ಬೆಳ್ತಂಗಡಿ: ಗ್ರಾಮ ಮಟ್ಟಕ್ಕೆ ತಾಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಜನಸ್ಪಂದನ ಸಭೆ ಎಲ್ಲಾ ಗ್ರಾಮ ಪಂಚಾಯತ್ಗಳಲ್ಲಿ ಸಂಪೂರ್ಣಗೊಳ್ಳುವ ಹೊಸ್ತಿಲಿನಲ್ಲಿದೆ. ಕಳೆದ ಡಿಸೆಂಬರ್ನಲ್ಲಿ ಆರಂಭಗೊಂಡ ಸಭೆ ದಿವಸಕ್ಕೆ ನಾಲ್ಕರಂತೆ ಈಗಾಗಲೇ 36 ಗ್ರಾಮ ಪಂಚಾಯತ್ಗಳಲ್ಲಿ ನಡೆದಿದೆ. ಶಾಸಕರೊಂದಿಗೆ, 20ಕ್ಕೂ ಮಿಕ್ಕಿ ಇಲಾಖೆಯ ವಾಹನಗಳಲ್ಲಿ ಅಧಿಕಾರಿಗಳು ಮುಂದಿನ ಮೂರು ದಿನ ನಿರಂತರ ಮ್ಯಾರಥನ್ ನಡೆಸಲಿದ್ದಾರೆ.
ಜನರೆಡೆಗೆ ತಾಲೂಕು ಆಡಳಿತ ಎಂಬ ಕಲ್ಪನೆಯೊಂದಿಗೆ ಗ್ರಾಮ ಮಟ್ಟಕ್ಕೆ ತಾಲೂಕು ಮಟ್ಟದ ಅಧಿಕಾರಿಗಳು ಜೊತೆ ಆಗಮಿಸಿ ಜನಸಾಮಾನ್ಯರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಪರಿಹಾರ ಒದಗಿಸುವ ಪ್ರಯತ್ನ ಜನ ಸ್ಪಂದನ ಮೂಲಕ ನಡೆಸಲಾಗುವುದು. ಈ ಸಭೆ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಕುಕ್ಕೇಡಿ, ಆರಂಬೋಡಿ, ಹೊಸಂಗಡಿ ಹಾಗೂ ಮರೋಡಿಯಲ್ಲಿ ಡಿ.24ರಂದು ನಡೆದ ಗ್ರಾಮ ಪಂಚಾಯತ್ ಮಟ್ಟದ ಜನಸ್ಪಂದನ ಸಭೆಯಲ್ಲಿ ಸಭೆ ಉದ್ಘಾಟಿಸಿ ಮಾತನಾಡಿದರು. ೯/೧೧ ಸಮಸ್ಯೆ ಸರಳೀಕರಣ, ಅಕ್ರಮ-ಸಕ್ರಮ ಕಡತ ವಿಲೇ ಪ್ಲಾಟಿಂಗ್, ಅಪಾಯಕಾರಿ ಮರ ತೆರವು, ರಸ್ತೆ ದುರಸ್ತಿ, ನ್ಯಾಯಬೆಲೆ ಅಂಗಡಿ, ಕಾಡು ಪ್ರಾಣಿ ಉಪಟಳ, ಹಳೆಯ ವಿದ್ಯುತ್ ತಂತಿ ಬದಲಾವಣೆ, ಸಾರಿಗೆ ಬಸ್ ಸೌಲಭ್ಯ, ಸಾಂಪ್ರಾದಾಯಿಕ ಕೋಳಿ ಅಂಕಕ್ಕೆ ಅನುಮತಿ ಸಹಿತ ವಿವಿಧ ಸಮಸ್ಯೆಗಳ ಕುರಿತು ಗ್ರಾಮಸ್ಥರ ಗಮನಕ್ಕೆ ತಂದರು. ವಿವಿಧ ಬೇಡಿಕೆಗಳ ಅಹವಾಲುನ್ನು ಶಾಸಕರು ನಾಗರೀಕರಿಂದ ಪಡೆದುಕೊಂಡರು.
ತಹಶೀಲ್ದಾರ್ ಪ್ರಥ್ವಿ ಸಾನಿಕಂ, ತಾಲೂಕು ಪಂಚಾಯತ್ ಇಓ ಭವಾನಿಶಂಕರ್ ಎನ್, ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಇಲಾಖಾಧಿಕಾರಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಮ್ಯಾರಥನ್ ಜನಸ್ಪಂದನ ಸಭೆ: ಡಿ.26ರಂದು ಲಾಯಿಲ, ನಾವೂರು, ಮಲವಂತಿಗೆ ಹಾಗೂ ಕಡಿರುದ್ಯಾವರ, ಡಿ.30 ರಂದು ನಿಡ್ಲೆ, ಅರಸಿನಮಕ್ಕಿ, ಶಿಶಿಲ ಹಾಗೂ ಶಿಬಾಜೆ, ಡಿ.31 ರಂದು ತೆಕ್ಕಾರು, ತಣ್ಣೀರುಪಂತ, ಕಣಿಯೂರು ಹಾಗೂ ಕೊಯ್ಯುರು ಗ್ರಾಮ ಪಂಚಾಯತ್ ಮಟ್ಟದ ಜನಸ್ಪಂದನ ಸಭೆ ನಡೆಯಲಿದೆ.











