ಮಂಗಳೂರು: ಇಂಡಸ್ ಟವರ್ಸ್ ಲಿಮಿಟೆಡ್ನ ಒಪ್ಪಂದ ಆಧಾರಿತ ಕಂಪನಿಯಲ್ಲಿ ಕೆಲಸ ಮಾಡುವ ಸುಮಾರು 150 ಕಾರ್ಮಿಕರು ಕಳೆದ ಹಲವು ತಿಂಗಳಿಂದ ವೇತನ ಹಾಗೂ ಕಾನೂನುಬದ್ಧ ಸೌಲಭ್ಯಗಳಿಂದ ವಂಚಿತರಾಗುತ್ತಿರುವ ಹಿನ್ನೆಲೆಯಲ್ಲಿ, ಮಂಗಳೂರು ಮಿನಿ ವಿಧಾನಸೌಧದ ಎದುರು ನಡೆಯುತ್ತಿರುವ ಶಾಂತಿಯುತ ಪ್ರತಿಭಟನೆಗೆ ಇಂದು ದಕ್ಷಿಣ ಕನ್ನಡ ಜಿಲ್ಲೆಯ BMS ಘಟಕ ಬೆಂಬಲ ನೀಡಿತು.
ಕಾರ್ಮಿಕರು 8–10 ತಿಂಗಳ ವೇತನ ಬಾಕಿ, ಬೋನಸ್, ಭತ್ಯೆಗಳು, ಸೇವಾಶುಲ್ಕ ನೀಡದಿರುವುದು, ESI–PF ಸೌಲಭ್ಯಗಳ ಜಾರಿಗೆ ಕಂಪೆನಿಯ ನಿರ್ಲಕ್ಷ್ಯ, ಸುರಕ್ಷತಾ ಸಾಧನಗಳ ಕೊರತೆ, ಹಾಗೂ ಕೆಲಸದ ಒತ್ತಡ ಮತ್ತು ಬೆದರಿಕೆ ಇತ್ಯಾದಿ ಗಂಭೀರ ಸಮಸ್ಯೆಗಳನ್ನು ಹೊಂಚಿಕೊಳ್ಳುತ್ತಿದ್ದಾರೆ. ಈ ಸಂಕಷ್ಟದಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದ್ದು, ಅನೇಕರು ಸಾಲದ ಅವಲಂಬಿತರಾಗಿರುವಂತ ಸ್ಥಿತಿ ಉಂಟಾಗಿದೆ.
ಇಂದು ನಡೆದ ಪ್ರತಿಭಟನೆಗೆ BMS ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅನಿಲ್ ಕುಮಾರ್ ಯು ನೇತೃತ್ವದ ತಂಡ ಹಾಜರಾಗಿ ಕಾರ್ಮಿಕರಿಗೆ ಧೈರ್ಯ ತುಂಬಿತು. ಪ್ರತಿಭಟನೆಯಲ್ಲಿ ಪಾಲ್ಗೊಂಡ ಅವರು ಮಾತನಾಡಿ, “ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ನಿರ್ಲಕ್ಷಿಸುವ ಯಾವುದೇ ಕಂಪನಿಯ ನೀತಿಯನ್ನು BMS ತೀವ್ರವಾಗಿ ಖಂಡಿಸುತ್ತದೆ. ಇಂಡಸ್ ಟವರ್ಸ್ ಕಾರ್ಮಿಕರಿಗೆ ಬಾಕಿ ಸಂಬಳ ಹಾಗೂ ಸೌಲಭ್ಯಗಳನ್ನು ತಕ್ಷಣ ಬಿಡುಗಡೆ ಮಾಡುವ ಬಗ್ಗೆ ಸಂಬಂಧಿತ ಇಲಾಖೆಗಳು ತುರ್ತು ಕ್ರಮ ಕೈಗೊಳ್ಳಬೇಕು,” ಎಂದು ಒತ್ತಾಯಿಸಿದರು. “ನ್ಯಾಯ ದೊರೆಯುವವರೆಗೂ ಇಂಡಸ್ ಟವರ್ಸ್ ಕಾರ್ಮಿಕರ ಹೋರಾಟದೊಂದಿಗೆ BMS ಜಿಲ್ಲಾ ಘಟಕ ನಿಲ್ಲುತ್ತದೆ.” ನಮ್ಮ ಕಾರ್ಮಿಕರಿಗೆ ಸರಿಯಾದ ರೀತಿಯಲ್ಲಿ ನ್ಯಾಯ ದೊರೆಯದೆ ಹೋದರೆ ಮುಂದಿನ ದಿನಗಳಲ್ಲಿ ನಮ್ಮ ಜಿಲ್ಲಾ ಘಟಕ ಕಡೆಯಿಂದ ಇಡೀ ಜಿಲ್ಲೆಯ ಎಲ್ಲಾ ಕಾರ್ಮಿಕರನ್ನು ಸೇರಿಸಿಕೊಂಡು ದೊಡ್ಡ ಮಟ್ಟದ ಹೋರಾಟ ಮಾಡಬೇಕಾಗಬಹುದು ಎಂಬ ಎಚ್ಚರಿಕೆ ಯನ್ನು ನೀಡಿದರು, ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿ ವರ್ಗಕ್ಕೆ, ಇಲಾಖೆಗೆ, ಕಂಪನಿಗೆ ಜಿಲ್ಲಾ ಬಿಎಂಎಸ್ ಕಡೆಯಿಂದ ಪ್ರತ್ಯೇಕ ಮನವಿ, ಅವರ ಜೊತೆ ಮಾತುಕತೆ, ಮಾಡುವ ಪ್ರಯತ್ನ ಮಾಡುತ್ತೇವೆ ಎಂದರು.
ಈ ಪ್ರತಿಭಟನೆಯಲ್ಲಿ BMS ರಾಜ್ಯ ಉಪಾಧ್ಯಕ್ಷ ಸತೀಶ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲ ಕೃಷ್ಣ, ಜಿಲ್ಲಾ ಉಪಾಧ್ಯಕ್ಷರಾದ ರೋಹಿತಾಶ್ವ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರ್ ನಾಥ ಉಜಿರೆ, ಜಿಲ್ಲಾ ಪ್ರಮುಖರಾದ ನಾರಾಯಣ ಪೂಜಾರಿ, ಶ್ರೀಕಾಂತ್ ಬಂಟ್ವಾಳ, ಸುದಿಂದ್ರ, ನವೀನ್ ಬಂಟ್ವಾಳ, BPTMS ಜಿಲ್ಲಾ ಅಧ್ಯಕ್ಷ ಯಶಪಾಲ್ ಸಾಲ್ಯಾನ್, ಕಾರ್ಯಕ್ರಮ
ಕಾರ್ಯದರ್ಶಿ ಶಿವರಾಮ್ ಮತ್ತು ನೂರಾರು ಕಾರ್ಮಿಕರು ಉಪಸ್ಥಿತರಿದ್ದರು.











