ಕಕ್ಕಿಂಜೆ : ಸರಕಾರಿ ಪ್ರೌಢಶಾಲೆ ಕಕ್ಕಿಂಜೆಯ ವಿದ್ಯಾರ್ಥಿನಿಯರಿಗಾಗಿ ಹದಿಹರೆಯದ ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯದ ಕುರಿತಾಗಿ ವಿಶೇಷ ಮಾಹಿತಿ ಕಾರ್ಯಾಗಾರವನ್ನು ನ.25 ರಂದು ಕಕ್ಕಿಂಜೆಯ ಶ್ರೀ ಕೃಷ್ಣ ಆಸ್ಪತ್ರೆಯ ಸಭಾಂಗಣದಲ್ಲಿ ಆಯೋಜಿಸಲಾಯಿತು. ಮಂಗಳೂರು ಕೆ.ಎಂ.ಸಿ.ಯ ತಜ್ಞ ವೈದ್ಯೆ ಡಾ. ಕಾರುಣ್ಯ ಅವರು ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಕಿಶೋರಿ ವಯಸ್ಸಿನಲ್ಲಿ ಕಾಣಿಸಿಕೊಳ್ಳುವ ಶಾರೀರಿಕ–ಮಾನಸಿಕ ಬದಲಾವಣೆಗಳು, ಆರೋಗ್ಯ ಸಮಸ್ಯೆಗಳು ಹಾಗೂ ಅವುಗಳ ಪರಿಹಾರ ಕ್ರಮಗಳ ಬಗ್ಗೆ ವಿದ್ಯಾರ್ಥಿನಿಯರಿಗೆ ಸ್ಪಷ್ಟ ಮತ್ತು ಪ್ರಾಯೋಗಿಕ ಮಾರ್ಗದರ್ಶನ ನೀಡಿದರು.

ಡಾ. ಕಾರುಣ್ಯ ಅವರು ತಿಂಗಳಿಗೆ ಒಮ್ಮೆ ಆಗುವ ಆರೋಗ್ಯ ಸಮಸ್ಯೆಗಳು, ಪೌಷ್ಠಿಕ ಆಹಾರದ ಅಗತ್ಯತೆ, ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ವಿಧಾನಗಳು ಮತ್ತು ಆತ್ಮರಕ್ಷಣೆ ಕುರಿತ ಮಾಹಿತಿಯನ್ನು ಉದಾಹರಣೆಗಳೊಂದಿಗೆ ವಿವರಿಸಿದರು. ವಿದ್ಯಾರ್ಥಿನಿಯರ ವಿವಿಧ ಪ್ರಶ್ನೆಗಳಿಗೆ ತಜ್ಞರು ಸಮರ್ಪಕ ಉತ್ತರ ನೀಡಿ ಜಾಗೃತಿ ಮೂಡಿಸಿದರು.
ಕಾರ್ಯಕ್ರಮವನ್ನು ಶ್ರೀಕೃಷ್ಣ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದು, ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಶಾಲೆಯ ಶಿಕ್ಷಕ ವೃಂದ ಕಾರ್ಯಗತಗೊಳಿಸಲು ಸಹಕರಿಸಿದರು. ವಿದ್ಯಾರ್ಥಿನಿಯರಲ್ಲಿ ಆರೋಗ್ಯ ಜಾಗೃತಿ ಬೆಳೆಸುವ ಉದ್ದೇಶಕ್ಕೆ ಈ ಕಾರ್ಯಕ್ರಮ ನೆರವಾದಂತಾಗಿದೆ ಎಂದು ಆಯೋಜಕರು ತಿಳಿಸಿದರು.











