾರ್ಯ ಮತ್ತು ಗಣೇಶ್, ಜನಜಾಗೃತಿ ವೇದಿಕೆಯ ಪೂರ್ವಾಧ್ಯಕ್ಷ ಡಿ.ಎ ರಹಿಮಾನ್, ಭಜನಾ ಪರಿಷತ್ ಅಧ್ಯಕ್ಷ ರವಿರಾಜ್ ಚಾರ್ಮಾಡಿ, ಸೇವಾ ಪ್ರತಿನಿಧಿಗಳಾದ ಸರಿತಾ, ಅನಿತಾ, ವಿಜಿತಾ, ಕವಿತಾ, ಚೇತನಾ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜನಜಾಗೃತಿ ವೇದಿಕೆಯ ಹಿರಿಯ ಸದಸ್ಯ ಅನಂತರಾವ್ ಚಾರ್ಮಾಡಿ ಮನೆಗೆ ಭೇಟಿ ನೀಡಿದ ಅವರನ್ನು ಅವರ ಪುತ್ರ ಪ್ರಕಾಶ್ ರಾವ್ ಶಾಲು ಹೊದಿಸಿ ಗೌರವಿಸಿದರು. ತನ್ವೀರ್ ಅವರೂ ಅನಂತ ರಾವ್ ಅವರನ್ನು ಅಭಿನಂದಿಸಿದರು.
ದಾರಿ ಮಧ್ಯೆ ಬೀಟಿಗೆ ಮತ್ತು ಚಾರ್ಮಾಡಿ ಮಸೀದಿಯನ್ನು ಸಂದರ್ಶಿಸಿದರು. ಅಲ್ಲಿಂದ ಮುಂಡಾಜೆಗೆ ಆಗಮಿಸಿದ ವೇಳೆ ಸೋಮಂತಡ್ಕ ಪೇಟೆಯಲ್ಲಿ ಅವರನ್ನು ಸ್ವಾಗತಿಸಲಾಯಿತು. ನಾಮದೇವ ರಾವ್ ಮುಂಡಾಜೆ, ಚೆನ್ನಕೇಶವ ಅರಸಮಜಲು, ಸೇವಾ ಪ್ರತಿನಿಧಿಗಳಾದ ಜಿಶಾ, ಸರಿತಾ, ರಶ್ಮಿ, ಸುರೇಖಾ, ಲೀಲಾವತಿ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಅಲ್ಲಿಂದ ನಿಡಿಗಲ್ ಮಾರ್ಗವಾಗಿ ಉಜಿರೆಗೆ ಆಗಮಿಸಿ ಎಸ್ಡಿಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಆಸ್ಪತ್ರೆಗೆ ಭೇಟಿ ನೀಡಿದರು. ಅಲ್ಲಿನ ಡಯಾಲಿಸಿಸ್ ಕೇಂದ್ರವನ್ನೂ ವೀಕ್ಷಿಸಿ ಕ್ಷೇತ್ರದ ಸೇವಾ ವಿಶೇಷತೆಗಳ ಬಗ್ಗೆ ತಿಳಿದುಕೊಂಡರು.
ಉಜಿರೆಯ ಓಶಿಯನ್ ಪರ್ಲ್ ನಲ್ಲಿ ತಂಗಿದ ಅವರು ಇಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತಲುಪಲಿದ್ದಾರೆ.
ರಾಜಕಾರಣಿಯಾಗಿ, ಉದ್ಯಮಿಯಾಗಿ, ಶಿಕ್ಷಕರಾಗಿ, ವಕೀಲರಾಗಿ, ಅಂಕಣಕಾರರಾಗಿ, ಕವಿಯಾಗಿ ಬಹುವಿಧ ಪ್ರಕಾರಗಳಲ್ಲಿ ಗುರುತಿಸಿಕೊಂಡಿರುವ ತನ್ವೀರ್ ಅಹಮದ್ ಉಲ್ಲಾ ಅವರು ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಆಗಮಿಸಿದ, ಸರ್ವಧರ್ಮ ಸಮ್ಮೇಳನದ ಮೊದಲ ಅತಿಥಿಯಾಗಿ ಗುರುತಿಸಲ್ಪಟ್ಟಿದ್ದಾರೆ.











