ಬೆಳ್ತಂಗಡಿ: ಮಂಜು ಶ್ರೀ ಸೀನಿಯರ್ ಛೇಂಬರ್, ಇಂಡಿಯನ್ ರೆಡ್ಕ್ರಾಸ್ ಸೊಸೈಟಿ, ಲಯನ್ಸ್ ಕ್ಲಬ್, ವರ್ತಕರ ಸಂಘ, ಇಂಡಿಯನ್ ಡೆಂಟಲ್ ಎಸೋಸಿಯೇಶನ್, ಮಾಜಿ ಸೈನಿಕರ ಸಂಘ ಮತ್ತು ಮೊಬೈಲ್ ರಿಟೇಲರ್ಸ್ ಎಸೋಸಿಯೇಶನ್ ಬೆಳ್ತಂಗಡಿ ಇದರೆ ಸಂಯುಕ್ತ ಆಶ್ರಯದಲ್ಲಿ ಮಣಿಪಾಲದ ಕೆ.ಎಂ.ಸಿ ದಂತ ಮಹಾವಿದ್ಯಾಲಯದ ತಜ್ಞ ವೈದ್ಯರ ತಂಡದಿಂದ ಉಚಿತ ದಂತ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ಡಿ.20ರಂದು ಬೆಳ್ತಂಗಡಿ ಶ್ರೀ ಮಂಜುನಾಥೇಶ್ವರ ಸಭಾಭವನದಲ್ಲಿ ಜರುಗಿತು.

ಶಿಬಿರವನ್ನು ಬೆಳ್ತಂಗಡಿ ಉಪ ವಿಭಾಗ ಪೊಲೀಸ್ ಉಪ ಅಧೀಕ್ಷಕಿ ಸಿಕೆ ರೋಹಿಣಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಮಂಜುಶ್ರೀ ಸೀನಿಯರ್ ಚೇಂಬರ್ ಅಧ್ಯಕ್ಷ ಮಂಜುನಾಥ ರೈ ವಹಿಸಿದರು.
ಮುಖ್ಯ ಅತಿಥಿಗಳಾಗಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿಯ ಕಾರ್ಯಾಧ್ಯಕ್ಷ ಎಸ್ಎಂ ಹರಿದಾಸ್. ಬೆಳ್ತಂಗಡಿ ವರ್ತಕರ ಸಂಘದ ಅಧ್ಯಕ್ಷ ರೊನಾಲ್ಡ್ ಲೋಬೊ, ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಎಲೋಶಿಯಸ್ ಲೋಬೊ, ಲಯನ್ಸ್ ಕ್ಲಬ್ ಅಧ್ಯಕ್ಷ ಮುರಳಿ, ಬೆಳ್ತಂಗಡಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮೊಹಮ್ಮದ್ ರಫಿ, ಪುತ್ತೂರು ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಅಧ್ಯಕ್ಷೆ ಡಾ. ಆಶಾ ರಾಘವೇಂದ್ರ, ಬೆಳ್ತಂಗಡಿ ಮೊಬೈಲ್ ರಿಟೇಲರ್ ಎಸೋಸಿಯೇಶನ್ ಅಧ್ಯಕ್ಷ ಹರೀಶ್ ಕುಮಾರ್ ಉಪಸ್ಥಿತರಿದ್ದರು.

ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಚೇಂಬರ್ ಸ್ಥಾಪಕ ಅಧ್ಯಕ್ಷ ಪ್ರಮೋದ್ ಆರ್ ನಾಯಕ್ ಸ್ವಾಗತ ಮತ್ತುಕಾರ್ಯಕ್ರಮ ನಿರೂಪಿಸಿ, ಸೀನಿಯರ್ ಉಮೇಶ್ ಧನ್ಯವಾದವಿತ್ತರು.
ಶಿಬಿರದಲ್ಲಿ ಬಾಯಿ ಮತ್ತು ಹಲ್ಲುಗಳ ಸಂಪೂರ್ಣ ತಪಾಸಣೆ ಹಾಗೂ ಚಿಕಿತ್ಸೆ, ಹಲ್ಲುಗಳು ಸ್ವಚ್ಛಗೊಳಿಸುವಿಕೆ, ಅನಾರೋಗ್ಯಕರವಾದ ಉಳಿಸಲಾಗದ ಹಲ್ಲುಗಳನ್ನು ಕೀಳುವುದು, ಹುಳುಕು ಹಲ್ಲುಗಳನ್ನು ಔಷಧಿ ಸಿಮೆಂಟಿನಿಂದ ತುಂಬಿಸುವಿಕೆ, ಬಾಯಲ್ಲಿ ಇರಬಹುದಾದ ಇತರೆ ಸಣ್ಣ ಪುಟ್ಟ ಗಡ್ಡೆಯ ನ್ಯೂನ್ಯತೆಗಳಿಗೆ ಸರಳ ಶಸ್ತ್ರ ಚಿಕಿತ್ಸೆ ಒದಗಿಸಲಾಯಿತು. ಅಲ್ಲದೆ ಮಕ್ಕಳಿಗಾಗಿ ವಿಶೇಷ ತಪಾಸಣೆ ನಡೆಯಿತು. ಶಿಬಿರದಲ್ಲಿ 100 ಕ್ಕೂ ಅಧಿಕ ಮಂದಿ ಈ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.











