ಉಜಿರೆ: ಬೆಳ್ತಂಗಡಿ ತಾಲೂಕು ಕಾನೂನು ಸೇವೆಗಳ ಸಮಿತಿ,, ವಕೀಲರ ಸಂಘ ಬೆಳ್ತಂಗಡಿ, ಹಾಗೂ ಬೆನಕ ಆಸ್ಪತ್ರೆ, ಉಜಿರೆ ಇವರ ಸಂಯುಕ್ತ ಆಶ್ರಯದಲ್ಲಿ ಕಾನೂನು ಅರಿವು ಕಾರ್ಯಕ್ರಮ ಬೆನಕ ಆಸ್ಪತ್ರೆಯ ವಠಾರದಲ್ಲಿ ಡಿ.23 ರಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ವಿಜಯೇಂದ್ರ ಟಿ. ಹೆಚ್. ನೆರವೇರಿಸಿ ಮಾತನಾಡಿ ಕಾರ್ಯಕ್ರಮವು ಪ್ರತ್ಪಥಮವಾಗಿ ಆಸ್ಪತ್ರೆಯ ವಠಾರದಲ್ಲಿ ಆಗಿದ್ದು ವೈದ್ಯರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಕಾನೂನಿನ ಅರಿವು ಅಗತ್ಯ. ಅರಿವು ಇದ್ದಲ್ಲಿ ಮಾತ್ರ ಈ ಒಂದು ಸಂಸ್ಥೆ ನಡೆಸಲು ಸಾಧ್ಯ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಗೋಪಾಲಕೃಷ್ಣ ಕೆ ವಹಿಸಿ ಆಸ್ಪತ್ರೆಯ ವಠಾರದಲ್ಲಿ ಕಾನೂನಿನ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಕ್ಕೆ ವಕೀಲರ ಸಂಘಕ್ಕೆ ಹಾಗೂ ನ್ಯಾಯಾಲಯದ ನ್ಯಾಯಾಧೀಶರಿಗೆ ಧನ್ಯವಾದ ಸಲ್ಲಿಸಿದರು.

ಮುಖ್ಯ ಅತಿಥಿಗಳಾಗಿ ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್ ಎಸ್ ಲೋಬೋ ಮಾತನಾಡಿ ಅದ್ಭುತವಾದ ಕಾರ್ಯಕ್ರಮ ಪ್ರಥಮ ಬಾರಿಗೆ ಆಸ್ಪತ್ರೆಯ ವಠಾರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಆಸ್ಪತ್ರೆಯು ನಮ್ಮ ತಾಲೂಕಿನಾದ್ಯಂತ ಹೆಸರುವಾಸಿಯಾದ ಆಸ್ಪತ್ರೆಯಾಗಿದೆ. ಆಸ್ಪತ್ರೆಯ ವಠಾರವನ್ನು ನೋಡಿದಾಗಲೇ ಬರುವ ರೋಗಿಗಳ ಕಾಯಿಲೆ ಗುಣಮುಖವಾಗುತ್ತದೆ ಹಾಗೂ ಒಳ್ಳೆಯ ಸಂಬಂಧವನ್ನು ಗೋಪಾಲಕೃಷ್ಣ ಕ. ಅವರು ಇಟ್ಟುಕೊಂಡಿದ್ದಾರೆ. ಹೆಚ್ಚುವರಿ ವೈದ್ಯರನ್ನು ಅವರು ತರಿಸಿರುವುದರಿಂದ ಈ ಆಸ್ಪತ್ರೆಯಲ್ಲಿ 107 ಬೆಡ್ ಈಗ ಇದೆ. ಇನ್ನು ಮುಂದಕ್ಕೆ ಅದು 507 ಬೆಡ್ ಆಗಿ ಪರಿವರ್ತನೆಗೊಂಡು ಒಂದು ಒಳ್ಳೆಯ ಆಸ್ಪತ್ರೆಯಾಗಿ ಮೂಡಿ ಬರಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ವಕೀಲರ ಸಂಘ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ, ರವರು ಕಾನೂನು ಮಾಹಿತಿ ನೀಡಿ ನಮ್ಮ ವಕೀಲರ ಸಂಘದಲ್ಲಿ ಕೆಲವೊಂದು ಕಾನೂನು ಸೇವೆಗಳು ಉಚಿತವಾಗಿ ಲಭ್ಯವಿದೆ. ಹಾಗೂ ನ್ಯಾಯಾಲಯದಲ್ಲಿ ಇದರ ಸದುಪಯೋಗವನ್ನು ಪಡೆದು ಕೊಳ್ಳಬೇಕೆಂದು ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರು ಶ್ರೀಮತಿ ಆರ್ ಸುಭಾಷಿಣಿ ರವರು ವಿಶ್ವ ಏಡ್ಸ್ ದಿನಾಚರಣೆ ಕುರಿತು ಕಾನೂನು ಮಾಹಿತಿ ನೀಡಿದರು.
ಸಂಸ್ಥೆಯ ಪಿಆರ್ ಒ ಕಾರ್ಯಕ್ರಮ ನಿರೂಪಿಸಿ, ವಕೀಲರ ಸಂಘ ಕೋಶಾಧಿಕಾರಿ ಶ್ರೀಮತಿ ಮುಮ್ತಾಜ್ ಬೇಗಂ ಧನ್ಯವಾದವಿತ್ತರು.











